ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸಪೇಟೆನಾಡಿನ ಉದ್ದಗಲಕ್ಕೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ಕೀರ್ತಿ ವೀರಶೈವ ಮಠಗಳಿಗೆ ಸಲ್ಲುತ್ತದೆ. ಮಠಗಳು ಇಲ್ಲದಿದ್ದರೆ ಶೂದ್ರರು ಇಂದಿಗೂ ಶೂದ್ರರಾಗಿಯೇ ಉಳಿಯಬೇಕಿತ್ತು ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.ಸೋಮವಾರ ಮಠದ ಆವರಣದಲ್ಲಿ ಲಿಂ. ಡಾ. ಸಂಗನಬಸವ ಶ್ರೀಗಳ ಪಟ್ಟಾಧಿಕಾರದ ಸುವರ್ಣ ಮಹೋತ್ಸವದ ಮೊದಲ ದಿನ ಕಾರ್ಯಕ್ರಮದಲ್ಲಿ ಪ್ರೊ. ಎಸ್.ಸಿ. ಪಾಟೀಲ ಸಂಪಾದನೆಯ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಗುರುಪರಂಪರೆ ಮತ್ತು ಹಂಡೆ ಅರಸು ಮನೆತನ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಮಹಿಳೆಯರಿಗಾಗಿಯೇ ಲಿಂಗಾಯತ ಧರ್ಮವನ್ನು ಹುಟ್ಟು ಹಾಕಿದ್ದು, ಶರಣು ರಚಿಸಿದ ವಚನಗಳೇ ಲಿಂಗಾಯತರ ಧರ್ಮ ಗ್ರಂಥ. ಬಸವಣ್ಣ ಬಯಸಿದಂತ ವರ್ಗ ರಹಿತ ಸಮಾಜವನ್ನು ರಚಿಸುವಂತಹ ನಿಟ್ಟಿನಲ್ಲಿ ಮಕ್ಕಳನ್ನು ಬೆಳೆಸಬೇಕಾದ ಗುರುತರ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದರು.ಶಿವಯೋಗ ಮಂದಿರವನ್ನು ಬಹಳ ಎತ್ತರಕ್ಕೆ ಬೆಳೆಸಿದವರು ಡಾ. ಸಂಗನಬಸವ ಶ್ರೀಗಳು. ಅವರು ಮಾಡಿದ ಸೇವೆ ಮಹತ್ತರವಾದದ್ದು. ಹನ್ನೆರಡನೇ ಶತಮಾನದ ಬಸವಣ್ಣನವರು ವಿಜಯಪುರದವರೇ. ಅವರಂತೆ ಸುಮಾರು ನಾಡಿನ ೫ ಸಾವಿರ ಮಠಗಳಲ್ಲಿ ಅತಿ ಹೆಚ್ಚು ಶರಣರು ವಿಜಯಪುರದ ನೆಲದಿಂದಲೇ ಬಂದಿರುವರು ಎಂದರು.ಕುದುರಿಮೋತಿ ಮೈಸೂರುಮಠದ ವಿಜಯಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕೊಟ್ಟೂರು ಸ್ವಾಮಿಮಠದ ಕೊಟ್ಟೂರು ಬಸವಲಿಂಗ ಸ್ವಾಮೀಜಿ, ಹಂದಿಗುಂಡಿಯ ಶಿವಾನಂದ ಸ್ವಾಮೀಜಿ, ಕನ್ನಡ ವಿವಿಯ ಹಸ್ತಪ್ರತಿ ವಿಭಾಗದ ಪ್ರಾಧ್ಯಾಪಕ ಡಾ. ಕೆ. ರವೀಂದ್ರನಾಥ, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಎಸ್.ಸಿ. ಪಾಟೀಲ ಇತರರು ಇದ್ದರು.