ಚಿಕ್ಕಮಗಳೂರುಬದುಕಿನ ವಿಕಾಸಕ್ಕೆ ಆಧ್ಯಾತ್ಮದ ಅರಿವು ಬೇಕು. ನಡೆ ನುಡಿ ಮನಸ್ಸುಗಳ ಸಕ್ರಿಯ ಪರಿಪಾಠವೇ ನಿಜವಾದ ಆಧ್ಯಾತ್ಮ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ಹಣ್ಣೆಮಠದ ಶ್ರೀ ಶಿವಾನಂದ ನೂತನ ಗುರು ನಿವಾಸ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಬದುಕಿನ ವಿಕಾಸಕ್ಕೆ ಆಧ್ಯಾತ್ಮದ ಅರಿವು ಬೇಕು. ನಡೆ ನುಡಿ ಮನಸ್ಸುಗಳ ಸಕ್ರಿಯ ಪರಿಪಾಠವೇ ನಿಜವಾದ ಆಧ್ಯಾತ್ಮ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ಅಜ್ಜಂಪುರ ತಾಲೂಕಿನ ಹಣ್ಣೆಮಠದ ಶ್ರೀ ಶಿವಾನಂದ ನೂತನ ಗುರು ನಿವಾಸ ಉದ್ಘಾಟನೆ ಹಾಗೂ ಗಿರಿಜಾಕಲ್ಯಾಣೋತ್ಸವ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದಲ್ಲಿ ಆಶೀರ್ವಚನ ನೀಡಿ ಬದುಕಿನ ಉತ್ಕರ್ಷತೆ ಮತ್ತು ಶ್ರೇಯಸ್ಸು ಧರ್ಮಾಚರಣೆಯಲ್ಲಿದೆ. ಮನಸ್ಸು ವಿಕಾಸಗೊಳ್ಳಬೇಕು. ಹೃದಯ ಹಸನಾಗಬೇಕು. ಭಾವನೆಗಳು ವಿಕಾರಗೊಳ್ಳದೇ ವಿಕಾಸ ಗೊಳ್ಳಬೇಕು. ಜನರಲ್ಲಿ ಅರಿವು ಪ್ರಜ್ಞೆ ಜಾಗೃತಗೊಳ್ಳಬೇಕು. ಯತಾರ್ಥ ಮನುಷ್ಯ ಅರಿತು ಬಾಳಿದರೆ ಜೀವನದಲ್ಲಿ ಸುಖ ಶಾಂತಿ ಪ್ರಾಪ್ತವಾಗುತ್ತದೆ ಎಂದರು.

ಕೆಲವರ ಬದುಕು ಸುಖಮಯ.ಕೆಲವರದು ದುಃಖಮಯ. ಕೆಲವರ ಜೀವನ ಸಂಘರ್ಷ, ಕೆಲವರ ಬದುಕು ತುಂಬಾ ಚಿಂತನೆ ಗಳಿಂದ ಕೂಡಿರುತ್ತದೆ. ಹೃದಯವಂತಿಕೆ ಇಲ್ಲದೇ ಬುದ್ಧಿವಂತಿಕೆ ಎಷ್ಟೇ ಇದ್ದರೂ ಪ್ರಯೋಜನವಿಲ್ಲ. ಬುದ್ಧಿಗಿಂತ ಹೃದಯ ಶ್ರೀಮಂತಿಕೆ ಬಹಳಷ್ಟು ಮುಖ್ಯ. ವೀರಶೈವ ಧರ್ಮ ಸಂಸ್ಕೃತಿಯಲ್ಲಿ ಜ್ಞಾನ ಕ್ರಿಯೆಗೆ ಬಹಳ ಮಹತ್ವದ ಸ್ಥಾನವನ್ನು ಶ್ರೀ ಜಗದ್ಗುರು ರೇಣುಕಾಚಾರ್ಯರು ಕೊಟ್ಟಿದ್ದಾರೆ. ಸಾಮಾಜಿಕ ಸಂವೇದನಾಶೀಲ ಅರಿವನ್ನು ವೀರಶೈವ ಧರ್ಮ ಸಾರುತ್ತಾ ಬಂದಿದೆ. ಹಣ್ಣೆಮಠದಲ್ಲಿ ಹಿಂದಿನ ಲಿಂ. ಶಿವಾನಂದ ಶಿವಾಚಾರ್ಯರ ನಾಮಾಂಕಿತದಲ್ಲಿ ಶ್ರೀ ಶಿವಾನಂದ ನಿವಾಸ ನಿರ್ಮಾಣ ಮಾಡಿರುವುದು ಸಂತೋಷ ತಂದಿದೆ. ಇಂದಿನ ಪಟ್ಟಾಧ್ಯಕ್ಷ ಮರುಳಸಿದ್ಧ ಪಂಡಿತಾರಾಧ್ಯ ಸ್ವಾಮಿಗಳು ಅತ್ಯಂತ ಕ್ರಿಯಾ ಶೀಲರಾಗಿ ಶ್ರೀಮಠದ ಅಭಿವೃದ್ಧಿ ಮತ್ತು ಭಕ್ತರಿಗೆ ಮಾರ್ಗದರ್ಶನ ತೋರುತ್ತಿರುವುದು ತಮಗೆ ಸಂತೋಷ ತಂದಿದೆ. ಶ್ರೀ ಪೀಠದಿಂದ ರೇಶ್ಮೆ ಮಡಿ ಸ್ಮರಣಿಕೆ ನೀಡಿ ಆಶೀರ್ವದಿಸಿದರು.

ನೇತೃತ್ವ ವಹಿಸಿದ ಹಣ್ಣೆ ಹಿರೇಮಠದ ಶ್ರೀ ಮರುಳಸಿದ್ಧ ಪಂಡಿತಾರಾಧ್ಯ ಮಾತನಾಡಿ, ಪರಿಶುದ್ಧ ಮನಸ್ಸು ಭಗವಂತನ ದರ್ಶನಕ್ಕೆ ಹೋಗುವ ಹೆಬ್ಬಾಗಿಲು. ಒಳ್ಳೆಯದಕ್ಕೂ ಕೆಟ್ಟದ್ದಕ್ಕೂ ಮನುಷ್ಯನ ಮನಸ್ಸೇ ಮೂಲ ಕಾರಣ. ನಿರಂತರ ಪ್ರಯತ್ನ ಮತ್ತು ಸಾಧನೆಯಿಂದ ಶ್ರೇಯಸ್ಸು ಕಾಣಲು ಸಾಧ್ಯ. ಲಿಂ. ಶ್ರೀ ಶಿವಾನಂದ ಶಿವಾಚಾರ್ಯರ ನಾಮಾಂಕಿತದಲ್ಲಿ ಗುರು ನಿವಾಸ ನಿರ್ಮಾಣ ಗೊಂಡಿರುವುದು ತಮಗೆ ಸಂತೃಪ್ತಿ ತಂದಿದೆ. ಇದಕ್ಕೆ ರಂಭಾಪುರಿ ಶ್ರೀಗಳ ಆಶೀರ್ವಾದ, ಭಕ್ತರ ಸಹಕಾರ ಕಾರಣ ಎಂದರು.

ನೂತನ ಶ್ರೀ ಶಿವಾನಂದ ಗುರುನಿವಾಸವನ್ನು ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಜಿ.ಎಸ್.ಪ್ರಕಾಶ್, ಚಿಕ್ಕಾನವಂಗಲದ ರಾಜಣ್ಣ, ತರೀಕೆರೆಯ ಬಿ.ರಾಜಣ್ಣ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.

ಸಮಾರಂಭದಲ್ಲಿ ಹುಲಿಕೆರೆ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯರು, ಎಡೆಯೂರು ಶ್ರೀ ರೇಣುಕ ಶಿವಾಚಾರ್ಯರು, ತರೀಕೆರೆ ಶ್ರೀ ಜಗದೀಶ್ವರ ಶಿವಾಚಾರ್ಯರು, ಹುಣಸಘಟ್ಟ ಶ್ರೀ ಗುರುಮೂರ್ತಿ ಶಿವಾಚಾರ್ಯರು, ಬಿಳಕಿ ಶ್ರೀರಾಚೋಟೇಶ್ವರ ಶಿವಾಚಾ ರ್ಯರು, ನಂದಿಪುರ ಶ್ರೀ ನಂದೀಶ್ವರ ಶಿವಾಚಾರ್ಯರು, ಬೀರೂರು ಶ್ರೀ ರುದ್ರಮುನಿ ಶಿವಾಚಾರ್ಯರು, ತಾವರೆಕೆರೆ ಡಾ.ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಪಾಲ್ಗೊಂಡಿದ್ದರು.

- ಕೋಟ್‌ --

ನೆಮ್ಮದಿಯ ಬದುಕಿಗಾಗಿ ಧರ್ಮದ ಆಚರಣೆ ಅವಶ್ಯಕ. ಶಿಕ್ಷಣದ ಜೊತೆಗೆ ಸಂಸ್ಕಾರ ಬೆಳೆದು ಬಂದಾಗ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಹಣ್ಣೆ ಮಠ ಧರ್ಮ ಕಾರ್ಯದ ಜೊತೆಗೆ ಸಾಮಾಜಿಕ ಕಾರ್ಯಗಳಿಗೂ ಕೈ ಜೋಡಿಸಿ ರುವುದು ಹೆಮ್ಮೆಯ ಸಂಗತಿ.

- ಡಿ.ಎಸ್.ಸುರೇಶ್,ಮಾಜಿ ಶಾಸಕ

ಫೋಟೋ:

ಅಜ್ಜಂಪುರದ ಹಣ್ಣೆಮಠದ ಶ್ರೀ ಶಿವಾನಂದ ನೂತನ ಗುರು ನಿವಾಸ ಉದ್ಘಾಟನೆ ಹಾಗೂ ಗಿರಿಜಾಕಲ್ಯಾಣೋತ್ಸವ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಆಶೀರ್ವಚನ ನೀಡಿದರು. ಮರುಳಸಿದ್ಧ ಪಂಡಿತಾರಾಧ್ಯ ಶ್ರೀ, ಹುಲಿಕೆರೆ ಶ್ರೀ ವಿರೂಪಾಕ್ಷಲಿಂಗ ಶ್ರೀ, ಎಡೆಯೂರು ರೇಣುಕ ಶ್ರೀ, ತರೀಕೆರೆ ಜಗದೀಶ್ವರ ಶ್ರೀ, ಹುಣಸಘಟ್ಟ ಗುರುಮೂರ್ತಿ ಶ್ರೀ, ಬಿಳಕಿ ರಾಚೋಟೇಶ್ವರ ಶ್ರೀ, ನಂದಿಪುರ ನಂದೀಶ್ವರ ಶ್ರೀ, ಬೀರೂರು ರುದ್ರಮುನಿ ಶ್ರೀ, ತಾವರೆಕೆರೆ ಡಾ. ಅಭಿನವ ಸಿದ್ಧಲಿಂಗ ಶ್ರೀ ಪಾಲ್ಗೊಂಡಿದ್ದರು.