ಗೋಣಿಕೊಪ್ಪ ಸಂತ ಥಾಮಸ್‌ ಶಾಲೆ ವಿದ್ಯಾರ್ಥಿ ಸಂಘ ಉದ್ಘಾಟನೆ

| Published : Jul 15 2024, 01:50 AM IST

ಸಾರಾಂಶ

ಗೋಣಿಕೊಪ್ಪ ಸಂತ ಥಾಮಸ್ ಶಾಲೆಯ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ, ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಕಾರ್ಯಕ್ರಮ ನಡೆಯಿತು. ಸಾಹಿತಿ, ಸಮಾಜ ಸೇವಕ ರಜಿತ ಕಾರ್ಯಪ್ಪ ಕಾರ್ಯಕ್ರಮ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ವಿದ್ಯಾರ್ಥಿಗಳು ಜೀವನದಲ್ಲಿ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಸಾಹಿತಿ, ಸಮಾಜ ಸೇವಕ ರಜಿತ ಕಾರ್ಯಪ್ಪ ಹೇಳಿದರು.ಗೋಣಿಕೊಪ್ಪ ಸಂತ ಥಾಮಸ್ ಶಾಲೆಯ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪ್ರಮಾಣವಚನ ಸ್ವೀಕಾರ, ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಾಲಕರು, ಗುರುಗಳು, ಹಿರಿಯರನ್ನು ಗೌರವಿಸಬೇಕು. ವಿದ್ಯಾರ್ಥಿಗಳು ತಮ್ಮ ಬೇರುಗಳನ್ನು ಮತ್ತು ಅವರನ್ನು ರೂಪಿಸಿದ ಶಾಲೆಯನ್ನು ನೆನಪಿಸಿಕೊಳ್ಳಬೇಕು. ಜತೆಗೆ ಉತ್ತಮ ನಾಗರಿಕರಾಗಬೇಕು ಎಂದರು.

ಶಾಲೆಯ ಪ್ರಾಂಶುಪಾಲ ಅಂಥೋಣಿ ಪಯ್ಯಪ್ಪಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಶಕ್ತಿ ಅನಾವರಣಗೊಳ್ಳಬೇಕಾದರೆ ಸಾಂಘಿಕ ಪ್ರಯತ್ನ ನಡೆಯಬೇಕು. ಸಮಾಜಕ್ಕೆ ಸಹಕಾರಿಯಾಗುವಂತಹ ಶಿಕ್ಷಣವು, ವಿದ್ಯಾರ್ಥಿಗಳಿಗೆ ಸಿಗಬೇಕಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಹೆಜ್ಜೆ ಹಾಕಬೇಕು ಎಂದರು.ಶಾಲಾ ನಾಯಕರಾಗಿ ಮುಫಿದ್ ಎಂ.ಆರ್., ನುಹಾ ಫಾತೀಮ, ಕ್ರೀಡಾ ನಾಯಕರಾಗಿ ಬಿಲಾಲ್ ಬಿ.ಎಸ್., ಸಿಯೋನ ಸುನಿಲ್ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ನಾಯಕರಾಗಿ ನಿಷಾದ್ ಪಿ.ಬಿ., ಹೃಷಿಕಾ ಬಿ.ಎಸ್. ಆಯ್ಕೆಗೊಂಡು ಪ್ರತಿಜ್ಞಾವಿಧಿ ಸ್ವೀಕರಿಸಿದರು.ಇದೇ ಸಂದರ್ಭ ಸಾಹಿತಿ, ಸಮಾಜ ಸೇವಕರಾದ ರಜಿತ ಕಾರ್ಯಪ್ಪ ಅವರನ್ನು ಸನ್ಮಾನಿಸಲಾಯಿತು.ಶಾಲೆಯ ಅಧ್ಯಕ್ಷ ಕೆ.ಎಫ್. ಥಾಮಸ್ ಕೆಳಪ್ಪುರ, ಎಲ್‌ಕೆಜಿಯಿಂದ ೧೦ನೇ ತರಗತಿ ವರೆಗಿನ ಶಾಲೆಗೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಮತ್ತು ಶಾಲೆಗೆ ನೂತನವಾಗಿ ಕರ್ತವ್ಯ ನಿರ್ವಹಿಸಲು ಆಗಮಿಸಿದ ಶಿಕ್ಷಕರನ್ನು ಹೂಗುಚ್ಛ ನೀಡುವುದರ ಮೂಲಕ ಸ್ವಾಗತಿಸಿದರು.ಕಾರ್ಯಕ್ರಮದ ಮಾರ್ಗದರ್ಶಕರಾಗಿ ಕುಮುದಾ, ಕ್ರೀಡಾ ಶಿಕ್ಷಕರಾದ ಶಯನ್ ಮತ್ತು ವಿನಿತಾ ಜೆನ್ನಿಫರ್ ಕಾರ್ಯನಿರ್ವಹಿಸಿದರು.ಶಾಲೆಯ ಬೋಧಕ ಮತ್ತು ಬೋಧಕೇತರ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.