ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಟ್ರಂಪ್ ಮತ್ತು ಕೊಮೇನಿಗೆ ಕನಿಷ್ಟ ಬುದ್ಧನ ತತ್ವಗಳ ಅರಿವಿದ್ದಿದ್ದರೆ ಆ ನೆಲ ರಕ್ತದಿಂದ ತೊಯ್ಯುತ್ತಿರಲಿಲ್ಲ ಎಂದು ಎದ್ದೇಳು ಕರ್ನಾಟಕ ಜಿಲ್ಲಾಧ್ಯಕ್ಷ ಯಾದವ ರೆಡ್ಡಿ ಅವರು ಹೇಳಿದರು.ಕೋಟೆನಾಡು ಬುದ್ಧ ವಿಹಾರದಲ್ಲಿ ನಡೆದ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಗವಾನ್ ಬುದ್ಧರು ಮದುವೆಯನ್ನು ಒಂದು ಧಾರ್ಮಿಕ ಕ್ರಿಯೆಗಾಗಿ ಪರಿಗಣಿಸಲಿಲ್ಲ, ಇದೊಂದು ಸಮಾಜ ಬೆಳವಣಿಗೆಯ ಕ್ರಿಯೆಯೆಂದು ಭಾವಿಸಿದ್ದರು. ಹಾಗಾಗಿ ಹೆಣ್ಣಿನ ಕನ್ಯತ್ವ, ಶೀಲ, ಪತಿವ್ರತೆ ತನದ ಬಗ್ಗೆ ಹೆಚ್ಚಿನದಾಗಿ ಮಾತನಾಡದೆ ಇದೊಂದು ಸಮಾಜ ಬೆಳವಣಿಗೆಯ ಪ್ರಕ್ರಿಯೆ ಎಂದು ತಿಳಿದಿದ್ದರು.
ಬುದ್ಧ ಎಂದೂ ತಾನು ಬೋಧಿಸಿದ್ದೆ ಸತ್ಯವೆಂದು ಮತ್ತು ಅಂತಿಮವೆಂದು ಹೇಳಲಿಲ್ಲ. ಇದು ಈ ಕ್ಷಣದ ಸತ್ಯ ಮಾತ್ರ ಮತ್ತು ಪರಿಶೀಲಿಸದೆ ನಂಬಬೇಡಿ ಎಂದಿದ್ದಾನೆ. ಪ್ರಪಂಚದ ಸಮಸ್ಯೆಗಳ ಬಗೆ ಹರಿಯುವಿಕೆಗೆ ಇಂದು ಯಾವ ಸಿದ್ಧಾಂತಗಳು ಕೆಲಸ ಮಾಡುತ್ತಿಲ್ಲ. ಆದರೆ ಬುದ್ಧ ಮಾರ್ಗ ಒಂದರಿಂದಲೇ ಪ್ರಪಂಚದ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿದೆ ಎಂದು ಬಲವಾಗಿ ಪ್ರತಿಪಾದಿಸಿದರು. ಬುದ್ಧಧರ್ಮ ಬೋಧಕ ಮಾತ್ರನಾಗಿರದೆ ಮನಸ್ಸಿನೊಂದಿಗೆ ಮಾತನಾಡಿದ ಮೊದಲ ಮನೋವಿಜ್ಞಾನಿ ಎಂದರು.ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ, ಅಂಬೇಡ್ಕರ್ ಅವರಿಂದ ಪ್ರೇರಣೆಗೊಂಡು ಬೌದ್ಧರಾಗಿರುವ ನವಬೌದ್ಧರು ದಮ್ಮದ ಆಚರಣೆಯ ಸಂಕೀರ್ಣತೆಯ ಬಗ್ಗೆ ಹೆಚ್ಚು ಗೊಂದಲ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಬಾಬಾ ಸಾಹೇಬರು ಬಂತೇಜಿಗಳು ಇಲ್ಲದ ಸಂದರ್ಭದಲ್ಲಿ ಉಪಾಸಕರು ತಾವೇ ಬಂತೇಜಿಗಳ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಜನರನ್ನು ಬೌದ್ಧರ ತತ್ವಗಳನ್ನು ಬೋಧಿಸಬೇಕೆಂದು ಹೇಳಿದ್ದಾರೆ ವಿನಹ ಬಂತೇಜಿಗಳೇ ಬೇಡವೆಂದು ಹೇಳಿಲ್ಲವೆಂದರು.
ಬೌದ್ಧ ಧರ್ಮದ ಪಂಚಶೀಲ ಧ್ವಜ ಇಲ್ಲವಾದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೌದ್ಧರೆಲ್ಲರೂ ನಾವು ಒಂದೇ ಎಂದು ಗುರುತಿಸಿಕೊಳ್ಳಲು ಯಾವುದೇ ಸಂಕೇತ ಇಲ್ಲವಾಗುತ್ತದೆ. ಅಲ್ಲದೆ ಬುದ್ಧರು ಜ್ಞಾನೋದಯ ಪಡೆದ ಸಂದರ್ಭದಲ್ಲಿ ಅವರ ದೇಹದಿಂದ ಹೊರಟ ಬಣ್ಣಗಳೆ ಪಂಚ ಪಂಚಶೀಲ ಧ್ವಜದ ಬಣ್ಣಗಳು ಎಂಬುದು ಬೌದ್ಧರ ನಂಬಿಕೆಯಾಗಿರುವದರಿಂದ ಬೌದ್ಧರಿಗೆ ಪಂಚಶೀಲಾ ಧ್ವಜ ಅವಶ್ಯಕವಾಗಿದೆ. ಬೌದ್ಧ ಧರ್ಮ ಹುಟ್ಟಿ 650 ವರ್ಷಗಳ ನಂತರ ಬುದ್ಧನ ಆಕೃತಿಗಳ ರಚನೆ ಆಗಿರುವುದರಿಂದ ಬುದ್ಧನ ಚಿತ್ರಗಳಲ್ಲಿ ಸಾಮ್ಯತೆ ಇಲ್ಲವೆಂದು ಬಾಬಾ ಸಾಹೇಬರೇ ಹೇಳಿರುವುದರಿಂದ ಕಣ್ಣುಮುಚ್ಚಿರುವ ಬುದ್ಧ, ಕಣ್ಣು ಬಿಟ್ಟಿರುವ ಬುದ್ಧ ಎಂದು ನವ ಬೌದ್ಧರು ತಾಕಲಾಟಕ್ಕೆ ಎಡೆ ಮಾಡಿಕೊಡಬಾರದೆಂದರು.
ಬುದ್ಧ ಭೋಧಿಸಿರುವ ಧ್ಯಾನ ಪ್ರಕಾರಗಳಲ್ಲಿ ವಿಪಷನ ಅತ್ಯುನ್ನತ ಧ್ಯಾನ ಮಾರ್ಗವಾಗಿದೆ. ಪ್ರಪಂಚದಲ್ಲಿ ಭೌಗೋಳಿಕ ಪರಿಸ್ಥಿತಿಗಳಿಗನುಗುಣವಾಗಿ ಸ್ಥಳೀಯ ಬೌದ್ಧ ಆಚರಣೆಗಳು ಬುದ್ಧನ ಬೋದನೆಯ ಮೂಲ ಆಶಯಗಳಿಗೆ ದಕ್ಕೆ ಬರದಂತೆ ನಡೆನುಡಿಯಲ್ಲಿ ದಮ್ಮ ಪಾಲನೆ ಮಾಡುವುದು ಅವಶ್ಯಕವಾಗಿದೆ ಎಂದರು.
ನ್ಯಾಯವಾದಿ ಬಿಸನಹಳ್ಳಿ ಜಯ್ಯಪ್ಪ, ದಲಿತ ಮುಖಂಡ ಭೀಮನಕೆರೆ ಶಿವಮೂರ್ತಿ, ಬಿಎಸ್ಪಿ ಜಿಲ್ಲಾಧ್ಯಕ್ಷ ಪ್ರಕಾಶ್, ಉಪನ್ಯಾಸಕ ನಾಗೇಂದ್ರಪ್ಪ ಮಾತನಾಡಿದರು. ಉಪಾಸಕಿ ಲಕ್ಷ್ಮೀದೇವಿ, ಬಿಎಸ್ಐ ರವಿಕುಮಾರ್, ಜಂಬೂ ದ್ವೀಪ ಹನುಮಂತಪ್ಪ, ಬೆಸ್ಕಾಂ ತಿಪ್ಪೇಸ್ವಾಮಿ, ಉಷಾ ಲಾವಣ್ಯ ಮುಂತಾದವರು ಉಪಸ್ಥಿತರಿದ್ದರು.