ಸಾರಾಂಶ
ಶಿರಸಿ: ಇಂದ್ರಿಯಗಳ ಭೋಗದಿಂದ ಬರುವ ಸುಖ ತಾತ್ಕಾಲಿಕ. ಇಂದ್ರಿಯಗಳ ನಿಯಮನದಿಂದ ಶಾಶ್ವತವಾದ ನೆಮ್ಮದಿ ಹಾಗೂ ಸಾತ್ವಿಕವಾದ ನೆಮ್ಮದಿ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಸ್ವರ್ಣವಲ್ಲೀ ಮಠದಲ್ಲಿ ನಡೆಯುತ್ತಿರುವ ಉಭಯ ಶ್ರೀಗಳ ಚಾತುರ್ಮಾಸ್ಯದಲ್ಲಿ ಗುಂದ ಸೀಮೆ, ಛಾಪಖಂಡ ಭಾಗಿಯ ಶಿಷ್ಯರು ಸಲ್ಲಿಸಿದ ಗುರು ಸೇವೆಯನ್ನು ಸ್ವೀಕರಿಸಿ ಆಶೀರ್ವಚನ ನೀಡಿದರು.ಪ್ರತಿಯೊಂದಕ್ಕೂ ನಮ್ಮ ಮನಸ್ಸು ಮುಖ್ಯ ಕಾರಣ. ಅದನ್ನು ನಿಗ್ರಹಿಸಿದರೆ ಎಲ್ಲವನ್ನೂ ನಿಗ್ರಹಿಸುವ ಸಾಮರ್ಥ್ಯ ನಮ್ಮಲ್ಲಿ ಬರುತ್ತದೆ. ನಮ್ಮನ್ನು ಧರ್ಮಾಚರಣೆಯಲ್ಲಿ ತೊಡಗಿಸುತ್ತದೆ ಎಂದರು.ಮಠಕ್ಕೆ ಬಂದು ಗುರುಗಳ ದರ್ಶನ ಮಾಡುವುದು ಮತ್ತು ಮಾರ್ಗದರ್ಶನ ಪಡೆಯುವುದು ಜೀವನದಲ್ಲಿ ತಪಸ್ಸಿನ ಸಂದೇಶವನ್ನು ಪಡೆಯಲು, ತಪಸ್ಸಿನ ಮಾರ್ಗದಲ್ಲಿ ಹೋಗುವುದನ್ನು ರೂಢಿಸಿಕೊಳ್ಳಲು. ಲೋಕದಲ್ಲಿ ಪ್ರತಿಯೊಂದು ಪ್ರಾಣಿಗಳು ಅವರವರ ಇಂದ್ರಿಯಗಳ ಆಕರ್ಷಣೆಯಿಂದಾಗಲೇ ಅವು ತಮ್ಮ ಪ್ರಾಣವನ್ನು ಬಿಡುತ್ತಾರೆ. ಇಂದ್ರಿಯಗಳ ಆಕರ್ಷಣೆಯನ್ನು ತಡೆಗಟ್ಟುವಲ್ಲಿ ಪ್ರಯತ್ನ ಬೇಕು. ಅದನ್ನು ತಡೆಗಟ್ಟಿದರೆ ತಪಸ್ಸಾಗುತ್ತದೆ. ನಮ್ಮ ಜೀವನದ ನಿಶ್ರೇಯಸ್ಸಿಗೂ ಕಾರಣವಾಗುತ್ತದೆ ಎಂದರು.
ಮನಸ್ಸು ನಿಗ್ರಹಿಸಿದರೆ ಉಳಿದೆಲ್ಲ ಇಂದ್ರಿಯಗಳು ನಿಗ್ರಹಕ್ಕೆ ಬರುತ್ತದೆ. ಇಂದಿನ ಕಾಲದಲ್ಲಿ ಅನೇಕ ಮನೆಗಳಲ್ಲಿ ಸಂಧ್ಯಾವಂದನೆ ದೇವರ ಪೂಜೆಗಳನ್ನು ಬಿಡುತ್ತಿದ್ದಾರೆ, ಅದು ಸರಿಯಲ್ಲ ಎಂದರು.ಈ ವೇಳೆ ಕಿರಿಯ ಶ್ರೀಗಳಾದ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸೀಮಾ ಅಧ್ಯಕ್ಷ ದತ್ತಾತ್ರೇಯ ಹೆಗಡೆ ತಮ್ಮಣಗಿ, ಶಿವಾನಂದ ಪಾಟೀಲ, ಮಾತೃಮಂಡಳಿಯ ಪ್ರಮುಖರಾದ ಸೀತಾ ದಾನಗೇರಿ, ವಿಶಾಲಾಕ್ಷಿ ಭಟ್ ಪಟೋಳಿ ಉಪಸ್ಥಿತರಿದ್ದರು.