ಸಾರಾಂಶ
ದೊಡ್ಡಬಳ್ಳಾಪುರ: ಕುಟುಂಬ ವ್ಯವಸ್ಥೆಯಲ್ಲಿ ಮಕ್ಕಳು ಸಂಸ್ಕಾರ ಕಲಿತರೆ, ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಮೆಳೇಕೋಟೆಯ ಎಸ್ಜೆಸಿಆರ್ ಶಾಲೆಯಲ್ಲಿ ಆಯೋಜಿಸಿದ್ದ ಮಾತೃಭೋಜನ ಹಾಗೂ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳನ್ನು ಬೆಳೆಸುವ ಪೋಷಿಸುವ ಮಾರ್ಗದಲ್ಲಿ ಸದ್ಗುಣ ಸನ್ನಡತೆ, ಸದಾಚಾರ ಮಾತುಗಳು ಅವರಲ್ಲಿದ್ದಾಗ ಅದು ತಾನಾಗಿ ತಮ್ಮ ಮಕ್ಕಳಿಗೆ ಬರುತ್ತದೆ. ಆದ್ದರಿಂದ ತಂದೆ ತಾಯಿ ಸರಿಯಾದ ಮಾರ್ಗದಲ್ಲಿದ್ದಾಗ ಮಕ್ಕಳು ಅವರನ್ನು ಅವಲಂಬಿಸಲು ಸಾಧ್ಯ. ಇಂದಿನ ಆಧುನಿಕ ಶಿಕ್ಷಣದ ವ್ಯವಸ್ಥೆಯಲ್ಲಿ ಮೌಲ್ಯಗಳು ಇಲ್ಲದಂತಾಗಿದೆ ಎಂದು ಹೇಳಿದರು. ಶಿಕ್ಷಣ ಕೇವಲ ವ್ಯಾಪಾರೀಕರಣ ಉದ್ಯೋಗಕ್ಕಷ್ಟೇ ಸೀಮಿತವಾಗಿದ್ದ ಕಾರಣ ಬರೀ ಆ ದೃಷ್ಟಿಯಲ್ಲಿ ನೋಡುವಂತಾಗಿದೆ. ಆದ್ದರಿಂದ ಶಿಕ್ಷಣ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನಲ್ಲಿ ಅವನ ಗುಣಮಟ್ಟದ ಜೀವನವನ್ನು ರೂಪಿಸಲು ಅದು ಅಡಿಪಾಯ ಹಾಕಲು ಹಾಗೂ ಉತ್ತಮ ಪ್ರಜೆಯನ್ನಾಗಿಸಲು ಅದು ಸಹಕಾರಿಯಾಗಲಿದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಅವರಲ್ಲಿ ಉತ್ತಮ ಸಂಸ್ಕಾರ ಬೆಳಸಿ ಈ ಸಂಸ್ಕಾರಗಳು ಮನೆಯಿಂದಲೆ ಪ್ರಾರಂಭವಾಗಬೇಕು ಎಂದು ಹೇಳಿದರು.ಕರ್ನಾಟಕ ತೆಂಗು ನಾರಿನ ಮಂಡಳಿಯ ಅಧ್ಯಕ್ಷ ವೆಂಕಟೇಶ್ಬಾಬು ಮಾತನಾಡಿ, ಹಿಂದಿನ ಕಾಲದ ಗುರುಕುಲ ಪದ್ಧತಿಯಲ್ಲಿ ಶಿಕ್ಷಣದಲ್ಲಿ ಯಾವುದೇ ವ್ಯಾಪಾರಿಗಳ ದೃಷ್ಟಿ ಇರಲಿಲ್ಲ. ಅವರ ಬದುಕನ್ನು ಕಟ್ಟಿಕೊಳ್ಳಲು ಬೇಕಾದ ಸಾಮರ್ಥ್ಯವನ್ನು ಹೆಚ್ಚಿಸಲು ಶಿಕ್ಷಣದ ಮೂಲಕ ತಲುಪಿಸುವ ಕೆಲಸ ಮಾಡುತ್ತಿದ್ದರು. ವಿದ್ಯಾರ್ಥಿಗಳು ಆಧುನಿಕತೆಗೆ ತಕ್ಕಂತೆ ತಮ್ಮ ಶಿಕ್ಷಣದ ಜತೆ ಸ್ಪರ್ಧಾತ್ಮಕ ಚಟುವಟಿಕೆಗಳು ಆರೋಗ್ಯಕರ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದರು.
ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ ಮಾತನಾಡಿ, ಇಂತಹ ಮಾತೃ ಭೋಜನ ಕಾರ್ಯಕ್ರಮಗಳಲ್ಲಿ ಎಲ್ಲಾ ವಿದ್ಯಾರ್ಥಿಗಳ ಪೋಷಕರು ಒಂದೆಡೆ ಸೇರಿ ಒಂದು ಕುಟುಂಬವೇ ನಿರ್ಮಾಣವಾಗುವುದು ಸಂತೋಷ ಸಂಗತಿ. ಇದನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಆಯೋಜನೆ ಮಾಡಬೇಕು ಎಂದರು.ನಂತರ ಮಕ್ಕಳಿಗೆ ತಾಯಂದಿರು ತಂದಿದ್ದ ಸಿಹಿ ತಿಂಡಿ ತಿನ್ನಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಹಾಡೋನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಎಚ್ ಎ ನಾಗರಾಜ್, ಬಿಜಿಎಸ್ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಡಾ. . ಶಿವರಾಮರೆಡ್ಡಿ, ಮುಖ್ಯ ಶಿಕ್ಷಕ ಎಚ್.ಎಲ್.ವಿಜಯಕುಮಾರ್ ಉಪಸ್ಥಿತರಿದ್ದರು.
1ಕೆಡಿಬಿಪಿ2-ದೊಡ್ಡಬಳ್ಳಾಪುರ ತಾಲೂಕಿನ ಮೆಳೇಕೋಟೆ ಕ್ರಾಸ್ನಲ್ಲಿರುವ ಸ್ವಾಮೀಜಿ ಶಾಲೆಯಲ್ಲಿ ಮಾತೃಭೋಜನ ಕಾರ್ಯಕ್ರಮದಲ್ಲಿ ಮಂಗಳಾನಂದನಾಥ ಸ್ವಾಮೀಜಿ ಮಾತನಾಡಿದರು.