ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಕೇವಲ ಅವರ ಕುಟುಂಬಕ್ಕೆ ಅಥವಾ ಊರಿಗೆ ಕೀರ್ತಿ ತಂದಿಲ್ಲ. ಬದಲಿಗೆ ಅವರು ಮುಂದೆ ಈ ದೇಶದ ದೊಡ್ಡ ಸಂಪತ್ತಾಗಲಿದ್ದಾರೆ, ಆದ್ದರಿಂದ ಅವರನ್ನು ಪ್ರೋತ್ಸಾಹಿಸಬೇಕು ಎಂದು ಸ್ಕೌಟ್ಸ್​ ಮತ್ತು ಗೈಡ್ಸ್​ ರಾಜ್ಯ ಮುಖ್ಯ ಆಯುಕ್ತ ಪಿ. ಜಿ. ಆರ್​. ಸಿಂಧ್ಯಾ ಹೇಳಿದರು.

ಉಡುಪಿ: ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಕೇವಲ ಅವರ ಕುಟುಂಬಕ್ಕೆ ಅಥವಾ ಊರಿಗೆ ಕೀರ್ತಿ ತಂದಿಲ್ಲ. ಬದಲಿಗೆ ಅವರು ಮುಂದೆ ಈ ದೇಶದ ದೊಡ್ಡ ಸಂಪತ್ತಾಗಲಿದ್ದಾರೆ, ಆದ್ದರಿಂದ ಅವರನ್ನು ಪ್ರೋತ್ಸಾಹಿಸಬೇಕು ಎಂದು ಸ್ಕೌಟ್ಸ್​ ಮತ್ತು ಗೈಡ್ಸ್​ ರಾಜ್ಯ ಮುಖ್ಯ ಆಯುಕ್ತ ಪಿ. ಜಿ. ಆರ್​. ಸಿಂಧ್ಯಾ ಹೇಳಿದರು.

ಅವರು ಶುಕ್ರವಾರ ಕೃಷ್ಣಮಠದ ರಾಜಾಂಗಣದಲ್ಲಿ ಭಾರತ ಸ್ಕೌಟ್ಸ್​ ಮತ್ತು ಗೈಡ್ಸ್​ ರಾಜ್ಯ ಸಂಸ್ಥೆಯ ವತಿಯಿಂದ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. 90 ಕ್ಕಿಂತ ಹೆಚ್ಚು ಅಂಕಗಳಿಸಿದ ರಾಜ್ಯದ 1200 ಸ್ಕೌಟ್ಸ್​, ಗೈಡ್ಸ್​, ರೋವರ್ಸ್​ ಮತ್ತು ರೇಂರ್ಜಸ್​ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

8 ರಿಂದ 13 ವರ್ಷದೊಳಗಿನ ಮಕ್ಕಳು ಒಂದು ತಿಂಗಳ ಕಾಲ ಮೊಬೈಲ್​, ಟಿವಿ ದೂರವಿಟ್ಟು, ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡರೆ ಅವರ ಮೆದುಳು ಸೂಪರ್​ ಕಂಪ್ಯೂಟರ್​ನಂತೆ ಕೆಲಸ ಮಾಡುತ್ತದೆ. ಸ್ಕೌಟ್ಸ್​ ಮತ್ತು ಗೈಡ್ಸ್​ ಕೇವಲ ಶಿಕ್ಷಣಕ್ಕೆ ಸೀಮಿತವಾಗಿರದೆ ಪರಿಸರ ಜ್ಞಾನ, ಸ್ವಚ್ಛತೆ, ಪ್ರಾಣಿ-ಸಸ್ಯಗಳ ಸಂರಕ್ಷಣೆ, ಮಣ್ಣು ಮತ್ತು ನೀರಿನ ಉಳಿತಾಯದಂತಹ ಜೀವನ ಮೌಲ್ಯಗಳನ್ನು ಕಲಿಸುತ್ತದೆ ಎಂದರು.ಕಾಲೇಜು ವಿಭಾಗದ ವಿದ್ಯಾರ್ಥಿಗಳು ರಾಷ್ಟ್ರಪತಿ ಪರೀಕ್ಷೆ ಉತ್ತೀರ್ಣರಾದರೆ ಎಂಬಿಬಿಎಸ್, ಎಂಜಿನಿಯರಿಂಗ್​, ಐಎಎಸ್​ನಲ್ಲಿ ಮಾತ್ರವಲ್ಲದೆ ರೈಲ್ವೆ ಇಲಾಖೆ, ಪೊಲೀಸ್​ ಮತ್ತು ರಕ್ಷಣಾ ಇಲಾಖೆಗಳ ಉದ್ಯೋಗಗಳಲ್ಲಿ ವಿಶೇಷ ಮೀಸಲಾತಿ ಹಾಗೂ ಆದ್ಯತೆ ದೊರೆಯಲಿದೆ ಎಂದು ತಿಳಿಸಿದರು.ಪರ್ಯಾಯ ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ಕಬ್​, ಬುಲ್​ ಬುಲ್​ ಮಕ್ಕಳ ‘ಗೋಲ್ಡನ್​ ಆರೋ’ ಪ್ರಶಸ್ತಿ ಹಾಗೂ ‘ರಾಷ್ಟ್ರಪತಿ ಪ್ರಮಾಣ ಪತ್ರ’ ವಿತರಿಸಲಾಯಿತು.

ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್​ಪಾಲ್​ ಸುವರ್ಣ, ಡಿಡಿಪಿಯು ಮಾರುತಿ, ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ್​ ಶೆಟ್ಟಿ , ಜಿಲ್ಲಾ ಗೈಡ್​ ಆಯುಕ್ತೆ ಜ್ಯೋತಿ ಪೈ, ಕಾರ್ಯದರ್ಶಿ ಆನಂದ ಅಡಿಗ, ಕೋಶಾಧಿಕಾರಿ ಹರಿಪ್ರಸಾದ್​ ರೈ, ಲಯನ್ಸ್​ ಸಂಸ್ಥೆಯ ಎಂ. ಎನ್​. ಹೆಗ್ಡೆ, ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳಾದ ಗುಣರತ್ನ, ದಿವಾಕರ ಸನಿಲ್​, ಮಹಮ್ಮದ್​ ಮೌಲಾ, ಎಎಸ್​ಒ ಸುಮನಾ ಶೇಖರ್​ ಉಪಸ್ಥಿತರಿದ್ದರು.