-2026–27ನೇ ಸಾಲಿನ ಸಾಮಾಜಿಕ ಪರಿಶೋಧನಾ ಗ್ರಾಮಸಭೆ
-----ಕನ್ನಡಪ್ರಭ ವಾರ್ತೆ ಗುರುಮಠಕಲ್
ಗ್ರಾಮೀಣ ಬಡ ಕುಟುಂಬಗಳ ಆದಾಯ ಭದ್ರತೆಯನ್ನು ಮತ್ತಷ್ಟೂ ಬಲಪಡಿಸುವ ನಿಟ್ಟಿನಲ್ಲಿ ವಿಕಸಿತ್ ಭಾರತ್ - ಜಿ ರಾಮ್ ಜಿ ಕಾಯ್ದೆ–2025 ಮಹತ್ವದ ಹೆಜ್ಜೆಯಾಗಿದೆ ಎಂದು ಪಿಡಿಓ ಶಿವರಾಜ ಹೇಳಿದರು.ತಾಲೂಕಿನ ಕಾಕಲವಾರ ಗ್ರಾಮ ಪಂಚಾಯತ್ ಆವರಣದಲ್ಲಿ 2026–27ನೇ ಸಾಲಿನ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಕಸಿತ್ ಭಾರತ್ - ಜಿ ರಾಮ್ ಜಿ ಕಾಯ್ದೆ–2025, ವಿಕ್ಷಿತ್ ಭಾರತ್–2047ರ ದೀರ್ಘಾವಧಿಯ ಅಭಿವೃದ್ಧಿ ದೃಷ್ಟಿಕೋನಕ್ಕೆ ಅನುಗುಣವಾಗಿ ಗ್ರಾಮೀಣ ಉದ್ಯೋಗ ವ್ಯವಸ್ಥೆಯನ್ನು ರೂಪಿಸುವ ಹೊಸ ಶಾಸನಬದ್ಧ ಚೌಕಟ್ಟಾಗಿದೆ. ಈ ಕಾಯ್ದೆ ಮೂಲಕ ಗ್ರಾಮೀಣ ಉದ್ಯೋಗ, ಹೊಣೆಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಆದಾಯ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ನಂತರ ಸಾಮಾಜಿಕ ಪರಿಶೋಧನೆ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ನರೇಶಕುಮಾರ ಮೋಟ್ಕರ ಮಾತನಾಡಿ, ವಿಕಸಿತ್ ಭಾರತ್ - ಜಿ ರಾಮ್ ಜಿ ಕಾಯ್ದೆ–2025ರ ಮೂಲಕ ಗ್ರಾಮೀಣ ಉದ್ಯೋಗ ವ್ಯವಸ್ಥೆಗೆ ಹೊಸ ರೂಪ ನೀಡಲಾಗುತ್ತಿದೆ. ಪ್ರಮಾಣಿತ ನಿಧಿ ವ್ಯವಸ್ಥೆ ಹಾಗೂ ಕೇಂದ್ರ ಪ್ರಾಯೋಜಿತ ರಚನೆಯಿಂದ ಯೋಜನೆಗೆ ಹೆಚ್ಚಿನ ಪಾರದರ್ಶಕತೆ, ಹೊಣೆಗಾರಿಕೆ, ಭವಿಷ್ಯಸೂಚಕತೆ ಮತ್ತು ಕೇಂದ್ರ ರಾಜ್ಯಗಳ ನಡುವಿನ ಸಮನ್ವಯ ಬಲಗೊಳ್ಳಲಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಾದ ನರಸಪ್ಪ ಉಜ್ಜೇಳಿ, ಪೊಲೀಸ್ ಅಧಿಕಾರಿಯಾದ ಹನುಮಂತಪ್ಪ, ಎನ್ಆರ್ಎಲ್ಎಂ ಸಂಯೋಜಕ ಬಂದೆನವಾಜ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಹಾಗೂ ಬಸಯ್ಯ ಕಲಾಲ್, ನರೇಗಾ ಕೂಲಿ ಕಾರ್ಮಿಕರು, ಗ್ರಾಮದ ಮುಖಂಡರು, ಪಂಚಾಯತ್ ಸಿಬ್ಬಂದಿ ವರ್ಗದವರು ಮತ್ತು ಸಾಮಾಜಿಕ ಪರಿಶೋಧನಾ ತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
-3ವೈಡಿಆರ್9 : ಗುರುಮಠಕಲ್ ತಾಲೂಕಿನ ಕಾಕಲವಾರ ಗ್ರಾ.ಪಂ ಆವರಣದಲ್ಲಿ 2026–27ನೇ ಸಾಲಿನ ಸಾಮಾಜಿಕ ಪರಿಶೋಧನಾ ಗ್ರಾಮಸಭೆ ನಡೆಸಲಾಯಿತು.