ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಸಾಯನಿಕಗಳ ಬಳಕೆ, ಸಸ್ಯರೋಗ ಮತ್ತು ಕೀಟ ನಿರ್ವಹಣೆ ಮುಂತಾದ ಸಮಗ್ರ ಕೃಷಿ ಪದ್ಧತಿಯಿಂದ ಮೆಣಸಿನಕಾಯಿ ಬೆಳೆ ಬೆಳೆಯುವುದರಿಂದ ರೈತರು ಅಧಿಕ ಆದಾಯ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಅಭಿಪ್ರಾಯಪಟ್ಟರು.ತೋವಿವಿಯ ಸಭಾಭವನದಲ್ಲಿಂದು ಮೂರು ದಿನಗಳ ಕಾಲ ನಡೆದ ಮೆಣಸಿನಕಾಯಿ ಬೆಳೆ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಮೆಣಸಿನಕಾಯಿ ದೇಶದ ಕೆಲವು ರಾಜ್ಯಗಳಲ್ಲಿ ಪ್ರಮುಖವಾಗಿ ಬೆಳೆದರೂ ರಫ್ತು ಮಾರುಕಟ್ಟೆಯಲ್ಲಿ ಹೆಸರು ಗಳಿಸಿದ್ದು, ನಮ್ಮ ಹೆಮ್ಮೆಯ ವಿಷಯವಾಗಿದೆ. ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ಮುಖ್ಯ ಬೆಳೆಯಾಗಿರುವ ಮೆಣಸಿನಕಾಯಿಯು ಇಂದು ಪ್ರಯೋಗಾಲಯದಿಂದ ಜಮೀನಿಗೆ, ಜಮೀನಿನಿಂದ ಜಾಗತೀಕರಣದ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಹೇಳಿದರು.
ಜಿಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಇಂದು ಮೆಣಸಿನಕಾಯಿ ಕೃಷಿಯಲ್ಲಿ ಸಂಶೋಧನೆಗಳು ಆಗಿದ್ದರೂ ಇನ್ನೂ ಸವಾಲುಗಳೂ ಸಹ ಇವೆ. ಉತ್ತಮ ಗುಣಮಟ್ಟದ ಬೀಜ, ಸಮಗ್ರ ಕೃಷಿ ಪದ್ಧತಿಗಳು ಅವಶ್ಯವಾಗಿವೆ. ಈ ಬೆಳೆಯನ್ನು ಖುಷ್ಕಿ ಭೂಮಿಯಲ್ಲಿ ಅಲ್ಲದೆ ನೀರಾವರಿಯಲ್ಲಿಯೂ ಸಹ ಬೆಳೆಯುತ್ತಿದ್ದಾರೆ. ಜೊತೆಗೆ ಸರ್ಕಾರದ ಸಾಕಷ್ಟು ಸೌಲಭ್ಯಗಳು ಹಾಗೂ ವಿಜ್ಞಾನಿಗಳ ಮಾರ್ಗದರ್ಶನವನ್ನು ಪಡೆದು ರೈತರು ಮೆಣಸಿನಕಾಯಿ ಕೃಷಿಗೆ ಮನಸ್ಸು ಮಾಡಬೇಕಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ತೋವಿವಿ ಕುಲಪತಿ ಡಾ. ವಿಷ್ಣುವರ್ಧನ ಮಾತನಾಡಿ, ಈ ಸಮ್ಮೇಳನದಲ್ಲಿ ಪ್ರಬಂಧ ಮಂಡನೆಗಳು, ಭಿತ್ತಿಚಿತ್ರ ಮಂಡನೆಗಳು ಕೇವಲ ವೈಜ್ಞಾನಿಕತೆಯಿಂದ ಮಾತ್ರವಲ್ಲ, ಪ್ರಾಯೋಗಿಕವಾಗಿದ್ದು, ಖಾಸಗಿ ಸಹಭಾಗಿತ್ವದಲ್ಲಿ ಆಯೋಜನೆಗೊಂಡ ಈ ಸಮ್ಮೇಳನದಿಂದ ರೈತರು ಮತ್ತು ಉದ್ಯಮಿಗಳಿಗೆ ಬಹಳಷ್ಟು ಪ್ರಯೋಜನ ಉಂಟಾಗಿದೆ. ಈ ಸಮ್ಮೇಳನದಿಂದ ಸಾಕಷ್ಟು ಉಪಯುಕ್ತ ಶಿಫಾರಸ್ಸುಗಳು ಹೊರಬಂದಿರುತ್ತವೆ ಎಂದು ಹೇಳಿದರು.ತೋವಿವಿಯೊಂದಿಗೆ ಭಾರತೀಯ ತೋಟಗಾರಿಕೆ ಸಂಸ್ಥೆ (ಎಐಎಚ್)ಯ ಜೊತೆಗೆ ಒಡಂಬಡಿಕೆ ಒಪ್ಪಂದವಾಯಿತು. ನವದೆಹಲಿ ಭಾ.ಅ.ಕೃ.ಪ ಮಾಜಿ ಉಪಮಹಾನಿರ್ದೇಶಕ ಡಾ.ಎನ್.ಕೆ. ಕೃಷ್ಟಕುಮಾರ್ ಮಾತನಾಡಿ, ಪ್ರತಿ ರಾಜ್ಯದಲ್ಲಿ ಪ್ರತಿ ಪ್ರದೇಶಗಳಲ್ಲಿಯೂ ವಿವಿಧ ತಳಿಯ ಮೆಣಸಿನಕಾಯಿ ಬೆಳೆ ಉತ್ಪಾದಿಸಲಾಗುತ್ತದೆ. ಮೆಣಸಿನಕಾಯಿ ಮಾರಾಟ, ರಫ್ತಿನಲ್ಲಿ ರೈತರಿಗೆ ಇರುವ ಸವಾಲುಗಳ ಕುರಿತು ಮಾತನಾಡಿದರು.
ಔರಂಗಬಾದ್ ಎಟಿಪಿಬಿಆರ್ ನಿರ್ದೇಶಕರಾದ ಡಾ.ಸುರೇಂದ್ರ ಟಿಕೂ ಮೆಣಸಿನಕಾಯಿ ಬೆಳೆಯ ಸಮಗ್ರ ನಿರ್ವಹಣೆ ಕುರಿತಾಗಿ ಮಾತಾಡಿದರು. ನವದೆಹಲಿಯ ಭಾ.ಅ.ಕೃ.ಪ. ಮಾಜಿ ಉಪಮಹಾನಿರ್ದೇಶಕ ಡಾ. ಎನ್.ಕೆ. ಕೃಷ್ಣಕುಮಾರ ಅತ್ಯುತ್ತಮ ಭಿತ್ತಿಚಿತ್ರಗಳು, ಪ್ರಬಂಧ ಮಂಡನೆಗಳ ಪ್ರಶಸ್ತಿ ಕಾರ್ಯಕ್ರಮ ನಡೆಸಿಕೊಟ್ಟರು. ಮೆಣಸಿನಕಾಯಿ ಸಮ್ಮೇಳನದ ಕಾರ್ಯದರ್ಶಿ ಡಾ.ವಸಂತ ಗಾಣಿಗೇರ ಸ್ವಾಗತಿಸಿದರು. ಡಾ. ಫಕ್ರುದಿನ್ ಸಮ್ಮೇಳನದ ವಂದಿಸಿದರು. ಎಟಿಪಿಬಿಆರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅಪರ್ಣಾ ತಿವಾರಿ ವಂದಿಸಿದರು. ಡಾ. ಪ್ರವೀಣ ಜೋಗಲೀಕರ ನಿರೂಪಿಸಿದರು.ಮೆಣಸಿನಕಾಯಿ ಬರೀ ಆಹಾರಕ್ಕಷ್ಟೇ ಅಲ್ಲ. ಸೌಂದರ್ಯ ಸಾಧನಗಳು, ಔಷಧ ಮುಂತಾದವುಗಳಲ್ಲಿ ಬಳಸುವುದರಿಂದ ಅನೇಕ ಉದ್ದಿಮೆಗಳು ತಲೆಯೆತ್ತಿವೆ. ಮೆಣಸಿನಕಾಯಿ ಕೊಯ್ಲೋತ್ತರ ತಂತ್ರಜ್ಞಾನದಿಂದ ಅನೇಕ ಸ್ಟಾರ್ಟಅಪ್ ಕಂಪನಿಗಳು ತಲೆಯೆತ್ತಿ ಉದ್ಯೋಗವಕಾಶಗಳು ಹುಟ್ಟಿಕೊಂಡಿವೆ.
- ಸಂಗಪ್ಪ ಜಿಲ್ಲಾಧಿಕಾರಿ;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))