ಸಾರಾಂಶ
ಧಾರವಾಡ: ಭಾರತ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅಗಾಧ ಸಾಧನೆ ಮಾಡಿದೆ. ಹೊಸ ಉದಯೋನ್ಮುಖ ತಂತ್ರಜ್ಞಾನಗಳಿಗೆ ಹೊಂದಿಕೊಂಡು ವಿಕಸಿತ ಭಾರತ್ ಕಡೆ ಹೆಜ್ಜೆ ಹಾಕಲು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಮಹಾನಿರ್ದೇಶಕ ಡಾ. ಎನ್. ಕಲೈಸೆಲ್ವಿ ಹೇಳಿದರು.
ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) 7ನೇ ಘಟಿಕೋತ್ಸವದ ಭಾಷಣ ಮಾಡಿದ ಅವರು, ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ನಿತ್ಯವೂ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನದ ಬಗ್ಗೆ ಮಾಹಿತಿ ಹೊಂದಲು ಸಲಹೆ ನೀಡಿದರು.ಐಐಐಟಿ ಅಂತಹ ರಾಷ್ಟ್ರೀಯ ಸಂಸ್ಥೆಯ ಪದವೀಧರರು ಪೋಷಕರು, ಶಿಕ್ಷಕರು ಮತ್ತು ಸಮಾಜದ ಹೂಡಿಕೆಗಳ ಬಗ್ಗೆ ಅರಿವು ಹೊಂದಬೇಕು. ಸಮಾಜದ ಋಣ ತೀರಿಸಬೇಕು. ಭವಿಷ್ಯದಲ್ಲಿ ಸತ್ಪ್ರಜೆಗಳಾಗಿ ಬಾಳುವಂತೆ ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡ ಐಐಐಟಿ ಅಧ್ಯಕ್ಷ ಡಾ. ಶ್ರೀಧರ ವೆಂಬು ಮಾತನಾಡಿ, ಕೃತಕ ಬುದ್ಧಿಮತ್ತೆಯಿಂದ ಮಾಹಿತಿ ತಂತ್ರಜ್ಞಾನ ಮತ್ತು ಎಲ್ಲ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆ ಕಂಡಿದೆ. ಎಲ್ಲ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಅಷ್ಟೊಂದು ಹಾಸುಹೊಕ್ಕಾಗಿದೆ ಎಂದರು.ಐಐಐಟಿ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನ ಹಾಗೂ ಭವಿಷ್ಯದ ಸವಾಲುಗಳ ಬಗ್ಗೆಯೂ ಬಹಳಷ್ಟು ಜಾಗರೂಕತೆಯಿಂದ ಇರಬೇಕು. ಏಕೆಂದರೆ ಐಐಐಟಿ ವೃತ್ತಿಪರರು ಹೊಸ ಉದ್ಯೋಗಗಳು ಶೋಧಿಸುವ ಅನಿವಾರ್ಯತೆ ಬಗ್ಗೆ ಒತ್ತಿ ಹೇಳಿದರು.
ಜೀವನದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ, ಸ್ವಯಂ ಅನ್ವೇಷಣೆ ಹಾಗೂ ಸ್ವಾಭಿಮಾನ ಮುಖ್ಯ. ಪ್ರಾಮಾಣಿಕತೆ ಹಾಗೂ ಬದ್ಧತೆ ಇದ್ದರೆ ಮಾತ್ರವೇ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ ಎಂದರು.9.73 ಸಿಪಿಐ(Cumulative Performance Index) ಗಳಿಸಿದ ಅಮೃತ್ ಆನಂದ್ ಭಾರತದ ರಾಷ್ಟ್ರಪತಿ ಚಿನ್ನ ಹಾಗೂ ಇನ್ಸ್ಟಿಟ್ಯೂಟ್ ಚಿನ್ನದ ಪದಕ, 9.61 ಸಿಪಿಐ ಗಳಿಸಿದ ಪ್ರೇರಣಾ ಭಟ್ ಮತ್ತು 9.58 ಸಿಪಿಐ ಗಳಿಸಿದ ಕಾರ್ತಿಕ್ ಅವಿನಾಶ ಇನ್ಸ್ಟಿಟ್ಯೂಟ್ ಚಿನ್ನದ ಪದಕಕ್ಕೆ ಭಾಜನರಾದರು.
ಘಟಿಕೋತ್ಸವದಲ್ಲಿ 132 ಕಂಪ್ಯೂಟರ್ ಸೈನ್ಸ್, 70 ಡೇಟಾ ಸೈನ್ಸ್ ಹಾಗೂ 55 ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜನಿಯರಿಂಗ್ 55 ಸೇರಿ 257 ವಿದ್ಯಾರ್ಥಿಗಳಿಗೆ ಪದವಿ ಹಾಗೂ ಒಂದು ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು.ಧಾರವಾಡ ಐಐಐಟಿ ನಿರ್ದೇಶಕ ಡಾ. ಮಹಾದೇವ ಪ್ರಸನ್ನ, ಡೀನ್ ಡಾ. ಕೆ. ಗೋಪಿನಾಥ, ಕುಲಸಚಿವ ಡಾ. ಮುರುಗನಾಥಂ ಪೊನ್ನುಸ್ವಾಮಿ, ಡಾ. ಹೆಗಡೆ ಸೇರಿದಂತೆ ಹಲವರಿದ್ದರು.