ರಕ್ತನಾಳ ಹಾಗೂ ಮಧುಮೇಹಿ ಕಾಲು ರೋಗಗಳ ಚಿಕಿತ್ಸೆಗೆ ಮೀಸಲಾದ 50 ಹಾಸಿಗೆಯ ಸುಖದಾ ವ್ಯಾಸ್ಕುಲರ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಭಾನುವಾರ ಶುಭಾರಂಭಗೊಂಡಿತು.
ಹುಬ್ಬಳ್ಳಿ: ರಕ್ತನಾಳ ಹಾಗೂ ಮಧುಮೇಹಿ ಕಾಲು ರೋಗಗಳ ಚಿಕಿತ್ಸೆಗೆ ಮೀಸಲಾದ 50 ಹಾಸಿಗೆಯ ಸುಖದಾ ವ್ಯಾಸ್ಕುಲರ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಭಾನುವಾರ ಶುಭಾರಂಭಗೊಂಡಿತು.
ಇಲ್ಲಿಯ ಹೊಸೂರ ಉಣಕಲ್ಲ ರಸ್ತೆ ಹೊಸ ಕೋರ್ಟ್ ಬಳಿಯ ಚೇತನ ಕಾಲನಿಯಲ್ಲಿ ನಿರ್ಮಿಸಲಾದ ಸುಸಜ್ಜಿತ ಆಸ್ಪತ್ರೆಯನ್ನು ಸಿದ್ಧಾಶ್ರಮದ ಸಿದ್ದರಾಮೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಶ್ರೀಗಣೇಶ ಹಾಗೂ ಶಿವ ಪಾರ್ವತಿಯ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.ಬೆಂಗಳೂರಿನ ರಾಮಯ್ಯ ಆಸ್ಪತ್ರೆಯ ವ್ಯಾಸ್ಕುಲರ್ ವಿಭಾಗದ ಮುಖ್ಯಸ್ಥ ಡಾ. ಸಂಜಯ ದೇಸಾಯಿ, ಸುಖದಾ ಆಸ್ಪತ್ರೆ ಸಿಇಒ ಹಾಗೂ ಮುಖ್ಯ ರಕ್ತನಾಳ ಶಸ್ತ್ರ ಚಿಕಿತ್ಸಕ ಡಾ. ಚೇತನ ಹೊಸಕಟ್ಟಿ, ಆಡಳಿತಾಧಿಕಾರಿ ಡಾ. ರಶ್ಮಿ ಹೊಸಕಟ್ಟಿ, ಕುಟುಂಬ ಸದಸ್ಯರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮೂರುಸಾವಿರ ಮಠದ ಜ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಜಗದೀಶ್ ಶೆಟ್ಟರ್, ಕೆಎಲ್ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಮಾಜಿ ಸಚಿವರಾದ ಪಿ.ಸಿ. ಸಿದ್ದನಗೌಡರ, ಶಂಕರ ಪಾಟೀಲ್ ಮುನೇನಕೊಪ್ಪ, ಶಾಸಕ ಎಂ.ಆರ್. ಪಾಟೀಲ, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಶುಭ ಹಾರೈಸಿದರು.ಈ ಭಾಗದಲ್ಲಿ ಪ್ರಥಮ ಬಾರಿಗೆ ಹೈಬ್ರಿಡ್ ಕ್ಯಾಥಲ್ಯಾಬ್ ಅಳವಡಿಸಲಾಗಿದ್ದು, ಮಾಡ್ಯುಲರ್ ಆಪರೇಶನ್ ಥೇಟರ್, ತೀವ್ರ ನಿಗಾ ಘಟಕ, ರೇಡಿಯಾಲಜಿ, ಮಧುಮೇಹ ಫೂಟ್ ಕ್ಲಿನಿಕ್, ಸುಧಾರಿತ ಜಾಯಿಂಟ್ ರಿಪ್ಲೇಸ್ಮೆಂಟ್, ವ್ಯಾಸ್ಕುಲರ್ ಲ್ಯಾಬ್, ಡಯಾಲಿಸಿಸ್ ಮುಂತಾದ ಸೌಲಭ್ಯಗಳನ್ನು ಒಂದೇ ಸೂರಿನಡಿ ಕಲ್ಪಿಸಲಾಗಿದೆ ಎಂದು ಡಾ. ಚೇತನ್ ಹೊಸಕಟ್ಟಿ ತಿಳಿಸಿದರು.