ಸಾರಾಂಶ
ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಸೇರಿದಂತೆ ವಿವಿಧೆಡೆ ಕಳ್ಳತನವಾಗಿದೆ. ಕಳ್ಳರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೇ, ಕ್ಯಾತನಹಳ್ಳಿಯಲ್ಲಿ ನಡೆದ ಮನೆ ಕಳ್ಳತನ ಮಾಡಲು ಬಂದು ಮನೆ ಮಾಲೀಕರನ್ನೇ ಹತ್ಯೆ ಮಾಡಿ ಹೋಗಿರುವ ಘಟನೆಗಳು ನಡೆದಿವೆ. ಇದರಿಂದ ಮಹಿಳೆಯರು, ಮಕ್ಕಳಲ್ಲಿ ಆತಂಕ ಹೆಚ್ಚಾಗಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ವಿವಿಧೆಡೆ ಕಳ್ಳತನ ಕೃತ್ಯಗಳು ಹೆಚ್ಚಾಗುತ್ತಿದ್ದು, ಪೊಲೀಸರು ಹೆಚ್ಚಿನ ಗಮನ ಹರಿಸಬೇಕು ಎಂದು ಭೂಮಿತಾಯಿ ಹೋರಾಟ ಸಮಿತಿಯಿಂದ ಪೊಲೀಸರಿಗೆ ಮನವಿ ಸಲ್ಲಿಸಲಾಯಿತು.ಭೂಮಿತಾಯಿ ಹೋರಾಟ ಸಮಿತಿ ಮುಖಂಡ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಪಟ್ಟಣದ ಡಿವೈಎಸ್ಪಿ ಕಚೇರಿ ಬಳಿ ಪೊಲೀಸ್ ಠಾಣೆಗೆ ಆಗಮಿಸಿ ತಾಲೂಕಿನ ವಿವಿಧೆಡೆ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದರೂ ಕಳ್ಳರನ್ನು ಹಿಡಿಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದರು.
ತಾಲೂಕಿನ ಮಹದೇವಪುರ ಸೇರಿದಂತೆ ವಿವಿಧೆಡೆ ಕಳ್ಳತನವಾಗಿದೆ. ಕಳ್ಳರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೇ, ಕ್ಯಾತನಹಳ್ಳಿಯಲ್ಲಿ ನಡೆದ ಮನೆ ಕಳ್ಳತನ ಮಾಡಲು ಬಂದು ಮನೆ ಮಾಲೀಕರನ್ನೇ ಹತ್ಯೆ ಮಾಡಿ ಹೋಗಿರುವ ಘಟನೆಗಳು ನಡೆದಿವೆ. ಇದರಿಂದ ಮಹಿಳೆಯರು, ಮಕ್ಕಳಲ್ಲಿ ಆತಂಕ ಹೆಚ್ಚಾಗಿದೆ ಎಂದರು.ಒಂಟಿ ಮನೆಗಳನ್ನು ನೋಡಿಕೊಂಡು ಕಳ್ಳತನ ಮಾಡಿ ಹತ್ಯೆ ಮಾಡುತ್ತಿದ್ದಾರೆ. ಮನೆ ಕಳ್ಳತನಕ್ಕೆ ಬಂದ ಕಳ್ಳರನ್ನು ಗ್ರಾಮಸ್ಥರೇ ಬೆನ್ನಟ್ಟಿ ಹಿಡಿಯುವಂತಾಗಿದೆ. ಹೊರಗಿನ ಹಾಗೂ ಒಳಗಿನ ಕಳ್ಳರು ಯಾರು ಎಂಬುದು ಪೊಲೀಸರಿಗೆ ತಿಳಿದಿದ್ದು ಇತಂಹವರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ತನಿಖೆ ಮಾಡಿ ಅವರ ಚಲನವಲನಗಳ ಕಡೆ ಗಮನಹರಿಸಿ ಕಳ್ಳತನ ತಡೆಯುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.
ಪೊಲೀಸರಿಂದ ರಕ್ಷಣೆ ಸಿಗುತ್ತದೆ ಎಂಬ ಭರವಸೆಗಳನ್ನು ಹುಸಿ ಮಾಡಬಾರದು. ಪ್ರತಿ ದಿನ ಗ್ರಾಮಗಳಲ್ಲಿ ಗಸ್ತು ತಿರುಗಬೇಕು. ಮನೆಯಲ್ಲಿನ ನಾಗರೀಕರಿಗೆ ಕಳ್ಳರಿಂದಾಗುವ ಅನಾಹುತಗಳ ತಪ್ಪಿಸಿ ಭಯವನ್ನು ಹೋಗಲಾಡಿಸಬೇಕು ಎಂದು ಒತ್ತಾಯಿಸಿ ಸಿಪಿಐ ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಹಿರಿಯ ಮುಖಂಡ ಶಿವಣ್ಣ, ಹುಂಡವಾಡಿ ಮಹದೇವು, ಮಹದೇವಪುರ ಕೃಷ್ಣ, ರಾಮಚಂದ್ರ, ರಾಮಕೃಷ್ಣ, ಶ್ರೀನಿವಾಸು, ಕೃಷ್ಣಪ್ಪ ಸೇರಿದಂತೆ ಇತರ ಕಾರ್ಯಕರ್ತರು ಇದ್ದರು.