ಕನ್ನಡಪ್ರಭ ವಾರ್ತೆ ಬೆಳಗಾವಿ ಖಾನಾಪೂರ ತಾಲೂಕಿನ ಜಾಂಬೋಟಿಯಿಂದ ಕಣಕುಂಬಿಗೆ ತೆರಳುವ ರಸ್ತೆಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 14 ಸಾವಿರ ಲೀಟರ್ ಮದ್ಯಸಾರ (ಸ್ಪಿರಿಟ್)ವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬುಧವಾರ ಬೆಳಗಿನ ಜಾವ 3.45 ಗಂಟೆ ಸುಮಾರಿಗೆ ನಡೆದ ಕಾರ್ಯಾಚರಣೆಯಲ್ಲಿ, ಚಾಕೋಲೇಟ್ ಬಣ್ಣದ ಖಾಸಗಿ ವಾಹನದಲ್ಲಿ ಟ್ಯಾಂಕರ್ ವಾಹನ ತಪಾಸಣೆ ನಡೆಸಿದಾಗ, ಮಾರಾಟ ಉದ್ದೇಶಕ್ಕಾಗಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 14,000 ಲೀಟರ್ ಮದ್ಯಸಾರ ಪತ್ತೆಯಾಗಿದೆ

ಕನ್ನಡಪ್ರಭ ವಾರ್ತೆ ಬೆಳಗಾವಿ

ಖಾನಾಪೂರ ತಾಲೂಕಿನ ಜಾಂಬೋಟಿಯಿಂದ ಕಣಕುಂಬಿಗೆ ತೆರಳುವ ರಸ್ತೆಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 14 ಸಾವಿರ ಲೀಟರ್ ಮದ್ಯಸಾರ (ಸ್ಪಿರಿಟ್)ವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬುಧವಾರ ಬೆಳಗಿನ ಜಾವ 3.45 ಗಂಟೆ ಸುಮಾರಿಗೆ ನಡೆದ ಕಾರ್ಯಾಚರಣೆಯಲ್ಲಿ, ಚಾಕೋಲೇಟ್ ಬಣ್ಣದ ಖಾಸಗಿ ವಾಹನದಲ್ಲಿ ಟ್ಯಾಂಕರ್ ವಾಹನ ತಪಾಸಣೆ ನಡೆಸಿದಾಗ, ಮಾರಾಟ ಉದ್ದೇಶಕ್ಕಾಗಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 14,000 ಲೀಟರ್ ಮದ್ಯಸಾರ ಪತ್ತೆಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೆಗ್ಗಿನವಾಳು ನಿವಾಸಿ, ವಾಹನ ಚಾಲಕ ಸಿದ್ದರಾಜು ಪುಟ್ಟಸ್ವಾಮಿ ಶೆಟ್ಟಿ (47) ಎಂಬುವರಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ಮುಂದಿನ ತನಿಖೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ವಾಹನದ ಮಾಲೀಕನ ಪತ್ತೆ ಮತ್ತು ಬಂಧನಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ 14 ಸಾವಿರ ಲೀಟರ್ ಮದ್ಯಸಾರ ಮೌಲ್ಯ ₹14 ಲಕ್ಷ, ಆರೋಪಿತನ ಮೊಬೈಲ್ ಫೋನ್ ಮೌಲ್ಯ ₹1,500 ಹಾಗೂ ವಾಹನದ ಮೌಲ್ಯ ₹21 ಲಕ್ಷ ಸೇರಿದಂತೆ ಒಟ್ಟು ₹35.01 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಅಬಕಾರಿ ಅಪರ ಆಯುಕ್ತ ಡಾ.ವೈ.ಮಂಜುನಾಥ, ಅಬಕಾರಿ ಜಂಟಿ ಆಯುಕ್ತ ಎಫ್.ಎಚ್.ಚಲವಾದಿ, ಅಬಕಾರಿ ಉಪ ಆಯುಕ್ತ ಜಗದೀಶ ಎನ್.ಕೆ. ಹಾಗೂ ಅಬಕಾರಿ ನಿರೀಕ್ಷಕ ವಿಜಯಕುಮಾರ ಜೆ. ಹಿರೇಮಠ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಅಬಕಾರಿ ಉಪ ಅಧೀಕ್ಷಕ ರವಿ ಎಂ.ಮುರಗೋಡ, ಅಬಕಾರಿ ನಿರೀಕ್ಷಕ ಮಂಜುನಾಥ ಮೆಳ್ಳಿಗೇರಿ, ನೂರುಲ್ಲಾಖಾನ್‌, ಸುನಿಲ ಎಸ್‌.ಪಾಟೀಲ ಸೇರಿದಂತೆ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.