ಸಾರಾಂಶ
ಶಿರಸಿ:
ಸಂಸದ ಅನಂತಕುಮಾರ ಹೆಗಡೆ ಅವರ ಮನೆಗೆ ತೆರಳಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಒಪ್ಪಿಗೆ ಸೂಚಿಸುವಂತೆ ಬೆಂಬಲಿಗರು ಮತ್ತು ಕಾರ್ಯಕರ್ತರ ಆಗ್ರಹ ಮಂಗಳವಾರವೂ ನಡೆದಿದೆ. ನಗರ ಮತ್ತು ಗ್ರಾಮೀಣ ಘಟಕದ ಇನ್ನೂರಕ್ಕೂ ಅಧಿಕ ಕಾರ್ಯಕರ್ತರು ಮಂಗಳವಾರ ಅವರ ಮನೆಗೆ ತೆರಳಿ ಚುನಾವಣೆಗೆ ಸ್ಪರ್ಧಿಸಲು ಒಪ್ಪಿಗೆ ಸೂಚಿಸದಿದ್ದರೆ ನಾವು ಇಲ್ಲಿಂದ ಕದಲದೇ ಉಪವಾಸ ಕುಳಿತುಕೊಳ್ಳುತ್ತೇವೆ ಎಂದು ಪಟ್ಟುಹಿಡಿದರು. ಆದರೆ, ಅನಂತಕುಮಾರ ಇನ್ನೂ ಸ್ಪರ್ಧಿಸಿದರೆ ಭಗವಂತ ಒಪ್ಪುವುದಿಲ್ಲ ಎಂದು ಹೇಳಿದರು.ಕಾರ್ಯಕರ್ತ ರಾಜೇಶ ಶೆಟ್ಟಿ, ನಮ್ಮನ್ನು ಬಿಜೆಪಿಗೆ ಕರೆದುಕೊಂಡು ಬಂದವರೇ ನೀವು. ಮುಂದಿನ ೫ ವರ್ಷ ಲೋಕಸಭೆ ಪ್ರತಿನಿಧಿಯಾಗಿ ನೀವು ಇರಬೇಕು. ಒಂದೊಮ್ಮೆ ಸ್ಪರ್ಧಿಸಲು ನಿರಾಕರಿಸಿದರೆ ಆಮರಣಾಂತ ಉಪವಾಸ ಮಾಡುತ್ತೇವೆ ಎಂದು ಆಗ್ರಹಿಸಿದರು.
ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ ಮಾತನಾಡಿ, ಕಾಡಿನಲ್ಲಿ ಹುಲಿ ಇದ್ದರೆ ಗತ್ತು ಇರುತ್ತದೆ. ಸಂಸತನಲ್ಲಿ ನಮ್ಮ ಉತ್ತರಕನ್ನಡದ ಹುಲಿ ಇರಬೇಕು ಎಂದು ಆಗ್ರಹಿಸಿದರು. ಜಿಪಂ ಮಾಜಿ ಸದಸ್ಯೆ ರೇಖಾ ಹೆಗಡೆ ಭಟ್ಕಳದಲ್ಲಿ ಒಂದು ಹೆಣ್ಣು ಮಗಳು ನಿರ್ಭಯವಾಗಿ ಓಡಾಡುವ ಇಂದಿನ ಸ್ಥಿತಿಗೆ ಅನಂತಕುಮಾರ ಹೆಗಡೆ ಕಾರಣ. ಇದುವರೆಗೂ ರಾಜಕೀಯ ವ್ಯಕ್ತಿಯಾಗದೇ ಆತ್ಮೀಯವಾಗಿ ನಮ್ಮನ್ನೆಲ್ಲ ಕಂಡವರು. ನೀವು ಸ್ಪರ್ಧಿಸಲೇಬೇಕು ಎಂದು ಆಗ್ರಹಿಸಿದರು. ನಗರಸಭೆ ಮಾಜಿ ಅಧ್ಯಕ್ಷ ರಮೇಶ ಆಚಾರಿ, ಸಿಪಿ ಪಾಟೀಲ, ಗಣೇಶ ಸಣ್ಣ ಲಿಂಗಣ್ಣ, ಪ್ರಕಾಶ ಸಾಲೇರ್ ಇತರರು ಇದೇ ಆಗ್ರಹ ಮಾಡಿದರು.ಬಳಿಕ ಮಾತನಾಡಿದ ಅನಂತಕುಮಾರ ಹೆಗಡೆ, ಆರು ಬಾರಿ ನನ್ನನ್ನು ಗೆಲ್ಲಿಸಿದ್ದೀರಿ, ನನಗೆ ಇನ್ನೇನು ಬೇಕು? ರಾಜಕೀಯದಿಂದ ದೂರ ಆಗಬೇಕು ಎಂದು ಕಳೆದ ಮೂರು ಅವಧಿಯಿಂದ ಹೇಳಿಕೊಂಡು ಬಂದಿದ್ದೇನೆ. ಜನ ನನ್ನನ್ನು ತಿರಸ್ಕರಿಸಿ ಹೊಸಬರ ಹೆಸರು ಹೇಳಲಿ ಎಂದು ಕಳೆದ ಮೂರು ವರ್ಷಗಳಿಂದ ಸಾರ್ವಜನಿಕರ ಭೇಟಿ ಸಹ ಮಾಡಿರಲಿಲ್ಲ. ನಾನೇ ಮತ್ತೆ ಮತ್ತೆ ಸ್ಪರ್ಧೆ ಮಾಡುವುದನ್ನು ಭಗವಂತನೂ ಒಪ್ಪುವುದಿಲ್ಲ. ಜಿಲ್ಲೆಯಲ್ಲಿ ಸಾಮರ್ಥ್ಯ ಉಳ್ಳವರು, ಆಕಾಂಕ್ಷಿತರು ಜಾಸ್ತಿ ಇದ್ದಾರೆ. ಅವರಿಗೂ ಅವಕಾಶ ಸಿಗಬೇಕು ಎಂದರು.
ನಾನು ನಿಲ್ಲುತ್ತೇನೆ ಎಂದಾದರೆ ಯಾರೂ ವಿರೋಧ ಮಾಡುವವರೂ ಇಲ್ಲ. ಆದರೆ, ನಾನೇ ತುಂಬ ದಿನದಿಂದ ರಾಜಕೀಯದಿಂದ ದೂರ ಆಗಬೇಕು ಎಂದು ನಿರ್ಣಯ ಮಾಡಿದ್ದೇನೆ, ಪಕ್ಷದ ಹಿರಿಯರಿಗೂ ಹೇಳಿದ್ದೇನೆ. ಈಗ ಎಲ್ಲರೂ ಒತ್ತಾಯ ಮಾಡುತ್ತಿದ್ದು, ನನಗೂ ಸಮಯಾವಕಾಶ ನೀಡಿ ಎಂದರು. ಆದರೆ, ಅಭಿಮಾನಿಗಳು, ಕಾರ್ಯಕರ್ತರು ಪಟ್ಟು ಬಿಡದೇ ಸ್ಪರ್ಧಿಸುತ್ತೇನೆ ಎಂದು ನೀವು ಹೇಳುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ಎಂದರು. ಬಳಿಕ ಮಾತನಾಡಿದ ಅನಂತಕುಮಾರ ಹೆಗಡೆ, ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ನಾನು ಖಂಡಿತ ತಲೆಬಾಗುತ್ತೇನೆ. ಈ ಪ್ರೀತಿ, ವಿಶ್ವಾಸವನ್ನು ತಿರಸ್ಕರಿಸುವಂತ ಮೂರ್ಖತನವನ್ನು ಭಗವಂತ ನನಗೆ ನೀಡದಿರಲಿ ಎಂದರು.ಹಣ ಸಿದ್ದರಾಮಯ್ಯನ ಅಪ್ಪನ ಆಸ್ತಿಯೇನೂ ಅಲ್ಲರಾಜ್ಯ ಸರ್ಕಾರಕ್ಕೆ ಕೇಂದ್ರ ಅನುದಾನ ನೀಡುತ್ತಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಕುರಿತಂತೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅನಂತಕುಮಾರ ಹೆಗಡೆ, ಸೋಗಲಾಡಿತನದ ಬದಲು ಸರಿಯಾದ ಯೋಜನೆಗಳನ್ನು ರೂಪಿಸಿಕೊಂಡು ಪ್ರಧಾನಿ ಭೇಟಿ ಮಾಡಿದ್ದರೆ ಸೂಕ್ತ ಅನುದಾನ ಬಿಡುಗಡೆ ಆಗುತ್ತಿತ್ತು. ಯಾವುದೋ ಯೋಜನೆ ಹಾಕಿಕೊಂಡು ಒಸಿ ಚೀಟಿ ತರಹ ಕೇಂದ್ರಕ್ಕೆ ಕಳಿಸಿದರೆ ಇದೇ ರೀತಿ ಆಗುತ್ತದೆ. ಯಾವುದೇ ಚೌಕಟ್ಟು ಇರದ ಯೋಜನೆ ಕಳಿಸಿದರೆ ಬಿಡುಗಡೆ ಮಾಡಲು ಹಣ ಸಿದ್ದರಾಮಯ್ಯನ ಅಪ್ಪನ ಆಸ್ತಿಯೇನೂ ಅಲ್ಲ. ಕೇಂದ್ರ ಸರ್ಕಾರಕ್ಕೆ ಯೋಜನೆಗಳನ್ನು ಸಲ್ಲಿಸುವಾಗ ಅದಕ್ಕೊಂದು ವಿಧಿ ವಿಧಾನಗಳಿರುತ್ತವೆ. ಸರಿಯಾಗಿ ಯೋಚನೆ ಮಾಡಿ ಸಿದ್ದರಾಮಯ್ಯ ಮಾತನಾಡಲಿ ಎಂದರು.
ಜಾತಿಯ ಹೆಸರಿನಲ್ಲಿ ಸಮಾಜ ಒಡೆಯುವುದು ಮತ್ತು ಜ್ಯಾತ್ಯತೀತತೆಯ ಬಗ್ಗೆ ಮಾತನಾಡುವುದು ಕಾಂಗ್ರೆಸ್ ಯಾವಾಗಲೂ ಮಾಡಿಕೊಂಡು ಬಂದ ಷಡ್ಯಂತ್ರ. ಈಗ ಉಪ ಜಾತಿಗಳ ಬಗ್ಗೂ ಮಾತನಾಡಿ ಒಡೆಯುವ ಪ್ರಯತ್ನ ಮುಂದುವರಿಸಿದೆ ಎಂದು ಆರೋಪಿಸಿದ ಅನಂತಕುಮಾರ ಹೆಗಡೆ, ಕಾಂಗ್ರೆಸ್ನ ಕೇಂದ್ರದ ನಾಯಕರು ರಾಜ್ಯದಲ್ಲಿ ಸ್ಪರ್ಧಿಸಿದರೆ ಸ್ವಾಗತವಿದೆ. ರಾಜ್ಯದ ಜನತೆ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.