ಭೈರಾಪುರ ಕಿರು ಅರಣ್ಯದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ : ದಾಳಿ

| Published : Nov 06 2024, 12:55 AM IST

ಸಾರಾಂಶ

ಭದ್ರಾವತಿ: ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಎನ್.ಆರ್.ಪುರ ತಾಲೂಕಿನ ಭೈರಾಪುರ ಸರ್ವೆ ನಂ.೪೪, ಭೈರಾಪುರ ಕಿರು ಅರಣ್ಯದ ೩ ಎಕರೆ ೭ ಗುಂಟೆ ಒತ್ತುವರಿ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆಯಿಂದ ಇಟ್ಟಿಗೆ ತಯಾರಿಸಿ ಮಾರಾಟ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ ಆಶೀಶ್ ರೆಡ್ಡಿ ತಿಳಿಸಿದರು.

ಭದ್ರಾವತಿ: ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಎನ್.ಆರ್.ಪುರ ತಾಲೂಕಿನ ಭೈರಾಪುರ ಸರ್ವೆ ನಂ.೪೪, ಭೈರಾಪುರ ಕಿರು ಅರಣ್ಯದ ೩ ಎಕರೆ ೭ ಗುಂಟೆ ಒತ್ತುವರಿ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆಯಿಂದ ಇಟ್ಟಿಗೆ ತಯಾರಿಸಿ ಮಾರಾಟ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ ಆಶೀಶ್ ರೆಡ್ಡಿ ತಿಳಿಸಿದರು.

ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಅವರು, ಭದ್ರಾವತಿ ಅರಣ್ಯ ವಿಭಾಗ, ಎನ್.ಆರ್‌.ಪುರ ತಾಲೂಕು ಭೈರಾಪುರ ಸರ್ವೆ ನಂ.೪೪ ಭೈರಾಪುರ ಕಿರು ಅರಣ್ಯದಲ್ಲಿ ಚಿತ್ರಪ್ಪ ಯರಬಾಳು ಎಂಬುವರು ೩ ಎಕರೆ ೭ ಗುಂಟೆ ಒತ್ತುವರಿ ಮಾಡಿ ಅಕ್ರಮವಾಗಿ ಮಣ್ಣು ಗಣಿಗಾರಿಕೆಯಿಂದ ಇಟ್ಟಿಗೆ ತಯಾರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ದೂರಿನ ಮೇರೆಗೆ ತನಿಖೆ ಮಾಡಲಾಗಿದ್ದು, ದೂರು ಸತ್ಯವಾಗಿರುವುದು ಕಂಡು ಬಂದಿದೆ. ಈ ಒತ್ತುವರಿ ಪ್ರದೇಶ ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಅಲ್ಲದೆ ಪರಿಸರ ಸೂಕ್ಷ್ಮ ವಲಯದ ಒಳಗೆ ಬರುತ್ತದೆ. ಈ ಹಿನ್ನಲೆಯಲ್ಲಿ ಅ.೨೮ ರಂದು ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು. ಈ ಒತ್ತುವರಿ ಪ್ರದೇಶದಿಂದ ೨ ಟ್ರ್ಯಾಕ್ಟರ್ ಲೋಡ್ ಇಟ್ಟಿಗೆ, ವಲಯ ಕಚೇರಿ ಆವರಣಕ್ಕೆ ಸಾಗಿಸಿ ಉಳಿದ ಸುಮಾರು ೧೦ ಟ್ರ್ಯಾಕ್ಟರ್ ಲೋಡ್ ಇಟ್ಟಿಗೆ ಸ್ಥಳದಲ್ಲಿಯೇ ಮಹಜರ್ ನಡೆಸಿ ಸರ್ಕಾರದ ಪರವಾಗಿ ಅಮಾನತ್ತು ಪಡಿಸಿಕೊಳ್ಳಲಾಗಿದೆ. ಈ ಇಟ್ಟಿಗೆ ನಿಯಾಮಾನುಸಾರ ವಿಲೇಗೊಳಿಸಲು ನ್ಯಾಯಾಲಯದ ಅನುಮತಿ ಪಡೆದುಕೊಳ್ಳಲಾಗಿದೆ ಎಂದರು. ಸುಮಾರು ೧ ರಿಂದ ೨ ವರ್ಷ ಒತ್ತುವರಿ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆಯಿಂದ ಮಣ್ಣನ್ನು ತೆಗೆದು ಇಟ್ಟಿಗೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಅಲ್ಲದೆ ಯಾವುದೇ ಪರವಾನಿಗೆ ಇಲ್ಲದೆ ಸರ್ಕಾರಕ್ಕೆ ಯಾವುದೇ ರಾಜಸ್ವ ಪಾವತಿಸದೆ ಗಣಿಗಾರಿಗೆ ಚಟುವಟಿಕೆ ನಡೆಸಿರುವುದು ಸಹ ವಿಚಾರಣೆ ವೇಳೆ ತಿಳಿದು ಬಂದಿದೆ. ಇದರಿಂದ ಪರಿಸರಕ್ಕೆ ಹಾನಿಯಾಗಿರುವುದಲ್ಲದೇ ಸರ್ಕಾರಕ್ಕೆ ಲಕ್ಷಾಂತರ ರು. ನಷ್ಟವಾಗಿದೆ ಎಂದು ತಿಳಿಸಿದರು. ಈ ಪ್ರಕರಣದ ಕುರಿತು ವಿಚಾರಣೆಗಾಗಿ ನ.೪ ರಂದು ವಲಯ ಕಚೇರಿಗೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಈ ಪ್ರಕರಣದಲ್ಲಿ ಆರೋಪಿ ಚಿತ್ರಪ್ಪ ಯರಬಾಳು ದೂರುತ್ತಿರುವ ಹಾಗೆ ಅವರ ತಂದೆಯ ಮೇಲೆ ಇಲಾಖಾ ಸಿಬ್ಬಂದಿ ಜಾತಿ ನಿಂದನೆ ಮಾಡಿಲ್ಲ. ವಾಸ್ತವಾಗಿ ಅ.೨೮ ರಂದು ಸ್ಥಳ ತನಿಖೆ ಸಂದರ್ಭದಲ್ಲಿ ಆರೋಪಿತರ ಕಡೆಯವರು ಇಲಾಖಾ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಇದರ ವೀಡಿಯೋ ಚಿತ್ರೀಕರಣ ಲಭ್ಯವಿದೆ ಎಂದು ಹೇಳಿದರು.

ಭೈರಾಪುರ ಸ.ನಂ.೪೪, ಭೈರಾಪುರ ಕಿರು ಅರಣ್ಯದಲ್ಲಿ ಬೂವಣ್ಣ ಎಂಬುವರ ಮತ್ತೊಂದು ಪ್ರಕರಣದಲ್ಲಿ ಅರಣ್ಯ ಒತ್ತುವರಿಯನ್ನು ಭೂ ಕಬಳಿಕೆ ವಿಶೇಷ ನ್ಯಾಯಲಯದ ತೀರ್ಪಿನಂತೆ ತೆರವುಗೊಳಿಸಿ ಇಲಾಖಾ ಸುಪರ್ದಿಗೆ ತೆಗೆದುಕೊಳ್ಳಲಾದೆ. ಅಲ್ಲದೆ ಆರೋಪಿ ಅರಣ್ಯ ಒತ್ತುವರಿಯ ವಿರುದ್ಧ ೬೪ ಎ ನಡಾವಳಿಯ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಮತ್ತು ನ್ಯಾಯಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.