ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್‌ನವರು ಹೇಳಿದನ್ನೇ ಬಿಜೆಪಿಗರು ಮಾಡುತ್ತಾರೆ: ಶಿವರಾಮೇಗೌಡ

| Published : Oct 25 2025, 01:00 AM IST

ಅಧಿಕಾರಕ್ಕೆ ಬಂದರೆ ಆರ್‌ಎಸ್‌ಎಸ್‌ನವರು ಹೇಳಿದನ್ನೇ ಬಿಜೆಪಿಗರು ಮಾಡುತ್ತಾರೆ: ಶಿವರಾಮೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸಿಎಂ ಸಿದ್ದರಾಮಯ್ಯ ಸ್ಥಾನಕ್ಕೆ ಸತೀಶ್‌ ಜಾರಕಿಹೊಳಿ ಸೂಕ್ತ ಅಭ್ಯರ್ಥಿ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಸಂಬಂಧಿಸಿದಂತೆ ನಾನು ಪ್ರತಿಕ್ರಿಯಿಸುವುದಿಲ್ಲ. ಯಾರು ಮುಖ್ಯಮಂತ್ರಿಯಾಗಬೇಕೆಂದು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಆದರೆ, ಯತೀಂದ್ರ ಅವರು ಯಾವ ಕಾರಣಕ್ಕೆ ಹೇಳಿಕೆ ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಆರ್‌ಎಸ್‌ಎಸ್‌ಗೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುವ ಬಿಜೆಪಿ ನಾಯಕರು ಅಧಿಕಾರಕ್ಕೆ ಬಂದ ನಂತರ ಆರ್‌ಎಸ್‌ಎಸ್‌ನವರು ಹೇಳಿದನ್ನೇ ಮಾಡುತ್ತಾರೆ. ನಾಗಪೂರ್‌ನಲ್ಲಿ ಕೊಡುವ ಆದೇಶದ ಮೂಲಕವೇ ಇಡೀ ದೇಶದಲ್ಲಿ ಅಧಿಕಾರ ನಡೆಯುತ್ತದೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಎಲ್.ಆರ್.ಶಿವರಾಮೇಗೌಡ ದೂರಿದರು.

ಪಟ್ಟಣದ ಟಿ.ಬಿ.ಬಡಾವಣೆಯ ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕೃತವಾಗಿ ನೋಂದಣಿಯಾಗದ ಆರ್‌ಎಸ್‌ಎಸ್ ಇಡೀ ದೇಶದಲ್ಲಿ ಪ್ರಭಲವಾಗಿದೆ. ಈ ಸಂಘಟನೆಯನ್ನು ನಿಷೇಧಿಸಬೇಕೆಂದು ಪ್ರಿಯಾಂಕ್‌ ಖರ್ಗೆ ಸೇರಿದಂತೆ ಯಾರೂ ಸಹ ಹೇಳಿಲ್ಲ. ಆದರೆ, ನಿಯಮಗಳೊಂದಿಗೆ ಕಡಿವಾಣ ಹಾಕಬೇಕು ಎನ್ನುತ್ತಿರುವ ಕಾಂಗ್ರೆಸ್ ನಾಯಕರ ಪ್ರಶ್ನೆಗೆ ಬಿಜೆಪಿ ನಾಯಕರಿಂದ ಉತ್ತರವಿಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ಸ್ಥಾನಕ್ಕೆ ಸತೀಶ್‌ ಜಾರಕಿಹೊಳಿ ಸೂಕ್ತ ಅಭ್ಯರ್ಥಿ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಸಂಬಂಧಿಸಿದಂತೆ ನಾನು ಪ್ರತಿಕ್ರಿಯಿಸುವುದಿಲ್ಲ. ಯಾರು ಮುಖ್ಯಮಂತ್ರಿಯಾಗಬೇಕೆಂದು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಆದರೆ, ಯತೀಂದ್ರ ಅವರು ಯಾವ ಕಾರಣಕ್ಕೆ ಹೇಳಿಕೆ ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ. ಸಿಎಂ ಪುತ್ರನ ಹೇಳಿಕೆಗೆ ಬಹಳ ಜವಾಬ್ದಾರಿ ಇರುತ್ತದೆ. ಈ ರೀತಿ ಹೇಳಿಕೆ ನೀಡುತ್ತಾರೆಂದು ಅಂದುಕೊಂಡಿರಲಿಲ್ಲ. ಯತೀಂದ್ರ ಹೇಳಿಕೆ ಸಿಎಂ ಸಿದ್ದರಾಮಯ್ಯ ಅವರಿಗೆ ಬೇಸರ ತರಿಸುವಂತದ್ದು ಎಂದರು.

ಎಚ್.ಡಿ.ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿದ್ದು ಮ್ಯಾಜಿಕ್‌ನಿಂದಲೇ ಹೊರತು ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರಲಿಲ್ಲ. ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡ ನಂತರ ಜೆಡಿಎಸ್ ಪಕ್ಷ ಮಾಯವಾಗಿತ್ತು. ಹೊಂದಾಣಿಕೆ ಸರಿಯೋ ತಪ್ಪೋ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅರಿವಾಗಿ ಯೋಜಿಸುತ್ತಿದ್ದಾರೆ ಎಂದರು.

ಈ ಹಿಂದೆ ಎಚ್.ಡಿ.ದೇವೇಗೌಡರ ಹೋರಾಟದ ಫಲವಾಗಿ ರಾಜ್ಯದ ಜನ ಅಂದಿನ ಕಾಲದಲ್ಲಿ ಜೆಡಿಎಸ್‌ಗೆ ಅಧಿಕಾರ ಕೊಟ್ಟಿದ್ದರು. ದೇವೇಗೌಡರು ರಾಜ್ಯ ಪ್ರವಾಸ ಮಾಡಿದಾಗಲೇ ಜೆಡಿಎಸ್‌ಗೆ 150 ಸ್ಥಾನ ಬರಲಿಲ್ಲ. ಈಗ ನಿಖಿಲ್ ಕುಮಾರಸ್ವಾಮಿ ರಾಜ್ಯ ಪ್ರವಾಸ ಮಾಡಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಿದರಕೆರೆ ಮಂಜೇಗೌಡ, ಲಾರಿ ಚನ್ನಪ್ಪ, ಚಿಣ್ಯ ಕರಿಯಣ್ಣ, ತೊಳಲಿ ಕೃಷ್ಣಮೂರ್ತಿ, ನರಸಿಂಹ, ರಮೇಶ್, ಸೋಮಶೇಖರ್, ಲೋಕೇಶ್, ಹೇಮರಾಜು, ಚೇತನ್ ಸೇರಿದಂತೆ ಹಲವರು ಇದ್ದರು.