ಯುವಜನರ ಶಕ್ತಿ ಸದ್ಬಳಕೆಯಾದರೆ ದೇಶ ಸುಭೀಕ್ಷ

| Published : Jan 23 2025, 12:50 AM IST

ಸಾರಾಂಶ

ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಕಾನೂನು ಅರಿವು ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಯುವಜನರ ಶಕ್ತಿ ಸದ್ಬಳಕೆಯಾದರೆ ಮಾತ್ರ ದೇಶ ಸುಭೀಕ್ಷವಾಗಿರುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.

ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಹಯೋಗದಲ್ಲಿ, ಮಂಗಳವಾರ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಕಾನೂನು ಅರಿವು ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹದಿಹರೆಯದ ವಯಸ್ಸಿನಲ್ಲಿ ವ್ಯಸನಗಳಿಗೆ ಸಿಲುಕಿ ಯುವಕರು ಕಾನೂನು ಸಂಘರ್ಷಕ್ಕೆ ಒಳಗಾಗುವ ಸಂಗತಿಗಳು ಹೆಚ್ಚಾಗುತ್ತಿವೆ. ಯುವಕರು ಕಾನೂನುಬಾಹಿರ ಸಂಗತಿಗಳ ಕಡೆ ಗಮನ ಹರಿಸದೇ, ವಿದ್ಯಾಭ್ಯಾಸದ ಕಡೆ ಹೆಚ್ಚಿನ ಒಲವು ತೊರಬೇಕು ಎಂದರು.

ದೇಶದ ಜನಸಂಖ್ಯೆಯ ಶೇ.29 ರಷ್ಟು ಯುವಜನರಿದ್ದಾರೆ. 15 ರಿಂದ 29 ವರ್ಷದ ಒಳಗಿರುವವರನ್ನು ಯುವಕರು ಎಂದು ಕರೆಯಲಾಗಿತ್ತದೆ. ದೇಶದ ಪ್ರಗತಿ ಹಾಗೂ ಅಭಿವೃದ್ಧಿಗೆ ಯುವಜನರೇ ಮೂಲವಾಗಿದ್ದಾರೆ. ಸ್ವಾಮಿ ವಿವೇಕಾನಂದರು ಶಿಕ್ಷಣ ಯುವಕರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳಸಬೇಕು ಎಂದು ಆಶಯ ವ್ಯಕ್ತಪಡಿಸಿದ್ದರು.

ಜ.12ರಂದು ರಾಷ್ಟ್ರೀಯ ಯುವ ದಿನಾಚರಣೆ ಆಚರಿಸಬೇಕಿತ್ತು. ಕಾರಣಾಂತರಗಳಿಂದ ತಡವಾಗಿದೆ. ಸ್ವಾಮಿ ವಿವೇಕಾನಂದರ ಜೀವನ ಯುವಕರಿಗೆ ಮಾದರಿ ಹಾಗೂ ಸ್ಫೂರ್ತಿಯಾಗಿದೆ. ಈ ಬಾರಿಯ ಯುವ ದಿನಾಚರಣೆ ಘೋಷವಾಕ್ಯ ಯುವಜನರ ಶಕ್ತಿಯನ್ನು ಸಂಭ್ರಮಿಸೋಣ ಎನ್ನುವುದಾಗಿದೆ. ಯುವಜನರ ಶಕ್ತಿ ಸದ್ಬಳಕೆಯಾದರೆ ಕುಟುಂಬ, ನಾಡು ಚೆನ್ನಾಗಿರುತ್ತದೆ ಎಂದರು.

ಜಿಲ್ಲಾ ಯುವಜನ ಅಧಿಕಾರಿ ಸುಹಾಸ್ ಎನ್. ಮಾತನಾಡಿ, ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಿದೆ. ಓದುವಾಗಲೇ ವೃತ್ತಿ ಬಗ್ಗೆ ಯೋಚಿಸಿ ಕೌಶಲ್ಯಗಳನ್ನು ಬೆಳಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಎಐ ಹಾಗೂ ಆಟೋಮೇಷನ್ ಲರ್ನಿಂಗ್ ಪ್ರವರ್ಧಮಾನಕ್ಕೆ ಬರಲಿದ್ದು, ಇದರಲ್ಲಿ ಹೆಚ್ಚಿನ ಕೌಶಲ್ಯ ಗಳಿಸಲು ಪ್ರಯತ್ನಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿದಾರ ಗಜೇಂದ್ರ ಎಂ. ನಾಯ್ಕ್ ಮಾತನಾಡಿದರು. ಪ್ರಾಂಶುಪಾಲ ರಾಘವೇಂದ್ರಾಚಾರ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ರಮೇಶ್ ಇದ್ದರು.

ಓದಿನ ಜೊತೆಗೆ ಕಾನೂನು ಅರಿವು ಇರಲಿ

ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣದ ಆರೋಪದಲ್ಲಿ ಸಿಲುಕಿ ಬಂಧನಕ್ಕೆ ಒಳಗಾದವರ ಪೈಕಿ ಹೆಚ್ಚಿನವರು ಯುವಕರೇ ಆಗಿರುವುದು ರ್ದುದೈವದ ವಿಷಯ ಎಂದು ನ್ಯಾಯಾಧೀಶ ಎಂ.ವಿಜಯ ಹೇಳಿದರು.

ಪೋಕ್ಸೋ, ಬಾಲ್ಯವಿವಾಹ ನಿಷೇಧ ಕಾಯ್ದೆ, ಎನ್‌ಡಿಪಿಎಸ್ (ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್) ಸೈಬರ್ ಅಪರಾಧ ಹಾಗೂ ಅಪಘಾತಗಳಲ್ಲಿ ಯುವಕರು ಹೆಚ್ಚಿನ ತೊಂದರೆಗೆ ಸಿಲುಕುತ್ತಿದ್ದಾರೆ. ಇಂತಹ ಯುವಕರ ತಂದೆ- ತಾಯಿಗಳು ಅಸಹಾಯಕರಾಗಿ ಕೈಕಟ್ಟಿ ಕುಳಿತುಕೊಳ್ಳವ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ಕಾನೂನುಗಳ ಅರಿವು ಹೊಂದಿ ಸೂಕ್ಷ್ಮವಾಗಿ ವರ್ತಿಸಬೇಕು ಎಂದರು.

ಚಿತ್ರದುರ್ಗ ಜಿಲ್ಲೆ ಬಾಲ್ಯವಿವಾಹಗಳ ಪ್ರಕರಣಗಳು ಹೆಚ್ಚಿವೆ. ಇದು ಅತ್ಯಂತ ಅಪಮಾನಕರ ಸಂಗತಿಯಾಗಿದೆ. ಈ ಹಿನ್ನೆಲೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಶಿಕ್ಷಣ, ಮಹಿಳಾ ಮತ್ತು ಕಲ್ಯಾಣ ಇಲಾಖೆ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪೋಕ್ಸೋ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿಜಯ್ ತಿಳಿಸಿದರು.