ಸಾರಾಂಶ
ಕನ್ನಡಪ್ರಭ ವಾರ್ತೆ ಉಳ್ಳಾಲ
ಕರ್ನಾಟಕ ಸರ್ಕಾರ ಪ್ರತಿ ಜಿಲ್ಲೆಯಲ್ಲಿಯೂ ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ಈಗಾಗಲೇ ಸ್ಥಾಪನೆ ಮಾಡುತ್ತಿದ್ದು ಈ ಮೂಲಕ ಗ್ರಾಮೀಣ ಭಾಗದ ಹಾಗೂ ಮೆರಿಟ್ ಕ್ವೋಟಾ ಮೂಲಕ ಸೀಟ್ ಪಡೆದು ಬರುವ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯೂ ಗುಣಮಟ್ಟದ ವೈದ್ಯಕೀಯ ಶಿಕ್ಷಣ ಪಡೆದು ವೈದ್ಯರಾಗಬೇಕು ಅನ್ನುವ ಗುರಿ ಇದಾಗಿದೆಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃಧ್ಧಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ನಾಟೆಕಲ್ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ದಶಮಾನೋತ್ಸವ ಪೂರೈಸುತ್ತಿರುವ ಸಂದರ್ಭದಲ್ಲಿ ಕಣಚೂರು ಆಯುರ್ವೇದ ಆಸ್ಪತ್ರೆ, ಕಣಚೂರು ಫಾರ್ಮಸಿ ಕಾಲೇಜು, 1000 ಆಸನವುಳ್ಳ ಸುಸಜ್ಜಿತ ಆಡಿಟೋರಿಯಂ, ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗಾಗಿ ಇಂಟರ್ ವೆನ್ಷನಲ್ ಕೆಥಟರೈಝೇಷನ್ ಲ್ಯಾಬ್ ಸಹಿತ ಲೆವೆಲ್ 3 ಐಸಿಯು ಹಾಗೂ ಶಸ್ತ್ರಚಿಕಿತ್ಸಾ ಘಟಕಗಳ ಉದ್ಘಾಟನೆ ಹಾಗೂ ಆಸ್ಪತ್ರೆ ಸ್ಥಾಪಕ ಡಾ. ಯು.ಕಣಚೂರು ಮೋನು ಇವರ ಆತ್ಮಚರಿತ್ರೆ ಪುಸ್ತಕ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಂಗಳೂರು ವಿದ್ಯಾಕೇಂದ್ರವಾಗಿ ಬಹಳ ಮುಂಚೂಣಿಯಲ್ಲಿ ಹೊರಹೊಮ್ಮುತ್ತಿದೆ.ರಾಜ್ಯದಲ್ಲಿ ಬೆಂಗಳೂರು ನಂತರ ಇದೀಗ ಮಂಗಳೂರು ವೈದ್ಯಕೀಯ ಕ್ಷೇತ್ರವಾಗಿ ಬೆಳೆಯುತ್ತಿದೆ. ಇದಕ್ಕೆ ಮೂಲಕ ಕಾರಣ ಮಂಗಳೂರಿನವರಿಗೆ ಶಿಕ್ಷಣದ ಬಗ್ಗೆ ಇರುವ ಅರಿವು ಹಾಗೂ ಆಸಕ್ತಿ ಎಂದರು.
ಕಣಚೂರು ಆಯುರ್ವೇದ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಇಡೀ ವಿಶ್ವಕ್ಕೆ ಮಾನವ ಸಂಪನ್ಮೂಲವನ್ನು ಒದಗಿಸಿ ಕೊಡುವ ಶಕ್ತಿ ಭಾರತಕ್ಕಿದೆ. ಆರೋಗ್ಯ, ಶಿಕ್ಷಣಕ್ಕೆ ಭಾರತದಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದೆ. ಪ್ರಸ್ತುತ ಆರ್ಥಿಕ ಅಭಿವೃದ್ಧಿಯತ್ತ ದೇಶ ಸಾಗುತ್ತಿದ್ದು ಅದರ ಜೊತೆಗೆ ಯುವ ಸಮುದಾಯದ ಆರೋಗ್ಯವೂ ಕೆಡುತ್ತಿದ್ದು ಸಣ್ಣ ವಯಸ್ಸಿಗೆ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯಿ ಸಂಬಂಧಿಸಿ ಕಾಯಿಲೆಗಳು ಅನುಭವಿಸುತ್ತಿರುವುದು ದುರದೃಷ್ಟಕರವಾದ ಸಂಗತಿ ಎಂದರು.ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಕಣಚೂರು ಫಾರ್ಮಸಿ ಕಾಲೇಜು, ಕಣಚೂರು ಕಾನ್ಫರೆನ್ಸ್ ಸಭಾಂಗಣ ಹಾಗೂ ಕಣಚೂರು ಸ್ಥಾಪಕ ಯು.ಕಣಚೂರು ಮೋನು ಇವರ ಆತ್ಮಚರಿತ್ರೆ ಪುಸ್ತಕದ ಅನಾವರಣಗೊಳಿಸಿ ಮಾತನಾಡಿ, ಕಣಚೂರು ಮೋನು ಅವರು ಕನಸನ್ನು ನನಸಾಗಿಸಿದ ಸಾಧಕರಾಗಿದ್ದಾರೆ. ಅತ್ಯಾಧುನಿಕತ ಸೌಲಭ್ಯಗಳ ಮೂಲಕ ಶಿಕ್ಷಣ, ವೈದ್ಯಕೀಯ ಶಿಕ್ಷಣಕ್ಕೆ ಒತ್ತು ನೀಡಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದರು.
ವಿಧಾನಪರಿಷತ್ ಸದಸ್ಯ ಎಸ್ .ಎನ್.ಭೋಜೆ ಗೌಡ ಮಾತನಾಡಿ, ಕಣಚೂರು ಮೋನು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದ್ದಾರೆ. ನಿರಂತರ ಸಾಧನೆ ಹಾಗೂ ಹೃದಯ ಶ್ರೀಮಂತಿಕೆಯ ಮೂಲಕ ಅವರ ಶ್ರೇಷ್ಠತೆಯ ಮೂಲ ಮುಗಿಲೆತ್ತರಕ್ಕೆ ಏರಲಿದ್ದಾರೆ ಎಂದರು.ಇಂಟರ್ ವೆನ್ಷನಲ್ ಕೆಥಟರೈಝೇಷನ್ ಲ್ಯಾಬ್, ಲೆವೆಲ್ 3 ಐಸಿಯು ಮತ್ತು ಶಸ್ತ್ರಚಿಕಿತ್ಸಾ ಕೇಂದ್ರವನ್ನು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃಧ್ಧಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಉದ್ಘಾಟಿಸಿದರು.
ಮಾಜಿ ಸಚಿವೆ ಮೋಟಮ್ಮ , ಮಾಜಿ ಸಚಿವ ರಮನಾಥ ರೈ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್, ಡಾ.ಯೇನೆಪೋಯ ಅಬ್ದುಲ್ಲಾ ಕುಂಞಿ, ಕಣಚೂರು ಮೋನು ಅಭಿಮಾನಿ ಬಳಗದ ಅಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಡಾ.ಇಫ್ತಿಕಾರ್ ಆಲಿ, ಟ್ರಸ್ಟಿ ಝೋಹರಾ ಮೋನು, ಮಾಜಿ ಶಾಸಕ ಮೊಯ್ದಿನ್ ಬಾವ, ಅಝೀಝಿಯಾ ಇನ್ಸ್ಟಿಟ್ಯೂಟ್ನ ಡಾ.ಹಶಿಮ್ , ಡೀನ್, ಡಾ.ಶಾನ್ ನವಾಝ್ ಮನ್ನಿಪ್ಪಾಡಿ, ಮುಹಮ್ಮದ್ ಇಸ್ಮಾಯಿಲ್ ಹೆಜಮಾಡಿ ಇದ್ದರು.ಕಣಚೂರು ಮೋನು ಅವರ ಗುರುಗಳಾದ ಶಂಕರ್ ಮಾಸ್ಟರ್, ವೆಂಕಪ್ಪ ಮಾಸ್ಟರ್ , ಬೆನ್ನಿ ಡಿಸೋಜ ಅವರನ್ನು ಗೌರವಿಸಲಾಯಿತು.
ಯು.ಕಣಚೂರು ಮೋನು ಇವರ ಆತ್ಮಚರಿತ್ರೆ ರಚಿಸಿದ ಮುಳಿಯ ಶಂಕರ್ ಭಟ್ ಅವರನ್ನು ಅಭಿನಂದಿಸಲಾಯಿತು.ಡಾ. ಹಾಜಿ ಯು.ಕೆ ಮೋನು ಅವರನ್ನು ಡಾ.ಹಾಜಿ.ಯು.ಕೆ.ಮೋನು ಅಭಿಮಾನಿ ಬಳಗದ ವತಿಯಿಂದ ಅಭಿನಂದಿಸಲಾಯಿತು.
ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಆಡಳಿತ ನಿರ್ದೇಶಕ ಕಣಚೂರು ಅಬ್ದುಲ್ ರೆಹಮಾನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಚೇತನ್ ಹಾಗೂ ಪ್ರತೀಕ್ಷ ನಿರೂಪಿಸಿದರು.
.....................ಕೊಣಾಜೆ ಪಟ್ಟೋರಿಯ ಬಡಕುಟುಂಬದಲ್ಲಿ ಹುಟ್ಟಿ ಬೆಳೆದ ನಾಲ್ಕನೇ ತರಗತಿಯಷ್ಟೇ ಕಲಿತಿದ್ದೆ. ನನ್ನ ಇಡೀ ಜೀವನವೇ ದುಡಿಮೆ ದುಡಿಮೆ ಎಂದು ಕಳೆದಿದ್ದೇನೆ. ಪರಿಶ್ರಮವೇ ಸಾಧನೆಯ ಮೆಟ್ಟಿಲು. ವಿದ್ಯಾಸಂಸ್ಥೆಯನ್ನು ಕಟ್ಟುವ ಕನಸು ನನಸಾಗಿದೆ.-ಡಾ.ಯು.ಕೆ.ಮೋನು.