ಸಾರಾಂಶ
ಹಿರೇಕೆರೂರು: ಪಟ್ಟಣದ ಪೊಲೀಸ್ ಮೈದಾನದಲ್ಲಿ ನಿರ್ಮಾಣಗೊಂಡ ಶ್ರೀ ವಿಘ್ನೇಶ್ವರ ಹಾಗೂ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನೆ, ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇತ್ತೀಚೆಗೆ ಜರುಗಿದವು.
ಈ ಕಾರ್ಯಕ್ರಮದ ಪ್ರಯುಕ್ತ ಬೆಳಗ್ಗೆ 9 ಗಂಟೆಗೆ ಶ್ರೀ ವಿಘ್ನೇಶ್ವರ ಹಾಗೂ ಶ್ರೀ ಆಂಜನೇಯ ಸ್ವಾಮಿ ಮೂರ್ತಿಗಳ ಭವ್ಯ ಮೆರವಣಿಗೆ ಪಟ್ಟಣದ ಜಿ.ಬಿ. ಶಂಕರರಾವ್ ವೃತ್ತದಿಂದ ಸರ್ವಜ್ಞ ವೃತ್ತದ ವರೆಗೆ ಸಾಗಿ ಆನಂತರ ಸಕಲ ವಾದ್ಯಗಳು ಹಾಗೂ ಮುರ್ಡೇಶ್ವರದ ಚಂಡಿಕಾ ವಾದ್ಯ, ಕನವಳ್ಳಿಯ ಗೊಂಬೆಗಳ ಕುಣಿತ ಹಾನಗಲ್ನ ಸುಗಂ ಕಲಾ ತಂಡದ ಕಹಳೆ ಮತ್ತು ಪೂರ್ಣ ಕುಂಭಮೇಳಗಳದೊಂದಿಗೆ ಪೊಲೀಸ್ ಮೈದಾನದಲ್ಲಿ ನಿರ್ಮಾಣಗೊಂಡ ದೇವಸ್ಥಾನ ತಲುಪಿತು.ಧಾರ್ಮಿಕ ನಿಯಮಾನುಸಾರ ಪಟ್ಟಣದಲ್ಲಿ ಗಂಗೆಪೂಜೆ, ಕುಂಭ ಮೆರವಣಿಗೆ, ಹೋಮ-ಹವನಗಳು ಜರುಗಿದವು. ಈ ಸಂದರ್ಭದಲ್ಲಿ ವೀರಗಾಸೆ ಭದ್ರಕಾಳಿ ಮಕ್ಕಳ ನೃತ್ಯ ಪ್ರದರ್ಶನದೊಂದಿಗೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಸಂಜೆ ಎರಡೂ ಮೂರ್ತಿಗಳಿಗೆ ಧಾರವಾಡದ ಸಂತೋಷ ಭಟ್ ಹಾಗೂ ಸಂಗಡಿಗರಿಂದ ಜಲಾವಾಸ, ಧಾನ್ಯಾವಾಸ, ವಸ್ತ್ರಾವಾಸ, ಶಯಾವಾಸ ಹಾಗೂ ನವಗ್ರಹ ಸಹಿತ ವಾಸ್ತು ಹೋಮ ನೆರವೇರಿಸಲಾಯಿತು.
ದೇವಸ್ಥಾನ ಉದ್ಘಾಟನೆ ನಿಮಿತ್ತ ಪಟ್ಟಣವನ್ನು ಹೂವು, ಹಸಿರು ತೋರಣಗಳಿಂದ ಶೃಂಗರಿಸಲಾಗಿತ್ತು. ವಿದ್ಯುತ್ ದೀಪಗಳಿಂದ ಪಟ್ಟಣವೆಲ್ಲ ಕಂಗೋಳಿಸುವಂತೆ ಅಲಂಕರಿಸಲಾಗಿತ್ತು. ನೂರಾರು ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು.ಇದಕ್ಕೂ ಮುನ್ನ ಶಾಸಕ ಯು.ಬಿ. ಬಣಕಾರ ಭವ್ಯ ಮೆರವಣಿಗೆಗೆ ಚಾಲನೆ ನೀಡಿ ಶುಭ ಹಾರೈಸಿದರು. ಮೆರವಣಿಗೆಯಲ್ಲಿ ಸಿಪಿಐ ಬಸವರಾಜ ಪಿ.ಎಸ್. ಪಿಎಸ್ಐ ನೀಲಪ್ಪ ನರನಾಲ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ಲೋಕಪ್ಪ ಸಂಕೋಳ್ಳಿ, ಸತೀಶ ನಾಡಿಗೇರ, ಮಹೇಂದ್ರ ಬಡಳ್ಳಿ, ಗುರುಶಾಂತಪ್ಪ ಎತ್ತಿನಹಳ್ಳಿ, ಕಂಠಾಧರ ಅಂಗಡಿ, ರುದ್ರಮುನಿ ಹುಲ್ಮನಿ, ದುರಗಪ್ಪ ನೀರಲಗಿ, ಬಸವರಾಜ ಚಿಂದಿ, ರುದ್ರಪ್ಪ ಶೆಟ್ಟರ, ಗುರುಮೂರ್ತಿ ನಾಡಿಗೇರ, ಯುವರಾಜ ಪಾಳೇದ, ಶ್ರೀನಿವಾಸ ಶಿರಗಂಬಿ, ರಾಮು ಮುರ್ಡೇಶ್ವರ ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು.