ಇಕ್ಬಾಲ್ ಹುಸೇನ್ ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬರಲಿ: ಎ.ಮಂಜುನಾಥ್

| Published : Jun 25 2025, 11:47 PM IST

ಇಕ್ಬಾಲ್ ಹುಸೇನ್ ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬರಲಿ: ಎ.ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಎರಡೂವರೆ ವರ್ಷಗಳಲ್ಲಿ ಶಾಸಕ ಇಕ್ಬಾಲ್ ಹುಸೇನ್ ಒಂದು ಕೆರೆಗೆ ನೀರು ತುಂಬಿಸಲಿಲ್ಲ. ಬಡವರಿಗೆ ಮನೆ ನೀಡಲಿಲ್ಲ, ಸುಸಜ್ಜಿತ ರಸ್ತೆ ನಿರ್ಮಾಣ ಮಾಡಲಿಲ್ಲ ಎಂದು ಟೀಕಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕುಟುಂಬದವರು ರಾಮನಗರ ಕ್ಷೇತ್ರವನ್ನು ಪ್ರತಿನಿಧಿಸಿದಾಗ ಏನೆಲ್ಲ ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂಬುದರ ಕುರಿತು ಬಹಿರಂಗವಾಗಿ ಚರ್ಚೆಗೆ ನಾವು ಸಿದ್ಧವಿದ್ದೇವೆ ಎಂದು ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮಾಜಿ ಶಾಸಕ ಎ.ಮಂಜುನಾಥ್ ಪಂಥಾಹ್ವಾನ ನೀಡಿದರು.ನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ಜಾ.ದಳ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಮಾತನಾಡಿದ ಅವರು, ಎರಡೂವರೆ ವರ್ಷಗಳಲ್ಲಿ ಶಾಸಕ ಇಕ್ಬಾಲ್ ಹುಸೇನ್ ಒಂದು ಕೆರೆಗೆ ನೀರು ತುಂಬಿಸಲಿಲ್ಲ. ಬಡವರಿಗೆ ಮನೆ ನೀಡಲಿಲ್ಲ, ಸುಸಜ್ಜಿತ ರಸ್ತೆ ನಿರ್ಮಾಣ ಮಾಡಲಿಲ್ಲ ಎಂದು ಟೀಕಿಸಿದರು.ನಾಯಕರಾದ ಕುಮಾರಸ್ವಾಮಿ ಅವರಾಗಲಿ ಅಥವಾ ನಾನಾಗಲಿ ಶಾಸಕ ಇಕ್ಬಾಲ್ ಹುಸೇನ್ ಅವರಂತೆ ಕಳ್ ಬಿಲ್ ಮಾಡಿ ಅನುದಾನ ಲಪಟಾಯಿಸಿಲ್ಲ. ಬಡವರ ಜಮೀನನ್ನು ಕಸಿಯುವ ಕೆಲಸ ಮಾಡಿಲ್ಲ. ಇದನ್ನು ಪಕ್ಷದ ಕಾರ್ಯಕರ್ತರು ಎದೆ ತಟ್ಟಿ ಹೇಳಿಕೊಳ್ಳಬಹುದು. ಶಾಸಕ ಇಕ್ಬಾಲ್ ಅವರಿಗೆ ತಾಕತ್ತಿದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.ಈ ಜಿಲ್ಲೆಯ ಮೇಲಿನ ಪ್ರೀತಿಯಿಂದಾಗಿಯೇ ಕುಮಾರಸ್ವಾಮಿರವರು ರಾಮನಗರವನ್ನು ಜಿಲ್ಲೆಯನ್ನಾಗಿ ಮಾಡಿದರು. ರೈತರು ಹಾಗೂ ಜನ ಸಾಮಾನ್ಯರು ಕೆಲಸ ಕಾರ್ಯಗಳಿಗೆ ಬೆಂಗಳೂರಿಗೆ ಅಲೆದಾಡಬಾರದೆಂದು ಜಿಲ್ಲೆ ಮಾಡಿದರು. ಆಡಳಿತವನ್ನು ಜನ ಸಾಮಾನ್ಯರ ಮನೆ ಬಾಗಿಲಿಗೆ ತಂದುಕೊಟ್ಟರು. ಈಗ ರಾಮನಗರ ಹೆಸರು ತೆಗೆದು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡಿಕೊಂಡಿದ್ದಾರೆ. ಹೆಸರು ಬದಲಾವಣೆ ಮಾಡಿ ಏನು ಅಭಿವೃದ್ಧಿ ಮಾಡಿದ್ದೀರಿ ಎಂದು ಪ್ರಶ್ನಿಸಿದರು.ಜೆಡಿಎಸ್ ಅನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮನ್ನು ಅಕ್ರಮವಾಗಿ ಸೋಲಿಸಿರಬಹುದು. ಸೋತಿದ್ದೇವೆ ಅಂತ ಸತ್ತು ಮನೆಯಲ್ಲಿ ಕುಳಿತಿಲ್ಲ. ಜನರಿಗಾಗಿ ಬದುಕಿ ತೋರಿಸುತ್ತೇವೆ. ಇವತ್ತೇ ಚುನಾವಣೆ ನಡೆದರು ನಾನು ಮತ್ತು ನಿಖಿಲ್ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಮಂಜುನಾಥ್ ಹೇಳಿದರು.ಜನರೊಂದಿಗೆ ಜನತಾದಳ ಇವತ್ತು ಆರಂಭಿಸಿದಲ್ಲ. ಈ ಜನತಾದಳ ಹೊಟ್ಟಿದ್ದೆ ಜನರಿಂದ. ಗ್ರಾಮೀಣ ಜನರು ಹಳ್ಳಿಯಿಂದ ದೆಹಲಿಗೆ ಕೊಂಡೊಯ್ದು ಅಧಿಕಾರ ನೀಡಿದರು. ಜಾ.ದಳ ಶಕ್ತಿ ರಾಜ್ಯದ ಜನರ ಶಕ್ತಿಯಾಗಿದೆ. ಜಾ.ದಳವನ್ನು ಉಳಿಸಿ ಅಧಿಕಾರಕ್ಕೆ ತರುವ ಶಕ್ತಿ ಜನರಿಗೆ ಇದೆ ಎಂದರು.

ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಮಾತನಾಡಿ, ಮುಂಬರುವ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಗಳನ್ನು ಪಕ್ಷದ ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಬೇಕು. ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಜೆಡಿಎಸ್ ಪಕ್ಷದ ಶಕ್ತಿಯನ್ನು ತೋರಿಸಬೇಕಿದೆ ಎಂದು ತಿಳಿಸಿದರು.

ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ದಿಶಾ ಸಮಿತಿ ಸದಸ್ಯ ನರಸಿಂಹಮೂರ್ತಿ, ನಗರಸಭೆ ಸದಸ್ಯರಾದ ಮಂಜುನಾಥ್ , ಶಿವಸ್ವಾಮಿ (ಅಪ್ಪಿ), ಗ್ಯಾಬ್ರಿಯಲ್ , ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಅಶ್ವತ್ಥ್, ಜಿಪಂ ಮಾಜಿ ಅಧ್ಯಕ್ಷ ರಾಜಣ್ಣ, ಮುಖಂಡರಾದ ಉಮೇಶ್, ಶೇಷಪ್ಪ ಮತ್ತಿತರರು ಉಪಸ್ಥಿತರಿದ್ದರು.

25ಕೆಆರ್ ಎಂಎನ್ 2.ಜೆಪಿಜಿರಾಮನಗರದಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲು ಆಗಮಿಸಿದ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಹಾಗೂ ತಾಲೂಕುಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಅವರನ್ನು ಕಾರ್ಯಕರ್ತರು ಬೃಹತ್ ಗಾತ್ರದ ಸೇಬಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದರು.