ಕನ್ನಡಪ್ರಭ ವಾರ್ತೆ ಹರಿಹರ

ಒಳ ಮೀಸಲಾತಿಯನ್ನು ಪರಿಪೂರ್ಣವಾಗಿ ಜಾರಿಗೊಳಿಸುವುದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಶೇ.24.1ರಷ್ಟು ಅನುದಾನ ಮೀಸಲಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದಿಂದ ಬುಧವಾರ ಮುಖ್ಯಮಂತ್ರಿ ಅವರಿಗೆ ತಹಸೀಲ್ದಾರ್ ಸಂತೋಷ್ ಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು.

ನಂತರ ಕ.ದ.ಸಂ.ಸ. ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಮಾತನಾಡಿ, ಶೇ.24.1ರಷ್ಟು ಮೀಸಲಿರಿಸಿದ ಅನುದಾನ ದುರ್ಬಳಕೆ ತಡೆಯಲು ಎಸ್.ಸಿ.ಎಸ್.ಪಿ., ಟಿ.ಎಸ್.ಪಿ. ಕಾಯ್ದೆಯ 2003ರ ಸೆಕ್ಷನ್ 7(ಡಿ) ರದ್ದುಪಡಿಸಿದಂತೆ, 7 (ಸಿ) ರದ್ದುಪಡಿಸಿ 2026-27ನೇ ಬಜೆಟ್ ಅಧಿವೇಶನದಲ್ಲಿ ಆದೇಶ ಹೊರಡಿಸಬೇಕು ಎಂದರು.

ಕ.ದ.ಸಂ.ಸ. ಸಂಸ್ಥಾಪಕ ಪ್ರೊ. ಬಿ.ಕೃಷ್ಣಪ್ಪ ಅವರಿಗೆ ‘ಕರ್ನಾಟಕ ರತ್ನ’ ಮರಣೋತ್ತರ ಪ್ರಶಸ್ತಿ ಘೋಷಿಸಬೇಕು ದೇವದಾಸಿ, ವಿಧವೆಯರು, ವೃದ್ಧರು, ವಿಕಲ ಚೇತನರಿಗೆ ನೀಡುತ್ತಿರುವ ಮಾಸಿಕ ವೇತನ ₹5000 ವರೆಗೆ ಹೆಚ್ಚಿಸಬೇಕು. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಮಾಸಿಕ ಭೋಜನ ವೆಚ್ಚ ₹3000 ವರೆಗೆ ಹೆಚ್ಚಳ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳನ್ನು ವಸತಿ ಕಾಲೇಜುಗಳಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದರು.

ಈ ಸಂದರ್ಭದಲ್ಲಿ ಕೊಕ್ಕನೂರು ಗ್ರಾಪಂ ಸದಸ್ಯ ಹನುಮಂತಪ್ಪ, ಚೌಡಪ್ಪ ಸಿ. ಭಾನುವಳ್ಳಿ, ಅಲೆಮಾರಿ ಸಮುದಾಯದ ಮುಖಂಡ ದುರುಗಪ್ಪ, ಮಂಜುನಾಥ್ ಎಂ.ಎಸ್. ಕೊಕ್ಕನೂರು, ಹೊಸಪಾಳ್ಯ ಯುವರಾಜ್, ರಾಮಪ್ಪ ಹಿಂಡಸಘಟ್ಟ, ಧರ್ಮರಾಜ್ ಹಳ್ಳಿಹಾಳ್, ತಿಮ್ಮಣ್ಣ ಕಡ್ಲೆಗೊಂದಿ, ಸುರೇಶ್ ಕೆಂಚನಹಳ್ಳಿ, ಆಕಾಶ ಎಂ.ಆರ್., ಪುನೀತ ಎಂ.ಎಲ್., ಮಾರುತಿ, ಈರಣ್ಣ, ಚಂದ್ರು, ವಿಶ್ವ, ಮರಿಯ, ಅಭಿ, ಅರುಣ್, ಧನುಷ್ ಡಿ., ಹನುಮಂತಪ್ಪ, ಪ್ರಕಾಶ, ನಿಂಗಪ್ಪ, ದುರುಗಪ್ಪ, ವಿನಾಯಕ, ಗಿರೀಶ್, ಮಧು ಹಾಗೂ ಇತರರು ಇದ್ದರು.


- - -

(ಬಾಕ್ಸ್‌)

* ಬೇಡಿಕೆಗಳೇನೇನು?- ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020 ರದ್ದುಪಡಿಸಿ, ಭಾರತದಿಂದ ವಿದೇಶಗಳಿಗೆ ದನದ ಮಾಂಸದ ರಫ್ತು ನಿಲ್ಲಿಸಬೇಕು

- ದಾವಣಗೆರೆ ವಿವಿಗೆ ಪ್ರೊ. ಕೃಷ್ಣಪ್ಪ ಅವರ ಹೆಸರಿಟ್ಟು ಸೂಕ್ತ ಸ್ಥಳದಲ್ಲಿ ಪ್ರೊ.ಬಿ.ಕೃಷ್ಣಪ್ಪ ಸ್ಮಾರಕ ನಿರ್ಮಿಸಬೇಕು

- ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್‌ನಲ್ಲಿ ಹುಳುಭರಿತ ಆಹಾರ ವಿತರಣೆ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು.

- ಹೊಟ್ಟಿಗೇನಹಳ್ಳಿ ಗ್ರಾಮದ ರಸ್ತೆಗಳು ಅಕ್ರಮ ಮಣ್ಣು, ಮರಳು ಸಾಗಣೆಯಿಂದಾಗಿ ಸಂಪೂರ್ಣ ಹಾಳಾಗಿದ್ದು, ಹೊಸದಾಗಿ ರಸ್ತೆಗಳ ನಿರ್ಮಿಸಬೇಕು.

- ಅಕ್ರಮ ಮಣ್ಣು, ಮರಳು ಸಾಗಣೆ ತಡೆಯಬೇಕು. ಗ್ರಾಮದಲ್ಲಿ ಸರ್ಕಾರಿ ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರ ಆರಂಭಿಸಬೇಕು. - ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆರಂಭಿಸಬೇಕು.

- ಜನರ ಕುಡಿಯುವ ನೀರಿಗಾಗಿ ಪ್ರತ್ಯೇಕ ಕೆರೆ ನಿರ್ಮಿಸಬೇಕು.

- ವಿವಿಧ ಪ್ರಕಾರದ ಮದ್ಯದ ಅಂಗಡಿಗಳನ್ನು ನಿಗದಿತ ಅವಧಿಯಲ್ಲಿ ಮಾತ್ರ ತೆರೆಯುವಂತೆ ಕ್ರಮ ಕೈಗೊಳ್ಳಬೇಕು.

- - -

-18HRR.01:

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಬುಧವಾರ ಹರಿಹರದಲ್ಲಿ ತಹಸೀಲ್ದಾರ್ ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.