ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಮೂಡುಬಿದಿರೆ ತಾಲೂಕು ಹಾಗೂ ಆಸುಪಾಸಿನ ಊರುಗಳ ವಿಶೇಷ ಚೇತನ ಮಕ್ಕಳಿಗೆ ಕಳೆದ ಎಂಟು ವರ್ಷಗಳಿಂದ ಉಚಿತ ಶಿಕ್ಷಣ ಹಾಗೂ ತರಬೇತಿಯನ್ನು ನೀಡುತ್ತಿರುವ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯು ಕೆಸರುಗದ್ದೆ ಮುಕ್ತಾನಂದ ಪ್ರೌಢಶಾಲೆಯ ಆವರಣಕ್ಕೆ ಸ್ಥಳಾಂತರಗೊಂಡಿದ್ದು, ಶಾಲೆಯ ಆರಂಭೋತ್ಸವ, ಪುಸ್ತಕ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮ ಶನಿವಾರ ನಡೆಯಿತು.ಬೆಳುವಾಯಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ರತ್ನಾಕರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 50 ವರ್ಷಗಳ ಹೊಸ್ತಿನಲ್ಲಿರುವ ಮುಕ್ತಾನಂದ ಶಾಲೆಯು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿದೆ. ಆಡಳಿತ ಮಂಡಳಿಯ ನಿರ್ಣಯದಂತೆ ಇದನ್ನು ತಾತ್ಕಾಲಿಕ ನೆಲೆಯಲ್ಲಿ ಸ್ಪೂರ್ತಿ ವಿಶೇಷ ಮಕ್ಕಳಿಗಾಗಿ ನೀಡಲಾಗಿದೆ. ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯು ಉತ್ತಮ ಸೇವೆ, ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದ್ದು, ಈ ಸಂಸ್ಥೆಗೆ ನೆರವಾಗಿರುವುದಕ್ಕೆ ಸಂತಸವಿದೆ ಎಂದರು. ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯ ಮುಖ್ಯಸ್ಥ ಪ್ರಕಾಶ್ ಜೆ.ಶೆಟ್ಟಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಸ್ಥೆಯು ಕಳೆದ ಎಂಟು ವರ್ಷಗಳಿಂದ ಮೂಡುಬಿದಿರೆ ಪರಿಸರದ ವಿಶೇಷ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಹಾಗೂ ತರಬೇತಿ ನೀಡುತ್ತಿದೆ. ಪ್ರಸ್ತುತ 80ಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಖಾಸಗಿ ಕಟ್ಟಡ ಒಂದರಲ್ಲಿ ಕಾರ್ಯಾಚರಿಸುತ್ತಿದ್ದ ಸಂಸ್ಥೆಯು ಕಾರಣಾಂತರಗಳಿಂದ ಅಲ್ಲಿಂದ ತೆರವುಗೊಳಿಸುವ ಪರಿಸ್ಥಿತಿ ಉಂಟಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾವರ್ಧಕ ಸಂಘದವರಲ್ಲಿ ಮನವಿ ಮಾಡಿದ್ದು, ಸೂಕ್ತ ವ್ಯವಸ್ಥೆಗಳನ್ನು ಅವರು ಕಲ್ಪಿಸಿದ್ದಾರೆ. ಶಾಲೆಗೆ ಬೇಕಾದ ಪೂರಕ ವ್ಯವಸ್ಥೆಯನ್ನು ಕಲ್ಪಿಸಲು ಸಹೃದಯ ದಾನಿಗಳು ನೆರವಾಗಿದ್ದಾರೆ ಎಂದರು. ಬೆಳುವಾಯಿ ಗ್ರಾಪಂ ಅಧ್ಯಕ್ಷ ಸುರೇಶ್ ಪೂಜಾರಿ, ಬೆಳುವಾಯಿ ವಿದ್ಯಾವರ್ಧಕ ಸಂಘದ ಸಂಚಾಲಕ ರಾಜೇಶ್ ಸುವರ್ಣ, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್, ಮೇಕ್ ಸಮ್ ಒನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡದ ಸದಸ್ಯರು, ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ತಂಡದ ಅಧ್ಯಕ್ಷ ಸುನಿಲ್ ಮೆಂಡೋನ್ಸ, ಶಾಲಾ ಪೋಷಕರ ಸಮಿತಿ ಅಧ್ಯಕ್ಷೆ ಲತಾ ಸುರೇಶ್, ಮುಖ್ಯ ಶಿಕ್ಷಕಿ ಶರ್ಮಿಳಾ ವಾಸ್, ದಾನಿಗಳಾದ ಪೂರ್ಣಚಂದ್ರ ಜೈನ್, ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ನಿಯೋಜಿತ ಅಧ್ಯಕ್ಷ ಹರೀಶ್ ಎಂ.ಕೆ ಮತ್ತಿತರರಿದ್ದರು. ಶಿಕ್ಷಕಿ ಅನಿತಾ ರೊಡ್ರಿಗಸ್ ನಿರೂಪಿಸಿದರು.