ಸಾರಾಂಶ
ಕುದೂರು: ತೀವ್ರ ಕುತೂಹಲ ಕೆರಳಸಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ಏಕದಿನ ವಿಶ್ವಕಪ್ 2023 ಪಂದ್ಯದಲ್ಲಿ ಭಾರತದ ಸೋಲು ಕ್ರಿಕೆಟಿಗ ಕೆ.ಎಲ್ .ರಾಹುಲ್ ತವರೂರಾದ ಮಾಗಡಿ ತಾಲೂಕು ಕುದೂರು ಹೋಬಳಿಯ ಕಣನೂರು ಗ್ರಾಮದಲ್ಲಿ ನೀರವ ಮೌನ ಆವರಿಸುವಂತೆ ಮಾಡಿತು.
ನಮ್ಮ ತವರಿನ ಕೂಸು ಗೆದ್ದು ಬರಬೇಕು. ದೇಶದ ಹೆಮ್ಮೆ ನಮ್ಮ ರಾಹುಲನ ಆಟದಿಂದ ಭಾರತ ತಂಡ ಗೆದ್ದು ಬೀಗಬೇಕು ಎಂದು ಬೆಳಗಿನಿಂದ ಎಲ್ಲಾ ದೇವಾಲಯಗಳಲ್ಲಿ ಪೂಜೆ ಮಾಡಿ ಗೆಲುವಿಗಾಗಿ ಕೆ.ಎಲ್.ರಾಹುಲ್ ರವರ ಹುಟ್ಟೂರು ಕಣನೂರು ಗ್ರಾಮದ ಜನ ವಿಶೇಷ ಪೂಜೆ ಮಾಡಿಸಿದರು.ಐಪಿಎಲ್ ವಿಶ್ವಕಪ್ ಕ್ರಿಕೆಕಟ್ ಟೂರ್ನಿಯಲ್ಲಿ ಭಾರತ ಫೈನಲ್ ತಲುಪಿ ಆಸ್ಟ್ರೇಲಿಯಾ ವಿರುದ್ದ ಸೆಣೆಸಾಟದಲ್ಲಿ ಭಾರತ ಗೆಲ್ಲಬೇಕು. ನಮ್ಮೂರಿನ ಹುಡುಗ ಕೆ.ಎಲ್.ರಾಹುಲ್ ಹೆಚ್ಚು ರನ್ ಸಿಡಿಸಿ ನಮಗೆ ನಿಜವಾದ ದೀಪಾವಳಿ ಹಬ್ಬ ಆಚರಿಸಿದಂತಹ ಆನಂದ ತರಬೇಕೆಂದು ಕಣನೂರು ಗ್ರಾಮದ ಜನರು ವಿಶೇಷವಾಗಿ ದೇವಾಲಯಗಳಲ್ಲಿ ಪೂಜೆ ಅಭಿಷೇಕ ಸಲ್ಲಿಸಿದ್ದರು.
ಪಂದ್ಯ ಪ್ರಾರಂಭವಾದ ನಂತರ ಕೆ.ಎಲ್ .ರಾಹುಲ್ ಭಾರತದ ತಂಡದಲ್ಲಿ 66 ರನ್ ಗಳಿಸಿ ಉತ್ತಮ ಆಟ ಪ್ರದರ್ಶಿಸಿದರು. ಆಗ ಊರಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಆದರೆ ಆ ಸಂತೋಷ ಹೆಚ್ಚು ಸಮಯ ಉಳಿಯಲಿಲ್ಲ. ಸೋಲಿನ ಸುಳಿವು ಸಿಕ್ಕ ಕೂಡಲೇ ಗ್ರಾಮಸ್ಥರು ಬೇಸರಗೊಂಡರು. ಮನೆಯ ಟಿವಿ ಮುಂದೆ ಕೂತು ಮುದ್ದೆ ಮುರಿಯುತ್ತಿದ್ದ ಜನರಿಗೆ ಸೋಲು ಎಂಬ ಘೋಷಣೆ ಬೇಸರ ತರಿಸಿತು. ಇದರ ಕುರಿತು ಬೆಳಗಿನಿಂದ ಲವಲವಿಕೆಯಿಂದ ಇದ್ದ ಕಣನೂರು ಗ್ರಾಮ ಅಕ್ಷರಶಃ ಮೌನಧರಿಸಿತು. ಕೆಲವರಂತೂ ಕಣ್ಣೀರು ಸುರಿಸಿದರು.ಇನ್ನು ಕಣನೂರು ಗ್ರಾಮದಲ್ಲಿರುವ ಕೆ.ಎಲ್ .ರಾಹುಲ್ ಚಿಕ್ಕಪ್ಪ ಕೆ.ಎನ್ .ಜೈಶಂಕರ್ ಪ್ರತಿಕ್ರಿಯಿಸಿ, ರಾಹುಲ್ ಅತ್ಯಂತ ಶ್ರದ್ದೆಯ ಹುಡುಗ. ಈ ಬಾರಿ ವಿಶ್ವಕಪ್ ತರುತ್ತಾರೆ ಎಂಬ ಬಲವಾದ ವಿಶ್ವಾಸ ಇತ್ತು. ರಾಹುಲ್ ಆಟ ಮನಸಿಗೆ ಖುಷಿ ತಂದರೂ ಭಾರತ ತಂಡದ ಸೋಲು ಬೇಸರ ತರಿಸಿದೆ. ಗೆಲುವಿಗೆ ಒಂದೇ ಒಂದು ಮೆಟ್ಟಿಲು ಇದ್ದಾಗ ಅತ್ಯಂತ ಎಚ್ಚರದಿಂದ ಆಟ ಆಡಬೇಕಿತ್ತು ಎಂದು ಬೇಸರದ ನುಡಿಗಳನ್ನಾಡಿದರು.19ಕೆಆರ್ ಎಂಎನ್ 10.ಜೆಪಿಜಿ
ಕ್ರಿಕೆಟಿಗ ಕೆ.ಎಲ್ .ರಾಹುಲ್