ಕನ್ನಡಪ್ರಭ ವಾರ್ತೆ ಅಥಣಿ

ತಾಲೂಕಿನ ಮದಭಾವಿ ರಸ್ತೆಯ ಹಣಮಾಪೂರ ಕ್ರಾಸ್ ಬಳಿ ಟೆಂಪೋ ಹಾಗೂ ಕ್ರೂಸರ್ ಮಧ್ಯೆ ಭೀಕರ ಅಪಘಾತವಾಗಿದ್ದು, ಇದರಿಂದ ಅಕ್ರಮವಾಗಿ ನಡೆಯುತ್ತಿದ್ದ ದಂಧೆಯೊಂದು ಬೆಳಕಿಗೆ ಬಂದಿದೆ. ಎರಡು ವಾಹನಗಳು ಸಂಪೂರ್ಣ ನಜ್ಜು ಗುಜ್ಜಾಗಿವೆ.

ಟೆಂಪೋ ವಾಹನದಲ್ಲಿ ನೆರೆಯ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಗುಟಕಾ ಮತ್ತು ತುಂಬಾಕು ಉತ್ಪನ್ನಗಳನ್ನು ಸಾಗಿಸುತ್ತಿತ್ತು ಎನ್ನುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಸೋಯಾಬಿನ್ ಹಾಕಿ ಒಳಗಡೆ ಗುಟಕಾ ಚೀಲಗಳನ್ನು ಹಾಕಿ ಸಾಗಿಸಲಾಗುತ್ತಿತ್ತು. ಅಪಘಾತದ ರಭಸಕ್ಕೆ ಗುಟಕಾ ಪ್ಯಾಕೇಟ್‌ಗಳು ರಸ್ತೆಗೆ ಬಿದ್ದಿದ್ದು, ಸಾರ್ವಜನಿಕರ ಸಂಶಯಕ್ಕೆ ಕಾರಣವಾಗಿದೆ. ಈ ವೇಳೆ ಪೊಲೀಸರ ಮತ್ತು ಸಾರ್ವಜನಿಕರ ಮಧ್ಯೆ ವಾಗ್ವಾದ ನಡೆದಿದ್ದು, ಈ ಪ್ರಸಂಗವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರ ಲಾಭ ಪಡೆದುಕೊಂಡಿರುವ ಅಕ್ರಮ ದಂಧೆಕೋರರು, ಗಡಿಭಾಗವಾದ ಅಥಣಿಯನ್ನು ತಮ್ಮ ಕಳ್ಳಸಾಗಣೆ ಜಾಲದ ಪ್ರಮುಖ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ದವಸ-ಧಾನ್ಯಗಳನ್ನು ಸಾಗಿಸುವ ಗೂಡ್ಸ್ ವಾಹನಗಳ ನೆಪದಲ್ಲಿ ಅಥಣಿಯಿಂದ ಮಹಾರಾಷ್ಟ್ರದ ಮೀರಜ್, ಸಾಂಗ್ಲಿ ನಗರಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂಬ ಮಾಹಿತಿ ಈ ಘಟನೆಯಿಂದ ಹೊರ ಬಿದ್ದಿದೆ.