ಸಾರಾಂಶ
ಹಾಸನ: ಕಾಲೇಜು ಆವರಣದಲ್ಲಿಯೇ ಅತಿಥಿ ಉಪನ್ಯಾಸಕರು ಹಾಗೂ ಕಾಯಂ ಉಪನ್ಯಾಸಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಏಳು ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ನೀಡಲು ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ ಆಡಳಿತ ಮಂಡಳಿ ನಿರ್ಧರಿಸಿದೆ. ಈ ವಿದ್ಯಾರ್ಥಿಗಳು ಈ ಹಿಂದೆಯೂ ಹಲವಾರು ಬಾರಿ ಇಂತಹದ್ದೇ ವರ್ತನೆ ತೋರಿದ್ದರು. ಆಗಲೂ ಅವರಿಗೆ ಎಚ್ಚರಿಕೆ ನೀಡಿ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ನೀಡಲಾಗಿತ್ತು. ಆದರೆ, ಆ ವಿದ್ಯಾರ್ಥಿಗಳು ಮತ್ತದೇ ಚಾಳಿ ಮುಂದುವರಿಸಿದ್ದು, ಉಪನ್ಯಾಸಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಬುದ್ದಿ ಹೇಳಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಹಾಗಾಗಿ ಇದನ್ನು ಸಹಿಸದ ಕಾಲೇಜು ಆಡಳಿತ ಮಂಡಳಿ ಆ ವಿದ್ಯಾರ್ಥಿಗಳ ಪೋಷಕರನ್ನು ಕರೆಸಿ ಅವರ ಮಕ್ಕಳ ವರ್ತನೆ ಬಗ್ಗೆ ಆಕ್ಷೇಪಿಸಿದೆ. ಹಲವಾರು ಬಾರಿ ಇದೇ ವರ್ತನೆ ತೋರಿರುವುದರಿಂದ ಅವರನ್ನು ನಮ್ಮ ಕಾಲೇಜಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಅವರಿಗೆ ವರ್ಗಾವಣೆ ಪತ್ರ ನೀಡುತ್ತೇವೆ. ಎಲ್ಲಿಯಾದರೂ ಕರೆದೊಯ್ಯಿರಿ ಎಂದು ಪೋಷಕರಿಗೆ ಸೂಚಿಸಲಾಗಿದೆ. ಆದರೆ, ಪೋಷಕರು ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರ ಮೇಲೆ ಕ್ರಮ ಕೈಗೊಳ್ಳದಂತೆ ಮನವಿ ಮಾಡಿದ್ದಾರೆ. ಆದರೆ, ಕಾಲೇಜಿನ ಆಡಳಿತ ಮಂಡಳಿ ಏಳೂ ವಿದ್ಯಾರ್ಥಿಗಳಿಗೆ ಟಿಸಿ ನೀಡಲು ನಿರ್ಧರಿಸಿದೆ.