ಸಾರಾಂಶ
ನಗರದ ಶೇಷಾದ್ರಿಪುರ ಕಾಲೇಜಿನ ಸಭಾಂಗಣದಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಚಿ.ದೇ.ಸೌಮ್ಯಾ ಕೃತಿಗಳನ್ನು ಲೋಕಾರ್ಪಣೆ ಗೊಳಿಸಲಾಯಿತು.
ಕನ್ನಡಪ್ರಭ ವಾರ್ತೆ, ಬೆಂಗಳೂರು
ಪ್ರಸ್ತುತ ದಿನಗಳಲ್ಲಿ ಭಾರತದ ಸಂಸ್ಕೃತಿ, ಪರಂಪರೆಯನ್ನು ಉಳಿಸುವಲ್ಲಿ ಮಹಿಳೆಯರ ಪಾತ್ರ ದೊಡ್ಡದು. ಅದನ್ನು ಉಳಿಸಿ ಬೆಳೆಸುವ ಪ್ರಯತ್ನ ಮಹಿಳೆಯರು ಮಾಡಬೇಕಿದೆ ಎಂದು ನಾಡೋಜ ಡಾ. ವೂಡೆ ಪಿ. ಕೃಷ್ಣ ಹೇಳಿದರು.ಭಾನುವಾರ ನಗರದ ಶೇಷಾದ್ರಿಪುರ ಕಾಲೇಜಿನ ಸಭಾಂಗಣದಲ್ಲಿ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ (ಬಿಬಿಜಿಎಸ್) ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಚಿ.ದೇ. ಸೌಮ್ಯಾ ಅವರ ಕವನ ಸಂಕಲನ ‘ಕನ್ನಡದ ಕನ್ನಡಿಯಲ್ಲಿ’ ಮತ್ತು ‘ಮಧ್ಯಕಾಲೀನ ಭಾರತದ ಸಂತ ಮಹಿಳೆಯರು’ ಎಂಬ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
12 ಮತ್ತು 13ನೇ ಶತಮಾನದ ಸಂತ ಮಹಿಳೆಯರ ಜೀವನ, ತ್ಯಾಗ, ಯೋಗ, ಧ್ಯಾನದ ಮೂಲಕ ಆಧ್ಯಾತ್ಮಿಕತೆಯ ಕಡೆಗೆ ಸಾಗಿದ ಸಂಪೂರ್ಣ ಚಿತ್ರಣಗಳನ್ನು ಇಲ್ಲಿ ವಿಶಿಷ್ಟವಾಗಿ ಚಿತ್ರಿಸಲಾಗಿದೆ. ಸತ್ಯ, ನ್ಯಾಯ, ದೇವರು, ದೇವಾಲಯಗಳ ಮೂಲಕ ಆಧ್ಯಾತ್ಮಿಕತೆಯನ್ನು ಸಾರುವ ಅದ್ಭುತ ಕೃತಿಯನ್ನು ಸೌಮ್ಯಾ ಅವರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ ಎಂದರು.ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಮಾತನಾಡಿ, ತಾಯಿ ಮಗುವಿನ ಬಾಂಧವ್ಯ, ಸತಿ ಪತಿಯ ಅನೋನ್ಯತೆ ಹೀಗೆ ಹಲವಾರು ಸೂಕ್ಷ್ಮ ವಿಚಾರಗಳನ್ನು ಕವನ ಸಂಕಲನದುದ್ದಕ್ಕೂ ಪ್ರಸ್ತುತಪಡಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಸಾಹಿತಿ ಡಾ. ಚಿ. ದೇ ಸೌಮ್ಯ, ಬಿಬಿಜಿಎಸ್ ಟ್ರಸ್ಟ್ ಅಧ್ಯಕ್ಷ ಡಾ. ಎಸ್.ರಾಮಲಿಂಗೇಶ್ವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.