ಕನ್ನಡಪ್ರಭ ವಾರ್ತೆ ವಿಜಯಪುರ

ಕರ್ನಾಟಕದಲ್ಲಿ ಎಸ್.ಐ.ಆರ್. ಪ್ರಕ್ರಿಯೆ ನಡೆದರೆ 50 ವರ್ಷಗಳ ಕಾಲ ಬಿಜೆಪಿಯೇ ಅಧಿಕಾರದಲ್ಲಿರುತ್ತದೆ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಹೇಳಿಕೆಯೇ ಎಸ್‌ಐಆರ್ ಕರಾಳತೆಗೆ ಒಂದು ದೊಡ್ಡ ನಿದರ್ಶನವಾಗಿದೆ ಎಂದು ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಹೇಳಿದರು.

ಎಸ್‌ಐಆರ್ ಪ್ರಕ್ರಿಯೆ ವಿರೋಧಿಸಿ ವಿವಿಧ ಪ್ರಗತಿಪರ ಸಂಘಟನೆಗಳು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಈ ರೀತಿ ಹೇಳಿಕೆ ನೀಡಿದ್ದಾರೆ. ಆ ಮೂಲಕ ಎಸ್‌ಐಆರ್ ಬಿಜೆಪಿ ಅನುಕೂಲಕರ ಎಂದು ಅವರೇ ಹೇಳಿದ್ದಾರೆ. ಈಗಲಾದರೂ ವಾಸ್ತವಿಕತೆಯನ್ನು ಚುನಾವಣಾ ಆಯೋಗ ಅರಿಯಬೇಕಿದೆ. ಈ ಬಗ್ಗೆ ಬಹಿರಂಗ ಸವಾಲಿಗೆ ಅನೇಕ ಬಾರಿ ಆಹ್ವಾನಿಸಿದರೂ ಸಹ ಚುನಾವಣೆ ಆಯೋಗ ಸವಾಲು ಏಕೆ ಸ್ವೀಕರಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಅಲ್ಪಸಂಖ್ಯಾತ ಮುಖಂಡ ಮೊಹ್ಮದ್‌ ರಫೀಕ್ ಟಪಾಲ್ ಮಾತನಾಡಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕ್ಷೇತ್ರದಲ್ಲಿಯೇ ಲಕ್ಷಾಂತರ ಮತಗಳನ್ನು ಡಿಲೀಟ್ ಮಾಡಿರುವುದು ಒಂದು ವ್ಯವಸ್ಥಿತ ಹುನ್ನಾರವಲ್ಲದೇ ಮತ್ತೇನು? ಈ ಅಪಾಯ ರಾಜ್ಯದಲ್ಲಿಯೂ ಇದೆ, ಲಕ್ಷಾಂತರ ಮತಗಳನ್ನೇ ಕಡಿತಗೊಳಿಸುವ ನಿಟ್ಟಿನಲ್ಲಿ ದೊಡ್ಡ ಹುನ್ನಾರವಿದ್ದು, ಇದನ್ನು ಪ್ರಬಲವಾಗಿ ಪ್ರತಿಭಟಿಸಬೇಕಿದೆ ಎಂದು ಹೇಳಿದರು.

ಧುರೀಣ ಯೂಸೂಫ್ ಖಾಜಿ ಮಾತನಾಡಿ, 13 ರಾಜ್ಯಗಳಲ್ಲಿ ಎಸ್‌ಐಆರ್ ಮುಗಿದಿದ್ದು, 6.50 ಕೋಟಿ ಜನರ ಹೆಸರು ತೆಗೆದು ಹಾಕಲಾಗಿದೆ. ಇದರಲ್ಲಿ 372 ಜನ ಮಾತ್ರ ನುಸುಳಿಕೋರರು ಪತ್ತೆಯಾಗಿದ್ದಾರೆ. ಇದರಲ್ಲಿ ಕೇವಲ 7 ಜನ ಮಾತ್ರ ಮುಸ್ಲಿಮರೇ ಇದ್ದಾರೆ. ಈಗ ರಾಜ್ಯಕ್ಕೂ ಇದು ಕಾಲಿಟ್ಟಿದೆ. ಹೀಗಾಗಿ ಮುಸ್ಲಿಂ, ದಲಿತ, ಪ್ರಗತಿಪರ ಸಂಘಟನೆಗಳ ಸೇರಿ 150 ಸಂಘಟನೆಗಳು ಒಂದಾಗಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.


ಪ್ರಮುಖರಾದ ಆರೀಫ್ ಮುಲ್ಲಾ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಸ್ವಾಗತವಿದೆ. ವಿಶೇಷ ಪರಿಷ್ಕರಣೆಗೆ ಸರ್ಕಾರದ ಯಾವುದೇ ಇಲಾಖೆಯಿಂದ ಅನುಮೋದನೆ ಆಗಿಲ್ಲ. ಒಂದೇ ರೀತಿಯ ಅರ್ಜಿ ನಮೂನೆ ಇಲ್ಲ. ಮತದಾರರು ತಮ್ಮನ್ನು ತಾವೇ ಗುರುತಿಸಿಕೊಳ್ಳಬೇಕಿದೆ. ಇದು ಯಾವ ನ್ಯಾಯ? ಎಂದು ಪ್ರಶ್ನಿಸಿದ ಅವರು, ಬಹುಮುಖ್ಯವಾಗಿ ಅವೈಜ್ಞಾನಿಕವಾದ ಲಾಜಿಕಲ್ ಪದ್ಧತಿ ಕೈಬಿಡಬೇಕು. ಮೇಲ್ಮನವಿಗೆ 6 ತಿಂಗಳು ಅವಕಾಶ ಕೊಡಿ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶ್ರೀನಾಥ ಪೂಜಾರಿ, ಬಿ.ಭಗವಾನ ರೆಡ್ಡಿ, ಅಕ್ರಂ ಮಾಶ್ಯಾಳಕರ, ಪ್ರಭುಗೌಡ ಬಿರಾದಾರ ಇದ್ದರು.

ಎಸ್‌ಐಆರ್ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದೆ. ಚುನಾವಣೆಯ ಫಲಿತಾಂಶ 10 ರಿಂದ 15 ಸಾವಿರಗಳ ಅಂತರದಲ್ಲಿಯೇ ಇರುತ್ತದೆ. ಅಂತಹ ಸಂದರ್ಭದಲ್ಲಿ ಸಾವಿರಾರು ಮತಗಳನ್ನು ಡಿಲೀಟ್ ಮಾಡಿದರೆ ಹೇಗೆ? ಇದು ಅವೈಜ್ಞಾನಿಕವಲ್ಲದೇ ಮತ್ತೇನು ?

-ಯೂಸೂಫ್ ಖಾಜಿ ಅಹಿಂದ ಮುಖಂಡರು