ಯುವಕರು ದೇಶಭಕ್ತಿ ಮೈಗೂಡಿಸಿಕೊಳ್ಳಿ: ಶಿವಶರಣಪ್ಪ

| Published : Jul 27 2024, 12:45 AM IST

ಸಾರಾಂಶ

ಕಲಬುರಗಿಯ ಆಳಂದ ರಸ್ತೆಯ ಖಾದ್ರಿ ಚೌಕ್‌ನಲ್ಲಿರುವ ಸಕ್ಸಸ್ ಕಂಪ್ಯೂಟರ್‌ ತರಬೇತಿ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ‘ಕಾರ್ಗಿಲ್ ವಿಜಯ ದಿವಸ’ದ ೨೫ನೇ ವರ್ಷದ ರಜತ ಸಂಭ್ರಮಾಚರಣೆಯ ‘ಯೋಧರಿಗೊಂದು ಸಲಾಂ’ ವಿಶೇಷ ಕಾರ್ಯಕ್ರಮದಲ್ಲಿ ಕಾರ್ಗಿಲ್ ಯೋಧ ಶಿವಶರಣಪ್ಪ ಎಸ್. ತಾವರಖೇಡ ಅವರಿಗೆ ಸನ್ಮಾನಿಸಲಾಯಿತು.

ಕಲಬುರಗಿ: ಯುವಕರು ಯಾವುದೇ ಹುದ್ದೆ ಆಯ್ಕೆ ಮಾಡಿಕೊಳ್ಳಿ, ಆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ. ಆದರೆ, ತಮ್ಮ ವೃತ್ತಿಯ ಗೌರವದ ಜೊತೆಗೆ ದೇಶಭಕ್ತಿ ಮೈಗೂಡಿಸಿಕೊಂಡು ದೇಶ ಸೇವೆ ಮಾಡಬೇಕು. ನಿಗದಿತ ಗುರಿ ನಿರ್ಧರಿಸಿ, ನಿರಂತರ ಪ್ರಯತ್ನ ಮಾಡುವ ಮೂಲಕ ಉನ್ನತ ಸಾಧನೆ ಮಾಡಬೇಕು. ತಮ್ಮ ಜೀವದ ಹಂಗನ್ನು ತೊರೆದು ದೇಶಕ್ಕಾಗಿ ಸೇವೆ ಸಲ್ಲಿಸುವ ಸೈನಿಕರಿಗೆ ಗೌರವ ನೀಡಡಬೇಕು ಎಂದು ಕಾರ್ಗಿಲ್ ಯೋಧ ಶಿವಶರಣಪ್ಪ ಎಸ್. ತಾವರಖೇಡ ಯುವಕರಿಗೆ ಸಲಹೆ ನೀಡಿದರು.

ನಗರದ ಆಳಂದ ರಸ್ತೆಯ ಖಾದ್ರಿ ಚೌಕ್‌ನಲ್ಲಿರುವ ಸಕ್ಸಸ್ ಕಂಪ್ಯೂಟರ್‌ ತರಬೇತಿ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ‘ಕಾರ್ಗಿಲ್ ವಿಜಯ ದಿವಸ’ದ ೨೫ನೇ ವರ್ಷದ ರಜತ ಸಂಭ್ರಮಾಚರಣೆಯ ‘ಯೋಧರಿಗೊಂದು ಸಲಾಂ’ ವಿಶೇಷ ಕಾರ್ಯಕ್ರಮದಲ್ಲಿ ಗೌರವ ಸತ್ಕಾರ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.

ಯೋಧರು ಹಿಮಾವೃತ ಪ್ರದೇಶ, ವಿಪರಿತ ಚಳಿ, ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿಯೂ ಜೀವದ ಹಂಗನ್ನು ತೊರೆದು, ತಮ್ಮ ಕುಟುಂಬದ ಬಗ್ಗೆ ಚಿಂತಿಸದೆ, ಹಗಲು-ರಾತ್ರಿಯೆನ್ನದೇ ದೇಶದ ರಕ್ಷಣೆಗೆ ಸದಾ ಕಂಕಣಬದ್ಧವಾಗಿ ಅಮೂಲ್ಯವಾದ ಸೇವೆಯನ್ನು ಸಲ್ಲಿಸುವ ಸೈನಿಕರಿಗೆ ದೇಶವೇ ತಮ್ಮ ಪರಿವಾರವೆಂಬ ಭಾವನೆಯಿರುತ್ತದೆ. ಭಾರತೀಯರ ಸೈನಿಕರು ವಿಶ್ವದಲ್ಲಿಯೇ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಸೇವೆ ಅನನ್ಯ. ಸೈನಿಕ ವೃತ್ತಿಯ ಬಗ್ಗೆ ನಿರ್ಲಕ್ಷ್ಯ ವಹಿಸದೇ, ಯುವಕರು ದೇಶಸೇವೆ ಸಲ್ಲಿಸಲು ಸಿದ್ಧರಾಗಬೇಕು ಎಂದು ಕಾರ್ಗಿಲ್ ಯುದ್ಧ ಜರುಗಿದ ಮತ್ತು ಅದರಲ್ಲಿ ತಾವು ಸಲ್ಲಿಸಿದ ಸೇವೆಯ ಬಗ್ಗೆ ವಿವರಿಸಿದರು.

ಎಚ್.ಬಿ. ಪಾಟೀಲ, ಡಾ.ಸುನೀಲಕುಮಾರ ಎಚ್.ವಂಟಿ, ಅಸ್ಲಾಂ ಶೇಖ್, ಶಿವಯೋಗೆಪ್ಪಾ ಎಸ್.ಬಿರಾದಾರ, ಪೂಜಾ ಜಮಾದಾರ, ಐಶ್ವರ್ಯ ಬಿರಾದಾರ, ನಿಲೊಫರ್ ಶೇಖ್, ಸಮರ್ಥ, ಪ್ರವೀಣ, ಸಂಕೇತ, ರೋಹಿತ್, ಸಂಗಮೇಶ್, ಬಸವರಾಜ, ಶರಣು, ಲಕ್ಷ್ಮೀಕಾಂತ, ಬೀರಪ್ಪ ಹಾಗೂ ವಿದ್ಯಾರ್ಥಿಗಳಿದ್ದರು.