ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಸೋಮವಾರಪೇಟೆ ವಲಯದ ಬ್ಯಾಡಗೊಡ್ಡ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಬೀಟೆ ನಾಟಗಳನ್ನು ಅರಣ್ಯ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ.ಬ್ಯಾಡಗೊಟ್ಟ ಗ್ರಾಮದ ಬಿ.ಡಿ.ಅಣ್ಣಯ್ಯ ಮತ್ತು ವಾಹನ ಮಾಲಿಕ ಬಿ.ವಿ.ಚಂದ್ರ ಎಂಬವರ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಆರೋಪಿ ಅಣ್ಣಯ್ಯ ಅವರ ಸೀಗೆಹೊಸೂರು ಗ್ರಾಮದ ಜಮೀನಿನಲ್ಲಿ ಮರಗಳನ್ನು ಕಡಿದು ನಾಟಗಳನ್ನಾಗಿ ಪರಿವರ್ತಿಸಿ ವಾಹನದಲ್ಲಿ ತುಂಬಿಸಿಕೊಂಡು ಮಲ್ಲೇನಹಳ್ಳಿ ಗ್ರಾಮದ ತನ್ನ ಗೋದಾಮಿನಲ್ಲಿ ನಿಲ್ಲಿಸಿದ್ದರು. ಮಾಹಿತಿ ಪಡೆದ ಸೋಮವಾರಪೇಟೆ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿ ಬೀಟೆ ನಾಟಾಗಳು ಮತ್ತು ವಾಹನವನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಎಸಿಎಫ್ ಗೋಪಾಲ್ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ಶೈಲೇಂದ್ರಕುಮಾರ್, ಡಿಆರ್‌ಎಫ್‌ಒ ಬಿ.ಎನ್.ಗುರುಪ್ರಸಾದ್, ಸಿಬ್ಬಂದಿಗಳಾದ ವರುಣ್, ಜೀವನ್, ದರ್ಶನ್, ವಿಕಾಸ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.