ಸಿಂದೂರ ಅಳಿಸಿದರೆ ಪಾಕ್‌ಗೆ ಉಳಿಗಾಲವಿಲ್ಲ

| Published : May 24 2025, 12:43 AM IST

ಸಾರಾಂಶ

ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರನ್ನು ಗುಂಡಿಟ್ಟು ಕೊಂದಿದ್ದ ಪ್ರತಿಕಾರವಾಗಿ ಕೇಂದ್ರ ಸರ್ಕಾರ ಆಪರೇಷನ್ ಸಿಂದೂರ ಕಾರ್ಯಾಚರಣೆ ಕೈಗೊಂಡು ನೂರಾರು ಭಯೋತ್ಪಾದಕರು ಮತ್ತು ಅಡಗುತಾಣಗಳನ್ನು ಛಿದ್ರಗೊಳಿಸಿದೆ.

ಕಾರಟಗಿ:

ಕಾಶ್ಮೀರದಲ್ಲಿ ಉಗ್ರರನ್ನು ಬಿಟ್ಟು ನಮ್ಮ ಸಹೋದರಿಯರ ಸಿಂದೂರ ಅಳಿಸಿದ ಪಾಕಿಸ್ತಾನಕ್ಕೆ ಭಾರತದ ಸೈನಿಕರು ಎಡಮುರಿ ಕಟ್ಟಿದ್ದಾರೆ. ಪದೇ ಪದೇ ಭಾರತಕ್ಕೆ ತೊಂದರೆ ಕೊಡುವ ಪಾಕ್ ತನ್ನ ಚಾಳಿ ಬಿಡಬೇಕು. ಭಾರತ ಮಾತೆಯ ಸಿಂದೂರ ಮುಟ್ಟಲು ಬಂದರೆ ಪಾಕ್ ಉಳಿಯುವುದಿಲ್ಲ ಎಂದು ಮಹಿಳಾ ಸಂಘಟಕಿ ಡಾ. ಶಿಲ್ಪಾ ದಿವಟರ್ ಎಚ್ಚರಿಸಿದರು.

ಪಾಕ್ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿ ತಕ್ಕ ಉತ್ತರ ನೀಡಿದ ದೇಶದ ಸೈನಿಕರಿಗೆ ಕೃತಜ್ಞತೆ ತಿಳಿಸಲು ಹಾಗೂ ರಾಷ್ಟ್ರೀಯ ಭದ್ರತೆಗಾಗಿ ಪಟ್ಟಣದಲ್ಲಿ ಶುಕ್ರವಾರ ಬಿಜೆಪಿ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಶಕ್ತಿಯನ್ನು ಸೈನಿಕರು ತೋರಿಸಿದ್ದಾರೆ. ಇಂತಹ ಸಾಹಸಕ್ಕೆ ನಾವು ಸದಾ ಸೈನಿಕರಿಗೆ ಜೈಕಾರ ಹಾಕಬೇಕು ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ ಮಾತನಾಡಿ, ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರನ್ನು ಗುಂಡಿಟ್ಟು ಕೊಂದಿದ್ದ ಪ್ರತಿಕಾರವಾಗಿ ಕೇಂದ್ರ ಸರ್ಕಾರ ಆಪರೇಷನ್ ಸಿಂದೂರ ಕಾರ್ಯಾಚರಣೆ ಕೈಗೊಂಡು ನೂರಾರು ಭಯೋತ್ಪಾದಕರು ಮತ್ತು ಅಡಗುತಾಣಗಳನ್ನು ಛಿದ್ರಗೊಳಿಸಿದೆ. ಈ ವಿಜಯೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದ ಮೇರೆಗೆ ದೇಶಾದ್ಯಂತ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಅದರಂತೆ ಜಾತ್ಯತೀತ, ಪಕ್ಷಾತೀತವಾಗಿ ತಿರಂಗಾ ಯಾತ್ರೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಮರುಳುಸಿದ್ದಯ್ಯಸ್ವಾಮಿ ಹಿರೇಮಠ ಮಾತನಾಡಿದರು. ತಿರಂಗಾ ಯಾತ್ರೆ ಇಲ್ಲಿನ ವೆಂಕಟೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಆರಂಭವಾಗಿ ಆರ್.ಜಿ. ರಸ್ತೆಯ ಮೂಲಕ ಕನಕದಾಸ ವೃತ್ತ, ಬಸ್ ನಿಲ್ದಾಣದಿಂದ ಸಾಗಿಬಂದು ಕರ್ನಾಟಕ ಪದವಿ ಪೂರ್ವ ಕಾಲೇಜ್ ಬಳಿ ಮುಕ್ತಾಯಗೊಂಡಿತು.

ವೀರಭದ್ರ ಶರಣರು ತಲೆಖಾನಮಠ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮೌನೇಶ ದಢೇಸೂಗೂರು, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಬಸವರಾಜ ಎತ್ತಿಮನಿ, ಮುಖಂಡರಾದ ಚಂದ್ರಶೇಖರ ಮುಸಾಲಿ, ಶಿವಪುತ್ರಯ್ಯ, ಸುರೇಶ ರಾಠೋಡ, ಶರಣಬಸವರೆಡ್ಡಿ, ದೇವರಾಜ ನಾಯಕ, ಮಂಜುನಾಥ ನಾಯಕ, ಆನಂದ ಕುಲಕರ್ಣಿ, ರವಿ ತಿಮ್ಮಾಪುರ, ಚನ್ನಬಸವ ಸಾಲೋಣಿ, ಶಶಿ ಮ್ಯಾದರ, ರಮೇಶ ಹುಲ್ಕಿಹಾಳ, ಅಕ್ಕಮಹಾದೇವಿ, ಪ್ರಿಯಾಂಕಾ ಪವರ, ನಾಗರತ್ನ ಬಪ್ಪುರ, ಶಕುಂತಲಾ ದಿವಟರ, ಉಮಾ ಚಂದ್ರಮೌಳಿ, ಸುಮಾ ಹಿರೇಮರ, ಕೆ. ಸಾವಿತ್ರಿ ಎಲ್‌ವಿಟಿ, ಕಸ್ತೂರಿಬಾ ಹಾಗೂ ವಿದ್ಯಾಭಾರತಿ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ, ಸಂಸ್ಥೆ ಮುಖಂಡರು, ಕಾರ್ಯಕರ್ತರು, ಯುವಕರು, ಗಣ್ಯರು ಭಾಗವಹಿಸಿದ್ದರು.