ಸಾರಾಂಶ
ಕನ್ನಡಪ್ರಭ ವಾರ್ತೆ ಕೊಟ್ಟೂರುಸರ್ಕಾರ ಗ್ಯಾರಂಟಿಗಳಿಗೆ ಕೋಟ್ಯಾಂತರ ರೂಪಾಯಿ ನೀಡುವಂತೆಯೇ ಪತ್ರಕರ್ತರಿಗೆ ನಿಗದಿತ ಮಾಶಾಸನ ಮತ್ತು ಗೌರವ ಧನ ನೀಡುವ ಯೋಜನೆ ರೂಪಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮುಂದಾಗಿ ಕಾರ್ಯಯೋಜನೆ ರೂಪಿಸಿ ಪತ್ರಕರ್ತರ ಬದುಕಿನ ಭದ್ರತೆಗೆ ನೆಲೆ ಕಲ್ಪಿಸಬೇಕು ಎಂದು ಶಾಸಕ ಕೆ.ನೇಮರಾಜ್ನಾಯ್ಕ ತಿಳಿಸಿದರು.ಪಟ್ಟಣದ ಶ್ರೀಚಾನುಕೋಟಿ ಮಠದ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಭಾನುವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಿಕಾ ಮಾಧ್ಯಮ ಉಳಿದೆಲ್ಲಾ ಮಾಧ್ಯಮಗಳಿಗಿಂತ ನಿರಂತರವಾಗಿ ವಿಶ್ವಾಸಾರ್ಹತೆ ಉಳಿಸಿಕೊಂಡು ಬಂದಿದೆ. ಈ ರಂಗ ಇಲ್ಲದಿದ್ದರೇ ಪ್ರಪಂಚ ಬರಡಾಗುತ್ತಿತ್ತು. ಶಾಸಕರು, ಸಂಸದರು ಮತ್ತು ಇತರ ಸ್ಥಳೀಯ ಜನಪ್ರತಿನಿಧಿಗಳಿಗೆ ನಿಗದಿಯಾಗಿರುವಂತೆ ಪತ್ರಕರ್ತರಿಗೂ ಮಾಶಾಸನದ ಗೌರವಧನ ನಿಗದಿಗೊಳ್ಳಬೇಕು ಎಂದರು.ಕೊಟ್ಟೂರು ಪಟ್ಟಣದಲ್ಲಿ ನಿವೇಶನವಿದ್ದರೇ ಪತ್ರಕರ್ತರ ಭವನ ನಿರ್ಮಾಣಕ್ಕೆ ಸೂಕ್ತ ಬಗೆಯ ಅನುದಾನವನ್ನು ಖಂಡಿತ ನೀಡುವೆ. ಅಲ್ಲದೇ ಈಗಾಗಲೇ ಹಗರಿಬೊಮ್ಮನಹಳ್ಳಿಯಲ್ಲಿನ ಪತ್ರಿಕಾ ಭವನದ ನಿರ್ಮಾಣ ಕಾರ್ಯಕ್ಕೆ ₹೨೫ ಲಕ್ಷ ಅನುದಾನ ನೀಡಿದ್ದು, ವಸತಿ ಸಚಿವರೊಂದಿಗೆ ಮಾತನಾಡಿ ಪ್ರತಿಯೊಬ್ಬ ಪತ್ರಕರ್ತರಿಗೂ ನಿವೇಶನ ದೊರಕಿಸಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ ಹರ್ಷವರ್ಧನ ಮಾತನಾಡಿದರು. ಕನ್ನಡ ಸಹ ಪ್ರಾಧ್ಯಾಪಕ ಡಾ. ಸತೀಶ ಪಾಟೀಲ್ ವಿಶೇಷ ಉಪನ್ಯಾಸ ನೀಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಪಿ.ಎಚ್. ದೊಡ್ಡರಾಮಣ್ಣ, ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ಬಿ.ಮರಿಸ್ವಾಮಿ, ಬಿಜೆಪಿ ಮುಖಂಡ ಬಿ.ಆರ್. ವಿಕ್ರಮ್, ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಪಿ.ಸತ್ಯನಾರಾಯಣ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಹರಾಳ್ ನಂಜಪ್ಪ, ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ, ಕಾರ್ಯದರ್ಶಿ ಸಿ.ಕೆ. ನಾಗರಾಜ ವೇದಿಕೆಯಲ್ಲಿದ್ದರು. ಉಜ್ಜಿನಿ ಸದ್ದರ್ಮ ಪೀಠದ ಆಸ್ಥಾನ ಕಲಾವಿದ ಜೆ.ಎಚ್.ಎಂ. ವಾಗಿಶಯ್ಯ ರಿಂದ ಸಂಗೀತ ಕಾರ್ಯಕ್ರಮ ನೀಡಿ ನೆರೆದಿದ್ದವರನ್ನು ಆಕರ್ಷಿಸಿದರು.ಚಾನುಕೋಟಿ ಮಠಾಧ್ಯಕ್ಷ ಡಾ.ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು, ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಸುರೇಶ ದೇವರಮನಿ ಅಧ್ಯಕ್ಷತೆ ಮಾತನಾಡಿದರು. ಪತ್ರಿಕಾ ದಿನಾಚರಣೆ ಅಂಗವಾಗಿ ಹಿರಿಯ ಪತ್ರಕರ್ತ ಉಜ್ಜಿನಿ ರುದ್ರಪ್ಪ, ಜಿ.ಸೋಮಶೇಖರ ಮತ್ತು ಇತರ ಸಾಧಕರನ್ನು ಸನ್ಮಾನಿಸಲಾಯಿತು. ಶಿಕ್ಷಕ ಎಸ್.ಎಂ.ಮರುಳಸಿದ್ದಯ್ಯ ನಿರೂಪಿಸಿ, ಉಜ್ಜಿನಿ ರುದ್ರಪ್ಪ ಸ್ವಾಗತಿಸಿದರು.