ಸಾರಾಂಶ
ಬಳ್ಳಾರಿ: ಲಾರಿಗಳ ಸಗಟು ಸಾಗಣೆಯ ದರ ಹೆಚ್ಚಿಸಬೇಕು ಎಂದು ಆಗ್ರಹಿಸಿ ಲಾರಿ ಮಾಲೀಕರ ಸಂಘದಿಂದ ನಗರ ಹೊರ ವಲಯದ ವಿವಿಧ ಕಾರ್ಖಾನೆಗಳ ಎದುರು ಹಮ್ಮಿಕೊಂಡಿರುವ ಅನಿದಿಷ್ಟಾವಧಿ ಧರಣಿ ಶುಕ್ರವಾರ ಮೂರನೇ ದಿನಕ್ಕೆ ಕಾಲಿರಿಸಿದೆ.
ಸಂಘದ ಅಧ್ಯಕ್ಷ ಮಿಂಚು ಶ್ರೀನಿವಾಸ್ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಲಾರಿ ಮಾಲೀಕರು ಭಾಗವಹಿಸಿದ್ದು, ಬೇಡಿಕೆಯ ಈಡೇರಿಕೆಗೆ ಆಗ್ರಹಿಸಿದ್ದಾರೆ.ಲಾರಿಗಳ ಸಗಟು ಸಾಗಣೆಯ ದರ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ಈ ಹಿಂದೆ ಅನೇಕ ಬಾರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಕುರಿತು ಸಂಘದ ಜೊತೆ ಮಾತುಕತೆ ನಡೆಸಿದ್ದ ಮೆದುಕಬ್ಬಿಣ ಕಾರ್ಖಾನೆಗಳು ಹಾಗೂ ರೈಸ್ ಮಿಲ್ಗಳ ಮಾಲೀಕರು ದರ ಹೆಚ್ಚಿಸುವುದು ಸೇರಿದಂತೆ ಸಂಘದ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಈ ಹಿನ್ನಲೆಯಲ್ಲಿ ಹೋರಾಟ ಅನಿವಾರ್ಯವಾಗಿದೆ. ಬೇಡಿಕೆ ಈಡೇರುವವರೆಗೆ ಧರಣಿ ಮುಂದವರಿಯಲಿದೆ.
ಸಿವಿಲ್ ಲಾರಿಗಳ ಓಡಾಟ ಸಂಪೂರ್ಣ ಬಂದ್ ಮಾಡಲಾಗಿದೆ. ಸ್ಥಳೀಯ ಟಿಪ್ಪರ್ಗಳಷ್ಟೇ ಓಡಾಡುತ್ತಿವೆ.ಮೆದುಕಬ್ಬಿಣ ಕಾರ್ಖಾನೆ ಹಾಗೂ ರೈಸ್ ಮಿಲ್ ಮಾಲೀಕರು ಮಾತುಕತೆ ನಡೆಸುವುದಾಗಿ ಹೇಳುತ್ತಿದ್ದಾರೆ. ಸಂಘದ ಬೇಡಿಕೆಗಳನ್ನು ಈಡೇರಿಸಿದಲ್ಲಿ ಮಾತ್ರ ಧರಣಿ ಹಿಂದಕ್ಕೆ ಪಡೆಯಲಾಗುವುದು ಎಂದು ಮಿಂಚು ಶ್ರೀನಿವಾಸ್ ತಿಳಿಸಿದರು. ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಲಾರಿ ಮಾಲೀಕರ ಅನಿರ್ದಿಷ್ಟ ಧರಣಿ ಹಿನ್ನಲೆಯಲ್ಲಿ ಬಳ್ಳಾರಿಯ ಲಾರಿ ಟರ್ಮಿನಲ್ನಲ್ಲಿ ಕಂಡು ಬಂದ ಲಾರಿಗಳು.