ಸಾರಾಂಶ
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವರ್ಗದ ಜನರ ಯಾವುದೇ ಸಮಸ್ಯೆಗಳಿಗೆ ಜಿಲ್ಲಾಡಳಿತವು ತಕ್ಷಣವೇ ಸ್ಪಂದಿಸಲಿದೆ ಎಂದು ಜಿಲ್ಲಾಧಿಕಾರಿ ಸುಶೀಲಾ ಹೇಳಿದರು.
ಬಪ್ಪರಗಾದಲ್ಲಿ ಡಿಸಿ, ಎಸ್ಪಿ ಕುಂದುಕೊರತೆ ಸಭೆ
ಕನ್ನಡಪ್ರಭ ವಾರ್ತೆ ಹುಣಸಗಿಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವರ್ಗದ ಜನರ ಯಾವುದೇ ಸಮಸ್ಯೆಗಳಿಗೆ ಜಿಲ್ಲಾಡಳಿತವು ತಕ್ಷಣವೇ ಸ್ಪಂದಿಸಲಿದೆ ಎಂದು ಜಿಲ್ಲಾಧಿಕಾರಿ ಸುಶೀಲಾ ಹೇಳಿದರು.
ತಾಲೂಕಿನ ಬಪ್ಪರಗಾ ಗ್ರಾಮದಲ್ಲಿ ಜಿಲ್ಲಾ ಪೊಲೀಸ್, ಸುರಪುರ ಉಪ-ವಿಭಾಗ, ನಾರಾಯಣಪೂರ ಪೊಲೀಸ್ ಠಾಣೆ ಸಂಯೋಗದಲ್ಲಿ ಶುಕ್ರವಾರ ನಡೆದ ಎಸ್ಸಿ-ಎಸ್ಟಿ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.ಮೂಲಭೂತ ಸೌಕರ್ಯ ಮತ್ತು ವಿವಿಧ ಗಂಭೀರ ಸಮಸ್ಯೆ ಇದ್ದಾಗ ನೇರವಾಗಿಯೇ ಗಮನಕ್ಕೆ ತರಬಹುದು. ನರೇಗಾ ಯೋಜನೆಯಡಿ ಕೆಲಸ ಹಾಗೂ ವಸತಿ ಕಲ್ಪಿಸಲು ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾತನಾಡಿ, ಯಾವುದೇ ತೊಂದರೆ ಉಂಟಾದಾಗ ಎಸ್ಸಿ-ಎಸ್ಟಿ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಮತ್ತು ಅವುಗಳ ಮಹತ್ವವನ್ನು ತಿಳಿಸಿದರು. ಅಕ್ರಮ ಮದ್ಯ ಮಾರಾಟ, ಇಸ್ಪೀಟ್, ಮಟಕಾ ಹೀಗೇ ಸಮಾಜಕ್ಕೆ ಮಾರಕವಾದ ದಂಧೆಗಳು ನಡೆದರೆ ಮಾಹಿತಿ ನೀಡತಕ್ಕದು ಎಂದರು. ನಂತರ ಗ್ರಾಮದ ದಲಿತ ನಿವಾಸಿಗರು ತಮ್ಮ ವಿವಿಧ ಸಮಸ್ಯೆಗಳನ್ನು ಅಧಿಕಾರಿಗಳ ಎದುರು ಬಿಚ್ಚಿಟ್ಟರು.ಈ ಸಂದರ್ಭ ಡಿವೈಎಸ್ಪಿ ಜಾವೀದ್ ಇನಾಮದಾರ್, ತಹಸೀಲ್ದಾರ ಬಸಲಿಂಗಪ್ಪ ನೈಕೋಡಿ, ಸಿಪಿಐ ರವಿಕುಮಾರ್, ಇಒ ಬಸಣ್ಣ ನಾಯಕ, ಪಿಎಎಸ್ಐ ಚಂದ್ರಶೇಖರ್ ನಾರಾಯಣಪುರ, ಗ್ರಾಮಸ್ಥರು ಇದ್ದರು.
ಸಂತ್ರಸ್ತೆ ಭೇಟಿ:ಕಳೆದ ವರ್ಷ ಇಲ್ಲಿನ ಗ್ರಾಮವೊಂದರಲ್ಲಿ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆ ಹಾಗೂ ಕುಟುಂಬಸ್ಥರನ್ನು ಭೇಟಿಯಾದರು. ಸರಕಾರದಿಂದ ನೀಡಲಾಗಿರುವ ಸೌಲಭ್ಯಗಳನ್ನು ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸುಶೀಲಾ ತಿಳಿಸಿದರು.
ಸಂತ್ರಸ್ತೆ ಬಾಲಕಿಗೆ ಸರ್ಕಾರದ ಸೌಲಭ್ಯಗಳನ್ನು ಜಿಲ್ಲಾಡಳಿತ ಆದಷ್ಟು ಬೇಗನೆ ಮಂಜೂರು ಮಾಡುವಂತೆ ಹಾಗೂ ಬಾಲಕಿಗೆ 18 ವರ್ಷ ತುಂಬುತ್ತಿದ್ದಂತೆಯೇ ಸರಕಾರದಿಂದ ಯಾವುದಾದರೂ ಒಂದು ಹುದ್ದೆಯನ್ನು ನೀಡಬೇಕು ಎಂದು ಸಂಗಮೇಶ ಮಾಸ್ತರ ಕೊಡೇಕಲ್ಲ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.