ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಗುರುವಾಯನಕೆರೆ ಶ್ರೀ ಶಾರದಾ ಕಲಾಮಂಟಪ ಗೆಳೆಯರ ಬಳಗ ಆಶ್ರಯದಲ್ಲಿ ಜ್ಞಾನ ಗಂಗಾ ಪುಸ್ತಕ ಮಳಿಗೆ ಪುತ್ತೂರು ಸಹಯೋಗದೊಂದಿಗೆ ಗ್ರಾಮೀಣ ಮಟ್ಟದ ಪುಸ್ತಕೋತ್ಸವ, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಶ್ರೀನಾಥ್ ಎಂ ಪಿ ಉದ್ಘಾಟಿಸಿ ಮಾತನಾಡಿ, ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಪುಸ್ತಕ ಓದುವವರು ವಿರಳವಾಗುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಗ್ರಾಮೀಣ ಮಟ್ಟದ ಪುಸ್ತಕೋತ್ಸವ ಆಯೋಜನೆಗೊಂಡಿರುವುದು ಶ್ಲಾಘನೀಯವಾಗಿದೆ. ಪ್ರತಿ ಶಾಲಾ ಕಾಲೇಜುಗಳಲ್ಲಿ ಇಂತಹ ಪುಸ್ತಕ ಪ್ರದರ್ಶನ ನಡೆದರೆ ವಿದ್ಯಾರ್ಥಿಗಳು ಓದುವ ಅಭಿರುಚಿಯನ್ನು ಹೊಂದಲು ಸಹಾಯಕವಾಗುತ್ತದೆ. ಗ್ರಾಮೀಣ ಮಟ್ಟದಲ್ಲಿ ಮನೆಮನೆಗೆ ಪುಸ್ತಕ ತಲುಪಿಸುವ ಯೋಜನೆಗಳು ಕಾರ್ಯಗತವಾಗಬೇಕಾಗಿದೆ ಎಂದರು.

ಪುಂಜಾಲಕಟ್ಟೆ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರಾದ ಧರಣೇಂದ್ರ ಜೈನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪುಸ್ತಕ ಓದುವ ಅಭಿರುಚಿಯನ್ನು ಹೆಚ್ಚಿಸುವ ಸಲುವಾಗಿ ಕರ್ನಾಟಕ ಸರ್ಕಾರವು ಕೆಲವೊಂದು ಯೋಜನೆಗಳನ್ನು ಹಾಕಿಕೊಂಡಿದ್ದು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಇದರಿಂದ ಬರಹಗಾರರು ಹಾಗೂ ಪುಸ್ತಕ ಪ್ರಕಟಿಸುವವರಿಗೆ ಸಹಾಯಕವಾಗುತ್ತದೆ ಎಂದರು.

ಗುರುವಾಯನಕೆರೆ ಶಾರದಾ ಗೆಳೆಯರ ಬಳಗದ ಅಧ್ಯಕ್ಷ ತಿಲಕರಾಜ್, ಶಾರದಾ ಭಜನ ಮಂಡಳಿಯ ನಿಕಟ ಪೂರ್ವ ಅಧ್ಯಕ್ಷೆ ರೀತಾ ವೈ ಆಚಾರ್ಯ, ಕಾರ್ಯಕ್ರಮದ ಆಯೋಜಕ ದೇವಿಪ್ರಸಾದ್ ಆಚಾರ್ಯ ಗುರುವಾಯನಕೆರೆ, ಡಾ. ವೇಣುಗೋಪಾಲ ಶರ್ಮ, ಕುವೆಟ್ಟು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮಂಜುನಾಥ ಕುಂಬಳೆ ಉಪಸ್ಥಿತರಿದ್ದರು.


ಆನಂದ ಕೋಟ್ಯಾನ್ ಸ್ವಾಗತಿಸಿದರು. ಸುಧಾ ಆರ್ ಸಾಲಿಯಾನ್ ವಂದಿಸಿದರು. ಉಪನ್ಯಾಸಕ ಮಹಾಬಲ ಗೌಡ ಕಾರ್ಯಕ್ರಮ ನಿರೂಪಿಸಿದರು.