ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಅಂಕೋಲಾಭಾಷೆ, ಸಾಹಿತ್ಯ, ಸಂಸ್ಕೃತಿ, ಬದುಕು ಒಂದಕ್ಕೊಂದು ಪೂರಕವಾಗಿದೆ. ಭಾಷೆಯ ಕಡೆಗಣನೆಯಾದರೆ ಸಂಸ್ಕೃತಿಯೂ ನಾಶವಾದಂತೆ. ಆದ್ದರಿಂದ, ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಹಿರಿಯ ಸಾಹಿತಿ ಹೊನ್ನಮ್ಮ ನಾಯಕ ತಿಳಿಸಿದರು.ಪಟ್ಟಣದ ಕೆ.ಎಲ್.ಇ. ಸಂಸ್ಥೆಯ ಶೇಷಗಿರಿ ಪಿಕಳೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಂಕೋಲಾ ಘಟಕದ ವತಿಯಿಂದ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಕರ್ನಾಟಕದಲ್ಲಿ ಕನ್ನಡವೇ ಸತ್ಯ, ನಿತ್ಯ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿನಾಯಕ ಜಿ. ಹೆಗಡೆ, ಆಧುನಿಕ ಜಗತ್ತಿನಲ್ಲಿ ಕನ್ನಡ ಭಾಷೆಯು ಕೇವಲ ಭಾವನಾತ್ಮಕ ವಿಷಯವಾಗಿ ಉಳಿಯದೆ, ಆರ್ಥಿಕ ಮತ್ತು ತಾಂತ್ರಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ನ್ಯಾಯಾಲಯದ ಕಲಾಪಗಳಿಂದ ಹಿಡಿದು, ಬ್ಯಾಂಕಿಂಗ್ ಸೇವೆಗಳವರೆಗೆ ಕನ್ನಡ ಲಭ್ಯವಾಗುತ್ತಿರುವುದು ಭಾಷೆಯ ಸಾರ್ವಭೌಮತ್ವಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ಅದನ್ನು ಪ್ರೀತಿಸಿ ಗೌರವಿಸಿ ಆದರೆ ನಮ್ಮ ಮಾತೃ ಭಾಷೆಯನ್ನು ಮರೆಯಬಾರದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿ, ಕರ್ನಾಟಕದ ಕೆಲವು ನಗರಗಳಲ್ಲಿ ಕನ್ನಡವನ್ನು ಹುಡುಕುವ ಸ್ಥಿತಿ ಎದುರಾಗಿದೆ. ಕನ್ನಡ ನಮ್ಮ ಹೃದಯ ಭಾಷೆ ಅದನ್ನು ಮರೆಯಬಾರದು ಅದರ ಮೂಲಕ ನಮ್ಮತನವನ್ನು ನಾವು ಉಳಿಸಿಕೊಳ್ಳಬೇಕಾಗಿದೆ ಎಂದರು. ಕಾರ್ಯನಿರತ ಪತ್ರಕರ್ತರ ಸಂಘ ಅಂಕೋಲಾದ ಅಧ್ಯಕ್ಷ ರಾಘು ಕಾಕರಮಠ, ಮಹಾವಿದ್ಯಾಲಯದ ಉಪನ್ಯಾಸಕಿ ಡಾ. ಪುಷ್ಪಾ ನಾಯ್ಕ, ಸಾಹಿತಿಗಳಾದ ಸಾತು ಗೌಡ ಬಡಗೇರಿ, ಜಯಶೀಲ ಆಗೇರ ಮಾತನಾಡಿದರು.ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ವಿನಾಯಕ ಹೆಗಡೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸುವಿಧಾ ಸಂಗಡಿಗರು ಪ್ರಾರ್ಥಿಸಿದರು. ಕಸಾಪ ಸಂಘಟನಾ ಕಾರ್ಯದರ್ಶಿ ಸುಜಿತ ನಾಯ್ಕ ಸ್ವಾಗತಿಸಿದರು. ಖಜಾಂಚಿ ಡಾ. ಎಸ್.ವಿ. ವಸ್ತ್ರದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಎಂ.ಬಿ. ಆಗೇರ ವಂದಿಸಿದರು. ಮಹಾಂತೇಶ ರೇವಡಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ತಿಮ್ಮಣ್ಣ ಭಟ್, ರಫೀಕ್ ಶೇಖ್ ಮುಂತಾದ ಸಾಹಿತ್ಯಾಸಕ್ತರು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.