ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಧರ್ಮವನ್ನು ಕಡೆಗಣಿಸಿ ಹಣಕ್ಕೆ ಆದ್ಯತೆ ನೀಡಿರುವುದೇ ಬಾಂಗ್ಲಾದೇಶ ಈ ದುಸ್ಥಿತಿಗೆ ಕಾರಣ. ಹಣದ ಪ್ರಭಾವವೇ ಅಲ್ಲಿ ಮಹಿಳೆಯರ ಅತ್ಯಾಚಾರಕ್ಕೆ ಕಾರಣವಾಯಿವಾಯಿತು, ಧರ್ಮದ ಅವಗಣನೆಯಿಂದ ಹೀಗಾಯಿತು. ಆದ್ದರಿಂದ ನಾವು ಬಾಂಗ್ಲಾದಿಂದ ಪಾಠ ಕಲಿಯಬೇಕು, ನಮ್ಮ ಸಂಸ್ಕೃತಿ, ಇತಿಹಾಸ ಇತ್ಯಾದಿಗಳ ಬಗ್ಗೆ ಮಕ್ಕಳಿಗೆ ತಿಳಿಸುವಂತಾಗಬೇಕು. ತಿಳಿಸದಿದ್ದಲ್ಲಿ ನಮಗೂ ಅಪಾಯ ಕಾದಿದೆ ಎಂದು ರಾಷ್ಟ್ರೀಯ ಚಿಂತಕಿ, ಉತ್ತರ ಪ್ರದೇಶದ ಡೆಹ್ರಾಡೂನ್ನ ಮೀನಾಕ್ಷಿ ಸೆಹರಾವತ್ ಎಚ್ಚರಿಸಿದರು.ಅವರು ಅದಮಾರು ಮಠ ಆಶ್ರಯದ ಶ್ರೀಕೃಷ್ಣ ಸೇವಾ ಬಳಗ ಆಯೋಜನೆಯಲ್ಲಿ ವಿಶ್ವಾರ್ಪಣಂ ಕಾರ್ಯಕ್ರಮದಂಗವಾಗಿ ಶನಿವಾರ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಪಲಿಮಾರು ಮಠದ ಹಿರಿಯ ಯತಿ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ‘ಬಾಂಗ್ಲಾ-ಪಾಠ’ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿದರು.ಹಿಂಸೆ ಸರಿಯಲ್ಲ, ಆದರೆ ಅಹಿಂಸೆಗೂ ಹೆಚ್ಚಿನ ಆದ್ಯತೆ ಬೇಕಾಗಿಲ್ಲ. ವೈರಿ ಬಗ್ಗೆ ಸದಾ ಎಚ್ಚರಿಕೆ ಬೇಕು, ಆತ್ಮರಕ್ಷಣೆಗಾಗಿ ಆಯುಧ ಹೊಂದಿರಬೇಕು, ಇಲ್ಲದಿದ್ದಲ್ಲಿ ವೈರಿಗಳ ಕೈಗೆ ಸಿಲುಕುವುದು ತಪ್ಪುವುದಿಲ್ಲ ಎಂದವರು ಹೇಳಿದರು.ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯ ತೀರ್ಥರು, ಕಿರಿಯ ಯತಿ ಶ್ರೀ ಈಶಪ್ರಿಯ ತೀರ್ಥರು, ಪಲಿಮಾರು ಮಠದ ಹಿರಿಯ ಯತಿ ಶ್ರೀ ವಿದ್ಯಾಧೀಶ ತೀರ್ಥರು, ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರ ತೀರ್ಥರು ಉಪಸ್ಥಿತರಿದ್ದರು.ಶ್ರೀಕೃಷ್ಣ ಸೇವಾಬಳಗದ ಗೋವಿಂದರಾಜ್ ಸ್ವಾಗತಿಸಿದರು. ನಾಗರಾಜ ತಂತ್ರಿ ನಿರೂಪಿಸಿದರು. ಶೇಷಗಿರಿ ಕೆ.ಎಂ. ಪಲಿಮಾರು ಶ್ರೀಪಾದರ ಬಗ್ಗೆ ಅಭಿನಂದನಾ ಭಾಷಣ ಮಾಡಿದರು. ಶ್ರೀಕಾಂತ ಶೆಟ್ಟಿ ಪರಿಚಯಿಸಿದರು. ಪ್ರೊ. ನಂದನ ಪ್ರಭು ವಂದಿಸಿದರು. ಗೋಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನಂದಿನಿ ಪುಣೆ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಶ್ರೀಧರ ಮಹಾಬಲೇಶ್ವರ ಷಡಕ್ಷರಿ ಕುಮಟಾ ಅವರಿಗೆ ನರಹರಿತೀರ್ಥ ಪ್ರಶಸ್ತಿ, ಉಡುಪಿ ಆದರ್ಶ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಅವರಿಗೆ ಸೇವಾರತ್ನಾಕರ ಪ್ರಶಸ್ತಿ, ಡಾ. ವಿನೀತ್ ಆನಂದ್ ಭದ್ರಾವತಿ ಅವರಿಗೆ ಜೀವಸೇವಾರತ್ನ ಪ್ರಶಸ್ತಿ ಮತ್ತು ಉದ್ಯಮಿ ಮುರಳೀಧರ ಹತ್ವಾರ್ ಬೇಲೂರು ಅವರಿಗೆ ಜನಹರಿಸೇವಾಸಕ್ತ ಪ್ರಶಸ್ತಿ ಪ್ರದಾನಿಸಿ ಸನ್ಮಾನಿಸಲಾಯಿತು.
---------------ಯೋಗಿ ಆಡಳಿತ ನಡೆಸಬೇಕು: ಅದಮಾರು ಶ್ರೀ
ಅದಮಾರು ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥರು, ಅಹಿಂಸೆ ಎಂದು ಕೈಕಟ್ಟಿ ಕುಳಿತರೆ ಅಪಾಯವಾಗಬಹುದು. ಏಳು ದಶಕಗಳ ನಂತರ ಕಾಶ್ಮೀರವನ್ನು ಮರಳಿ ಪಡೆಯುವಂತಾಗಿದ್ದು, ಭಾರತಾಂಬೆ ಸುವರ್ಣ ಕಿರೀಟದಿಂದ ಶೋಭಿಸುತ್ತಿದ್ದಾಳೆ. ಇನ್ನುಳಿದ ಪಿಒಕೆ ಶೀಘ್ರ ಭಾರತದ ವಶವಾಗಬೇಕು. ಅದಕ್ಕಾಗಿ ಮೋದಿ, ಯೋಗಿಯಂಥವರು ಆಡಳಿತ ವಹಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.