27 ರಿಂದ ಸಂಸ್ಕೃತಿ ಕುಂಭ ಮಲೆನಾಡ ಉತ್ಸವ

ಕನ್ನಡಪ್ರಭ ವಾರ್ತೆ ಕಾರವಾರಅಭಿವೃದ್ಧಿಯ ಹೆಸರಿನಲ್ಲಿ ಪಶ್ಚಿಮ ಘಟ್ಟವನ್ನು ಸಮಾಧಿ ಮಾಡುತ್ತಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಾಗುವುದೇ ಆದರೆ, ಅದು ನನ್ನ ಬಲಿಯ ಮೇಲೆಯೇ ಆಗಬೇಕು ಎಂದು ಬಂಗಾರಮಕ್ಕಿ ವೀರಾಂಜನೇಯ ಮಹಾಸಂಸ್ಥಾನದ ಪೀಠಾಧಿಪತಿ ಮಾರುತಿ ಗುರೂಜಿ ಹೇಳಿದರು. ಕಾರವಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾವರ ತಾಲೂಕಿನ ಬಂಗಾರಮಕ್ಕಿಯಲ್ಲಿ ಮಾ.27ರಿಂದ ಏ.2 ರ ತನಕ ನಡೆಯುವ ಸಂಸ್ಕೃತಿ ಕುಂಭ ಮಲೆನಾಡ ಉತ್ಸವದಲ್ಲಿ ಮಾ.29ರಂದು ಸಹ್ಯಾದ್ರಿ ಜ್ಞಾನ ಹಾಗೂ ಸಂರಕ್ಷಣಾ ಸಮಾವೇಶ ನಡೆಯಲಿದ್ದು, ಜಲತಜ್ಞ ರಾಜೇಂದ್ರ ಸಿಂಗ್, ದೇಶದ 40ಕ್ಕೂ ಹೆಚ್ಚು ಸಾಧು-ಸಂತರು ಮತ್ತು ವಿಜ್ಞಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಒಂದು ಕಾಲದಲ್ಲಿ ಜಿಲ್ಲೆಯಲ್ಲಿ ಶೇ. 84ರಷ್ಟಿದ್ದ ಅರಣ್ಯ ಪ್ರದೇಶವು ಈಗ ಶೇ. 42ಕ್ಕೆ ಕುಸಿದಿದೆ. ಪರಿಸರ ನಾಶ ಹೀಗೆಯೇ ಮುಂದುವರಿದರೆ ಭವಿಷ್ಯದಲ್ಲಿ ಪೆಟ್ರೋಲ್ ಬಂಕ್‌ಗಳಂತೆ ಉಸಿರಾಡಲು ಆಕ್ಸಿಜನ್ ಬಂಕ್‌ಗಳನ್ನು ಹುಡುಕಬೇಕಾದ ದುಸ್ಥಿತಿ ಬರಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧ 75,000ಕ್ಕೂ ಹೆಚ್ಚು ಸಹಿ ಸಂಗ್ರಹಿಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲು ಸಜ್ಜಾಗಿದ್ದೇವೆ ಎಂದರು.ಮಾ.27ರಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಸಪ್ತಾಹ ಉದ್ಘಾಟಿಸಲಿದ್ದಾರೆ. ಮಾ.28 ರಂದು 10ನೇ ವರ್ಷದ ಶರಾವತಿ ಆರತಿ ನಡೆಯಲಿದೆ. ಅಂಬುತೀರ್ಥದಿಂದ ಹೊನ್ನಾವರದವರೆಗೆ ಸಾವಿರಾರು ಭಕ್ತರು ನದಿಗೆ ನಮನ ಸಲ್ಲಿಸಲಿದ್ದಾರೆ. ಮಾ. 30ರಂದು ಯುವಜನತೆಗಾಗಿ 60ಕ್ಕೂ ಹೆಚ್ಚು ಕಂಪನಿಗಳನ್ನೊಳಗೊಂಡ ಬೃಹತ್ ಉದ್ಯೋಗ ಮೇಳ ನಡೆಯಲಿದೆ ಎಂದರು.ಮಾ. 31ರಂದು ಮೀನುಗಾರರ ಸಮಾವೇಶ ಹಾಗೂ ಏ.1ರಂದು ಪಾರಂಪರಿಕ ವೈದ್ಯರ ಸಮ್ಮೇಳನ ಜರುಗಲಿದೆ. ಏ. 2ರಂದು ದೇವರ ಬ್ರಹ್ಮರಥೋತ್ಸವದ ಜೊತೆಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ, ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದೆ. ದಾವಣಗೆರೆಯ ತಜ್ಞ ವೈದ್ಯರ ತಂಡವು 32 ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಿದ್ದು, ₹20 ಲಕ್ಷ ಮೌಲ್ಯದ ಉಚಿತ ಔಷಧ ವಿತರಿಸಲಾಗುವುದು ಎಂದು ಶ್ರೀಗಳು ತಿಳಿಸಿದರು. ಬಜೆಟ್‌ನಲ್ಲಿ ಘೋಷಣೆಯಾದ ಮಾತ್ರಕ್ಕೆ ಯಾವುದೇ ಯೋಜನೆ ಜಾರಿಯಾಗುತ್ತದೆ ಎಂದು ಹೇಳುವಂತಿಲ್ಲ. ಇದುವರೆಗೆ ಘೋಷಣೆ ಆಗಿರುವುದರಲ್ಲಿ ಶೇ.20ರಷ್ಟು ಮಾತ್ರ ಜಾರಿಯಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.