ಕಡೂರಲ್ಲಿ ಪತ್ರಿಕಾ ದಿನಾಚರಣೆ, ಪದಗ್ರಹಣ ಸಮಾರಂಭ

ಕನ್ನಡಪ್ರಭ ವಾರ್ತೆ, ಕಡೂರು

ವೇಗದ ಡಿಜಿಟಲ್ ಯುಗದಲ್ಲಿ ಜನರಿಗೆ ಸಂವಹನದ ವೇಗದ ರೋಚಕತೆ ಬೇಕಿದೆಯೇ ಹೊರತು ಸಂವಹನದ ಸತ್ಯವಲ್ಲ, ಇದು ವಿಪರ್ಯಾಸ ಎಂದು ಚಿಂತಕ ವೈ.ಎಸ್.ವಿ.ದತ್ತ ಆತಂಕ ವ್ಯಕ್ತಪಡಿಸಿದರು.

ಭಾನುವಾರ ಪಟ್ಟಣದ ಟಿ.ಎಸ್.ಎಸ್.ಸೆಂಚೂರಿಯನ್ ಹಾಲ್ ನಲ್ಲಿ ಮಾಧ್ಯಮ ಪತ್ರಕರ್ತರ ಸಂಘ, ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘ ಮತ್ತು ಕಡೂರು ತಾಲೂಕು ಪತ್ರಕರ್ತರ ಸಂಘಗಳ ಸಹಯೋಗದಲ್ಲಿ ನಡೆದ ಪತ್ರಿಕಾ ದಿನಾಚರಣೆ ಮತ್ತು ಪದಗ್ರಹಣ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.

ಸ್ವಾತಂತ್ರ‍್ಯ ಪೂರ್ವದಿಂದಲೂ ಪತ್ರಿಕೋದ್ಯಮ ಸಾಮಾಜಿಕವಾಗಿ ತನ್ನದೇ ಆದ ಪ್ರಭಾವ ಬೀರುತ್ತಾ ಬಂದಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು ಅಪಾರ ವೇಗ ಸಾಧಿಸಿವೆ. ಆದರೆ ವ್ಯಾಪಕ ಜನ ಜಾಗೃತಿ ಉಂಟು ಮಾಡಬಲ್ಲವೇ ಎನ್ನುವುದು ಪ್ರಶ್ನೆ. ಅಂದು ಮುದ್ರಣ ಮಾಧ್ಯಮ ಜನರಿಗೆ ವಸ್ತುನಿಷ್ಠ ವರದಿಗಳ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದವು. ಮುಂದಿನ ದಿನಗಳಲ್ಲಿ ಮುದ್ರಣ ಮಾಧ್ಯಮ ಸಂಕಷ್ಟಕ್ಕೆ ಸಿಲುಕುವ ಎಲ್ಲ ಲಕ್ಷಣಗಳಿವೆ. ಕಾಗದ ರಹಿತ ಇ-ಆಫೀಸ್ ವ್ಯವಸ್ಥೆ ಯಂತೆ ಕಾಗದ ರಹಿತ ಪತ್ರಿಕೋದ್ಯಮ ಬರಬಹುದು. ಆಗ ನೈಜ ಪತ್ರಕರ್ತರು ಏನಾಗಬಹುದು. ಪತ್ರಿಕೆಗಳನ್ನು ಉಳಿಸುವ ಜವಾಬ್ದಾರಿ ಓದುವ ಮೂಲಕ ನಮ್ಮ ನಿಮ್ಮೆಲ್ಲರ ಮೇಲಿದೆ. ವೈರಲ್ ಎನ್ನುವುದು ವೈರಸ್ ಇದ್ದಂತೆ ಅದು ರೋಗವೇ ಹೊರತು ಮದ್ದಲ್ಲ. ಬೇಗ ಹರಡುವುದು ಸಾಂಕ್ರಾಮಿಕ ಎಂದು ನಾವು ಅರಿಯಬೇಕು. ಓದುವ ಮೂಲಕ ಸತ್ಯ ನಂಬುತ್ತೇನೆ ಎನ್ನುವುದು ನಮ್ಮ ಧ್ಯೇಯವಾಗಬೇಕು ಎಂದು ನುಡಿದರು.


ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಪತ್ರಿಕಾ ಮಾಧ್ಯಮ ಹಲವು ಸಂಕಷ್ಟ ಮತ್ತು ಕಠಿಣ ಸವಾಲುಗಳನ್ನು ಎದುರಿಸಿ ಬೆಳೆದು ನಿಂತಿದೆ. ಅಚ್ಚು ಮೊಳೆಯಿಂದ ಡಿಜಿಟಲ್ ಯುಗದ ಹಂತಕ್ಕೆ ತಲುಪಿವೆ. ಮಹಾತ್ಮ ಗಾಂಧಿ, ಬಾಲಗಂಗಾಧರ ತಿಲಕ್ ಅಂತಹವರ ಕಾಲದಿಂದಲೂ ಅತ್ಯಂತ ಜವಾಬ್ದಾರಿಯಿಂದ ವ್ಯವಸ್ಥೆ ಎಚ್ಚರಿಸುವ ಕಾರ್ಯ ವನ್ನು ನಿಷ್ಠೆಯಿಂದ ಮಾಡುತ್ತಿವೆ. ಪತ್ರಕರ್ತರ ಅನೇಕ ಬೇಡಿಕೆಗಳು ಬಹಳ ದಿನಗಳಿಂದ ಕೇಳುತ್ತಲೇ ಇವೆ. ಆದರೆ, ಎಲ್ಲರಿಗೂ ಸರ್ಕಾರ ಸವಲತ್ತು ಒದಗಿಸಲು ಸಾಧ್ಯವೇ ಎನ್ನುವ ಬಗ್ಗೆ ಗೊಂದಲಗಳಿವೆ. ಪತ್ರಕರ್ತರಿಗೆ ನಿವೇಶನ, ಬಸ್ ಪಾಸ್ ಸೇರಿದಂತೆ ನಿಮ್ಮ ಬೇಡಿಕೆ ಈಡೇರಿಕೆಗೆ ನನ್ನ ಒತ್ತಾಯವೂ ಇದೆ. ಕಡೂರಿನಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಬಂದಿರುವ ಮನವಿ ಪರಿಗಣಿಸಿ, ಅನುದಾನ ಒದಗಿಸುವ ಪ್ರಯತ್ನ ಮಾಡುತ್ತೇನೆ. ರಾಜಕಾರಣದಲ್ಲಿ ಅಭಿವೃದ್ಧಿ ಒಂದು ಭಾಗ ವಾದರೆ, ಜನರ ತೀರ್ಪು ಇನ್ನೊಂದು ಭಾಗ. ಜನ ಕೊಟ್ಟ ಅವಕಾಶ ಬಳಸಿ ಕ್ಷೇತ್ರಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಬೆಳ್ಳಿಪ್ರಕಾಶ್ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗ ತನ್ನದೇ ಆದ ಜವಾಬ್ದಾರಿ ಹೊಂದಿದೆ. ಪತ್ರಕರ್ತರು ಜನಪ್ರತಿನಿಧಿಗಳಿಗಿಂತ ಬುದ್ಧಿವಂತರಾದರೆ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವಲ್ಲಿ ಸಫಲರಾಗುವಿರಿ. ಕಡೂರು ಕ್ಷೇತ್ರದಲ್ಲಿ ವಿರೋಧ ಪಕ್ಷಗಳು ಮೌನವಾಗಿವೆ ಎನ್ನುವ ಮಾತು ಪತ್ರಕರ್ತರ ವಲಯದಿಂದಲೇ ಕೇಳಿ ಬಂದಿವೆ. ಒಟ್ಟಾರೆ ನಾವು ಕಡೂರಿನಲ್ಲಿ ಭಿನ್ನ ರಾಜಕಾರಣದ ಹಾದಿ ಅನುಸರಿಸಿದ್ದೇವೆ. ವ್ಯಕ್ತಿಗತ ಟೀಕೆ, ದೋಷಾರೋಪಣೆ ನಮ್ಮ ವ್ಯಕ್ತಿತ್ವವನ್ನು ಮಸುಕುಗೊಳಿಸುತ್ತದೇ ಹೊರತು ಅಭಿವೃದ್ಧಿ ಸಾಧ್ಯವಿಲ್ಲ. ಜನ ಸಾಮಾನ್ಯರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಮಹತ್ವ ಪತ್ರಕರ್ತರು ಅನುಸರಿಸಲಿ ಎಂದು ಹಾರೈಸಿದರು.

ಪತ್ರಕರ್ತರಿಗೆ ಗುರುತಿನ ಚೀಟಿ ವಿತರಿಸಿದ ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಾಲೂಕಿನಲ್ಲಿ ಪತ್ರಕರ್ತರು ಮತ್ತು ಜನಪ್ರತಿನಿಧಿಗಳ ಒಡನಾಟ ಉತ್ತಮವಾಗಿದೆ. ಆದರೆ ಪತ್ರಕರ್ತರಲ್ಲಿ ಒಡಕು, ಗುಂಪುಗಾರಿಕೆ ಬೇಡ. ಒಳ್ಳೆಯ ವಿಚಾರ ಜನರಿಗೆ ತಲುಪುವಲ್ಲಿ ಮುದ್ರಣ ಮಾಧ್ಯಮದ ಪಾತ್ರ ಪ್ರಮುಖ. ನೀವು ಒಗ್ಗಟ್ಟಿನಿಂದ ಕೆಲಸ ಮಾಡಿ ಜನ ಸೇವೆಯೇ ಜನ ಪ್ರತಿನಿಧಿಗಳ ಕರ್ತವ್ಯ ಎಂದರು. ಕಡೂರು ಕನ್ನಡ ಭವನದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಶಾಸಕರ ಜೊತೆ ಕೈ ಜೋಡಿಸಿ ಕ್ರಮ ವಹಿಸುವ ಭರವಸೆ ನೀಡಿದರು.

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಜಿ.ಎಂ.ರಾಜಶೇಖರ್ ಮಾತನಾಡಿ ಸಪ್ತನದಿಗಳಿಗೆ ಜನ್ಮ ನೀಡುವ ಚಿಕ್ಕಮಗಳೂರು ಜಿಲ್ಲೆಯ ಬಯಲು ಸೀಮೆಯ ಭಾಗಗಳು ಇಂದಿಗೂ ನೀರಾವರಿ ಸೌಲಭ್ಯದಿಂದ ವಂಚಿತವಾಗಿವೆ. ಜಿಲ್ಲೆಗೆ ನೀರಾವರಿ, ಕುಡಿವ ನೀರು ಪೂರೈಕೆ ಕ್ಷೇತ್ರದಲ್ಲಿ ಒಳಿತಾಗಲು ಪಕ್ಷಾತೀತ ಹೋರಾಟ ರೂಪಿಸಬೇಕಾದ ಅಗತ್ಯವಿದೆ. ಸಮಾಜದ ವಿಷಯವಾಗಿ ಪತ್ರಕರ್ತರು ಪತ್ರಕರ್ತರಾಗಿಯೇ ಇರಬೇಕು, ರಾಜಕಾರಣಿಗಳು ರಾಜಕಾರಣಿಯಾಗಿ ಇರಬೇಕು ಎಂದರು.

ಇದೇ ಸಂದರ್ಭದಲ್ಲಿ ಸಖರಾಯಪಟ್ಟಣದ ಹಿರಿಯ ಪತ್ರಕರ್ತ ಎಸ್.ಪಿ.ಓಂಕಾರ ಮೂರ್ತಿಯವರಿಗೆ ವರ್ಷದ ಪತ್ರಕರ್ತ ಪ್ರಶಸ್ತಿ, ವಕ್ಕಲಗೆರೆ ಶಿವು ಅವರ ಪುತ್ರಿ ಸಹನಾ ವಿ.ಎಸ್ ಮತ್ತು ರೇಣುಕ ಪ್ರಸನ್ನ ಅವರ ಪುತ್ರ ಅಜಯ್ ಡಿ.ಆರ್. ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜು.ಎಂ., ಜಿಲ್ಲಾಧ್ಯಕ್ಷ ಬ್ಯಾಲದಾಳು ಕುಮಾರ್,

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಉಪಾಧ್ಯಕ್ಷ ಟಿ.ಪಿ.ಕೃಷ್ಣನ್, ಪ್ರಧಾನ ಕಾರ್ಯದರ್ಶಿ ವಸಂತಕುಮಾರ್, ಕಾರ್ಯದರ್ಶಿ ಎಂ.ಸಿ.ಮಂಜುನಾಥ್, ರಾಜ್ಯ ಸಮಿತಿ ಸದಸ್ಯ ದಿನೇಶ್ ಜೈನ್, ಆಲ್ದೂರು ರಾಜೇಶ್ , ತನುಜಾ, ಬಿದರೆ ಜಗದೀಶ್, ಬಿ.ಪಿ.ನಾಗರಾಜ್, ಸವಿತಾ ರಮೇಶ್, ಬಿ.ಟಿ ಗಂಗಾಧರ ನಾಯ್ಕ, ತೋಟದಮನೆ ಮೋಹನ್, ಯಾಸೀನ್, ಚಿನ್ನರಾಜು, ಸಪ್ತಕೋಟಿ ಧನಂಜಯ, ಅರಿವಿನಮನೆ ಶಶಿಧರ್, ಬಿ.ಆರ್.ಮೋಹನ್, ಗಣೇಶ್, ಬಿ.ಎನ್. ಮತ್ತು ಕಡೂರು, ತರೀಕೆರೆ, ಅಜ್ಜಂಪುರ, ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಸಕಲೇಶಪುರ,ಅರಸೀಕೆರೆ, ಆಲೂರು, ಬೇಲೂರು, ಕೊಪ್ಪಳ ಮತ್ತಿತರ ಜಿಲ್ಲೆಗಳಿಂದ ಪತ್ರಕರ್ತರು ಆಗಮಿಸಿದ್ದರು.

19ಕೆಕೆಡಿಯು2. ಕಡೂರು ಪಟ್ಟಣದ ಟಿ.ಎಸ್.ಎಸ್.ಸೆಂಚೂರಿಯನ್ ಹಾಲ್ ನಲ್ಲಿ ಮಾಧ್ಯಮ ಪತ್ರಕರ್ತರ ಸಂಘ, ಜಿಲ್ಲಾ ಪತ್ರಕರ್ತರ ಸಂಘ ಮತ್ತು ಕಡೂರು ತಾಲೂಕು ಪತ್ರಕರ್ತರ ಸಂಘಗಳ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ ಮತ್ತು ಪದಗ್ರಹಣ ಸಮಾರಂಭ ನಡೆಯಿತು.