ಇಂದು ನವೀಕೃತ ಶಾಲೆ ಉದ್ಘಾಟನೆ, ಆರೋಗ್ಯ ಶಿಬಿರ

| Published : Jan 04 2025, 12:34 AM IST

ಸಾರಾಂಶ

ನಗರದ ಬಾಪೂಜಿ ಹೈಸ್ಕೂಲ್‌ ಹಿರಿಯ ವಿದ್ಯಾರ್ಥಿಗಳ ಸಂಘವು ಕಳೆದ ವರ್ಷದಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಬಾರಿ ಕಂದನಕೋವಿ ನವೀಕೃತ ಸರ್ಕಾರಿ ಶಾಲೆ ಉದ್ಘಾಟನೆ ಹಾಗೂ ಆರೋಗ್ಯ ಶಿಬಿರ ಜ.4ರಂದು ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮೇಯರ್, ಸಂಘದ ಅಧ್ಯಕ್ಷ ಎಸ್.ಟಿ. ವೀರೇಶ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದ ಬಾಪೂಜಿ ಹೈಸ್ಕೂಲ್‌ ಹಿರಿಯ ವಿದ್ಯಾರ್ಥಿಗಳ ಸಂಘವು ಕಳೆದ ವರ್ಷದಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಬಾರಿ ಕಂದನಕೋವಿ ನವೀಕೃತ ಸರ್ಕಾರಿ ಶಾಲೆ ಉದ್ಘಾಟನೆ ಹಾಗೂ ಆರೋಗ್ಯ ಶಿಬಿರ ಜ.4ರಂದು ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮೇಯರ್, ಸಂಘದ ಅಧ್ಯಕ್ಷ ಎಸ್.ಟಿ. ವೀರೇಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಪೂಜಿ ಹೈಸ್ಕೂಲ್‌ನ 1988 ರಿಂದ 2001 ರವರೆಗಿನ 14 ವರ್ಷಗಳ ವಿದ್ಯಾರ್ಥಿಗಳು 2022ನೇ ವರ್ಷ "ಸ್ನೇಹ ಸಮ್ಮಿಲನ "ದಲ್ಲಿ ಒಗ್ಗೂಡಿ ಅಭೂತಪೂರ್ವ ಕಾರ್ಯಕ್ರಮ ನಡೆಸಿದ್ದು ಜನಜನಿತವಾಗಿತ್ತು. ಈ ಸ್ನೇಹಬಂಧ ಮುಂದುವರಿದು ಸಮಾಜಮುಖಿ ಕಾರ್ಯಕ್ರಮ ನಡೆಸುವ ಸದುದ್ದೇಶದಿಂದ ಬಾಪೂಜಿ ಹೈಸ್ಕೂಲ್ ಅಲ್ಯುಮ್ನಿ ಸಂಘವನ್ನು ನೋಂದಣಿ ಮಾಡಿಸಲಾಯಿತು ಎಂದರು.

ತಮ್ಮ ಅಧ್ಯಕ್ಷತೆಯಲ್ಲಿ ಸಮಾನ ಮನಸ್ಕರೊಡಗೂಡಿ ಕಳೆದ ವರ್ಷ ದಾವಣಗೆರೆ ಸಮೀಪದ ಶಾಮನೂರು ಗ್ರಾಮದ ಜನತಾ ಕಾಲೋನಿಯ ಹಿರಿಯ ಪ್ರಾಥಮಿಕ ಶಾಲೆ ನವೀಕರಿಸಿ, ಪೀಠೋಪಕರಣ ನೀಡಲಾಗಿತ್ತು. ಡಾಲರ್ಸ್ ಕಾಲೋನಿಯ ಉದ್ಯಾನವನದ ಮೇಲುಸ್ತುವಾರಿ ವಹಿಸಿಕೊಳ್ಳಲಾಗಿದೆ. ಇದೀಗ ಮಾಯಕೊಂಡ ಕ್ಷೇತ್ರದ ಕಂದನಕೋವಿ ಗ್ರಾಮದ ಪ್ರೌಢಶಾಲೆಗೆ ಸುಣ್ಣ-ಬಣ್ಣ ಬಳಿಸಿ, ಗೋಡೆ ಚಿತ್ರಗಳನ್ನು ಬರೆಸಿ, ಶಾಲೆಯ ಕಟ್ಟಡ ಸುಂದರಗೊಳಿಸಲಾಗಿದೆ ಎಂದು ಹೇಳಿದರು.

ಜ.4ರ ಬೆಳಗ್ಗೆ 10 ಗಂಟೆಗೆ ನವೀಕರಣಗೊಂಡ ಶಾಲೆಯ ಉದ್ಘಾಟನೆ ಮತ್ತು ಸ್ನೇಹ ಸಮ್ಮಿಲನ ಹಾಗೂ ಎಸ್.ಎಸ್. ಕೇರ್‌ ವತಿಯಿಂದ ಉಚಿತ ಆರೋಗ್ಯ ಶಿಬಿರವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸುವರು. ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್.ಬಸವಂತಪ್ಪ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಉಪನಿರ್ದೇಶಕ ಜಿ.ಕೊಟ್ರೇಶ್ ಮತ್ತು ಎಸ್.ಗೀತಾ, ಗ್ರಾಪಂ ಅಧ್ಯಕ್ಷೆ ಭಾರತಮ್ಮ ಮಹೇಶ್ವರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜಪ್ಪ, ದಾವಣಗೆರೆ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶೇರ್ ಆಲಿ ಹಾಗೂ ಕಂದನಕೋವಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಎಸ್.ಟಿ.ಸವಿತಾ ಭಾಗವಹಿಸುವರು ಎಂದರು.

ಬಾಪೂಜಿ ಹೈಸ್ಕೂಲ್‌ನಲ್ಲಿ ಕಲಿತ ವಿದ್ಯಾರ್ಥಿಗಳು ಒಗ್ಗೂಡಿ ಸುಮಾರು ₹5 ಲಕ್ಷ ವೆಚ್ಚದಲ್ಲಿ ಸರ್ಕಾರಿ ಶಾಲೆಯನ್ನು ನವೀಕರಿಸಲಾಗಿದೆ. ಗ್ರಾಮಸ್ಥರಿಗಾಗಿ ಅಂದು ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಕಿರುವಾಡಿ ವೀರೇಶ್, ಸಿದ್ಧಗಂಗಾ ಹೇಮಂತ್, ಐನಹಳ್ಳಿ ಶುಭಾ, ಹೊನ್ನೂರ್ ಗಿರೀಶ್, ಸಂಜಯ್ ರೇವಣಕರ್, ಶುಭಾಷಿಣಿ, ಬಿ.ಜೆ.ಅಭಿಷೇಕ್, ಶ್ರೀನಿವಾಸ, ಎಂ.ಸಿ.ಗುರು ರೇವಣಕರ್, ಲಕ್ಷ್ಮೀಕಾಂತ್ ಹಾಜರಿದ್ದರು.

- - - -2ಕೆಡಿವಿಜಿ34: