ಸಾರಾಂಶ
ತಾಂಬಾ: ಡಿ.30 ರಂದು ಗೊರನಾಳ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ವಿಜಯಪುರ ಡಿಸಿಸಿ ಬ್ಯಾಂಕಿನ ಅಧ್ಯಕ್ಷರು, ಕೃಷಿ ಮಾರುಕಟ್ಟೆ ಹಾಗೂ ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಲಿದ್ದಾರೆ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ೧೯೭೪-೭೫ರಲ್ಲಿ ಪ್ರಾರಂಭವಾದ ಈ ಸಂಘಕ್ಕೆ ಗಿರಿಮಲ್ಲಪ್ಪ ತೆನ್ನಿಹಳ್ಳಿ ಇವರು ಮೊಟ್ಟ ಮೊದಲ ಅಧ್ಯಕ್ಷರಾಗಿದ್ದರು. ಬಾಬುರಾವ್ ದೇಶಪಾಂಡೆ ಕಾರ್ಯದರ್ಶಿಯಾಗಿದ್ದರು. ೭೫ ಸದಸ್ಯರಿಂದ ಪ್ರಾರಂಭವಾದ ಈ ಸಂಘ ಮೊದಲಿಗೆ ಕೇವಲ ₹೧೯ ಸಾವಿರ ಸಾಲ ನೀಡಿತ್ತು. ಇಂದು ಬೃಹದಾಕಾರವಾಗಿ ಬೆಳೆದಿದೆ. ಸತತವಾಗಿ ಹತ್ತು ವರ್ಷಗಳಿಂದ ಅಧ್ಯಕ್ಷರಾಗಿರುವ ವೆಂಕಟರಾವ ಪಾಟೀಲರ ಅಧ್ಯಕ್ಷತೆಯಲ್ಲಿ ಸಂಘವು ಲಾಭದಲ್ಲಿದ್ದು, ₹೧೦೨.೭೯ ಲಕ್ಷ ಷೇರು ಬಂಡವಾಳ ಹೊಂದಿದೆ. ₹೧೬೬.೬೦ ಲಕ್ಷ ಠೇವಣಿ ಸಹ ಹೊಂದಿದೆ. ಕಳೆದ ಹಲವಾರು ವರ್ಷಗಳಿಂದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಲ ಮನ್ನಾ ಸಹಿತ ಆಗಿದ್ದು, ಉತ್ತಮವಾಗಿದೆ. ಸಂಘ ಪ್ರಾರಂಭವಾಗಿ ೫೦ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಈ ಕಟ್ಟಡದ ಉದ್ಘಾಟನೆಯಾಗುತ್ತಿರುವುದು ಗೊರನಾಳ, ತೆನ್ನಿಹಳ್ಳಿ, ಬನ್ನೆಟ್ಟಿ, ಮಸಳಿ ಸೇರಿದಂತೆ ವಿವಿಧ ರೈತರಿಗೆ ಸಂತಸ ತಂದಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.