ಸಾರಾಂಶ
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಮೈಸೂರು ಜಿಲ್ಲಾ ಒಕ್ಕೂಟ (ಮೈಮುಲ್) ದ ರೈತ ಪರ ಯೋಜನೆಗಳಿಗೆ ಕೆಎಂಎಫ್ ನಿಂದ ಹೆಚ್ಚಿನ ನೆರವು ಕಲ್ಪಿಸುವುದಾಗಿ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.ತಾಲೂಕಿನ ಹಳೇ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಮಂಗಳವಾರ 13.50 ಲಕ್ಷ ರು. ಗಳ ವೆಚ್ಚದಲ್ಲಿ ನಿರ್ಮಾಣ ಹೊಂದಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಕ್ಕೂಟದ ನೂತನ ಅಧ್ಯಕ್ಷರ ಪ್ರಸ್ತಾಪದಂತೆ ಕೆಎಂಎಫ್ ನಲ್ಲಿ ಮೈಮುಲ್ ನ ಯಾವುದೇ ಯೋಜನೆಯ ಅನುದಾನ ಬಾಕಿ ಉಳಿದಿದ್ದರೆ ಅದರೊಂದಿಗೆ ಹೆಚ್ಚುವರಿ ಅನುದಾನವನ್ನು ಕೊಡಿಸುತ್ತೇನೆ ಎಂದರು.ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಹಾಗೂ ಮೈಮುಲ್ ನೆರವಿನಡಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಆರ್. ಚಲುವರಾಜು ಮಾತನಾಡಿ, ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಒಕ್ಕೂಟದಿಂದ 8.50 ಲಕ್ಷ ಅನುದಾನ ನೀಡಲಾಗಿದೆ. ಜಿಲ್ಲೆಯಲ್ಲಿ ಪ್ರತಿನಿತ್ಯವೂ 9.50 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, 3.50 ರಿಂದ 4 ಲಕ್ಷ ಲೀಟರ್ ಹಾಲು ಮತ್ತು ಉತ್ಪನ್ನಗಳು ಮಾರಾಟವಾಗುತ್ತಿವೆ. ಇನ್ನುಳಿದ ಹಾಲನ್ನು ಪುಡಿಯಾಗಿ ಪರಿವರ್ತಿಸಿ ಮಾರಾಟ ಮಾಡಲು ಸಂಗ್ರಹಿಸಿಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.ಹಾಲು ಒಕ್ಕೂಟದ ನಿರ್ದೇಶಕರಾದ ಸಿ. ಓಂಪ್ರಕಾಶ್, ಕೆ.ಜಿ. ಮಹೇಶ್, ಕೆ. ಉಮಾಶಂಕರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆ.ಎಂ. ಮಹದೇವಣ್ಣ, ಜಿಪಂ ಮಾಜಿ ಸದಸ್ಯರಾದ ಕೆ. ಮಹದೇವ, ಎಂ. ಸುಧಾ ಮಹದೇವಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಮುದ್ದೇಗೌಡ, ಗ್ರಾಪಂ ಅಧ್ಯಕ್ಷೆ ನಂದಿನಿ, ಮಾಜಿ ಅಧ್ಯಕ್ಷ ಆನಂದ, ವಿಸ್ತರಣಾಧಿಕಾರಿ ಆರ್. ಪ್ರಮೋದ್, ಉಪಾಧ್ಯಕ್ಷ ಎಸ್. ಕುಮಾರ್, ನಿರ್ದೇಶಕರಾದ ಕೆ.ಎಂ. ನಾಗೇಶ್, ಕೆ. ರಘು, ರಾಚನಾಯಕ, ಶಾರದಮ್ಮ, ಕೆ.ಪಿ. ಸುರೇಶ್, ಹೊಂಬಾಳಮ್ಮ, ಪುಟ್ಟಮ್ಮ, ಸಿದ್ದಪ್ಪ, ಕೆ. ಕೃಷ್ಣೇಗೌಡ, ಶಿವಮೂರ್ತಿ, ಡೈರಿ ಕಾರ್ಯದರ್ಶಿ ಕೆ. ಮಂಜುಳಾ, ಹಾಲು ಪರೀಕ್ಷಕ ವಿನೋದ್ ಇದ್ದರು.