ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮಾಜಿ ಸಂಸದ ದಿ.ಜಿ.ಮಾದೇಗೌಡರು ಶಿಕ್ಷಣ ಸಂಸ್ಥೆ ಕಟ್ಟದಿದ್ದರೆ ನನ್ನಂತಹ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಸಸ್ಯಶಾಸ್ತ್ರ ಅಧ್ಯಯನ ಮಂಡಳಿ ಚೇರ್ಮನ್ ಡಾ.ಕೆ.ಎಸ್. ಅಮೃತೇಶ್ ಹೇಳಿದರು.ಭಾರತೀ ವಿದ್ಯಾ ಸಂಸ್ಥೆಯ ಕುವೆಂಪು ಸಭಾಂಗಣದಲ್ಲಿ ಭಾರತೀ ಪಿಯು ಕಾಲೇಜಿನ ವತಿಯಿಂದ ಕಲಾ ಮತ್ತು ವಾಣಿಜ್ಯ ವಿಭಾಗದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಹಲವು ದಶಕಗಳ ಹಿಂದೆ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಗಗನ ಕುಸುಮವಾಗಿತ್ತು. ನಗರ ಪ್ರದೇಶಕ್ಕೆ ತೆರಳಿ ದುಬಾರಿ ಹಣ ನೀಡಿ ಶಿಕ್ಷಣ ಪಡೆಯುವ ಶಕ್ತಿ ಇರಲಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಗೌಡರು ಶಿಕ್ಷಣ ಸಂಸ್ಥೆ ತೆರೆದು ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಜೀವಿನಿ ನೀಡಿದ ಮಹಾನ್ ಚೇತನರಾಗಿದ್ದಾರೆ ಎಂದು ಬಣ್ಣಿಸಿದರು.ಹಲವು ಶಿಕ್ಷಣ ಸಂಸ್ಥೆಗಳನ್ನು ತೆರೆದು ಜ್ಞಾನದ ದೀವಿಗೆ ಉಣ ಬಡಿಸಿದ ಗೌಡರ ಕಾರ್ಯ ಅನನ್ಯವಾಗಿದೆ. ಅದನ್ನು ಪುತ್ರ, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮುಂದುವರಿಸುತ್ತಿದ್ದು, ಭಾರತೀ ವಿದ್ಯಾ ಸಂಸ್ಥೆ ರಾಜ್ಯದಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ನಿಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಮೊಬೈಲ್ ಒಂದು ಕಾಲಹರಣ ಸಾಧನವಾಗಿದೆ. ಮೊಬೈಲ್ ಅನ್ನು ಅದ್ಭುತವಾದ ಕಲಿಕಾ ಯಂತ್ರವಾಗಿ ವಿದ್ಯಾರ್ಥಿಗಳು ಬದಲಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜಿ.ಮಾದೇಗೌಡ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಿ.ಆರ್. ಚಂದನ್ ಮಾತನಾಡಿ, ಗ್ರಾಮಾಂತರ ವಿದ್ಯಾರ್ಥಿಗಳಿಗೆ ಯಾವುದೇ ಡೋನೆಷನ್ ಪಡೆಯದೇ ಅತೀ ಕಡಿಮೆ ಶುಲ್ಕದಲ್ಲಿ ಇಂಜಿನಿಯರಿಂಗ್ ಪ್ರವೇಶ ನೀಡುತ್ತಿರುವ ಕಾಲೇಜನ್ನು ಸ್ಥಾಪಿಸಿ ಹಳ್ಳಿಗಾಡಿನ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ತಮ್ಮ ಜೀವಿತಾವಧಿ ಶ್ರಮಿಸಿದ ಜಿ.ಮಾದೇಗೌಡರನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ನೆನೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತಾಧಿಕಾರಿ ಪ್ರೊ.ಎಸ್.ಜವರೇಗೌಡ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಜಿ.ಬಿ.ಪಲ್ಲವಿ. ಸಾಂಸ್ಕೃತಿಕ ಸಂಚಾಲಕ ಚೇತನ್ ಜುಂಜಿರ್, ಎ.ಸಿ.ಮಾನಸ, ಬಿ.ಕೆ.ಮಹದೇವು, ಸಿ.ಯು. ಕುಮಾರ್, ಸಿ.ಎಸ್. ಶೋಭ, ಡಿ.ಈ. ಹರೀಶ್, ಪ್ರೀತಿ, ಅಕ್ಷತಾ ಸೇರಿದಂತೆ ಹಲವರಿದ್ದರು.