ಕನ್ನಡಪ್ರಭ ವಾರ್ತೆ ಕಾಗವಾಡ

ಗುರುಶಿಷ್ಯರ ಸಂಬಂಧವು ಭಾರತೀಯ ಸಂಸ್ಕೃತಿಯಲ್ಲಿ ನಂಬಿಕೆ, ಗೌರವ ಮತ್ತು ಶ್ರದ್ಧೆಯ ಮೇಲೆ ಆಧಾರಿತವಾದ ಅತ್ಯಂತ ಪವಿತ್ರ ಮತ್ತು ಗಾಢವಾದ ಬಾಂಧವ್ಯವಾಗಿದೆ ಎಂದು ಶಿವಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಕಾರ್ಯದರ್ಶಿ ಪ್ರೊ.ಬಿ.ಎ.ಪಾಟೀಲ ಹೇಳಿದರು.

ಸ್ಥಳೀಯ ಶಿವಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಪ್ರಾಯೋಜಿತ ಕನ್ನಡ ವಿಭಾಗ ಮತ್ತು ಇಂಡಿಯನ್‌ ಕೌನ್ಸಿಲ್‌ ಆಫ್ ಫಿಲಾಸಾಫಿಕಲ್ ರಿಸರ್ಚ್‌ ಭಾರತ ಸರಕಾರ ನವದೆಹಲಿ ಇವುಗಳ ಸಂಯುಕ್ತಾಶ್ರಯದಲ್ಲಿ ಗುರುಕುಲ ಸಂಪ್ರದಾಯಕ್ಕೆಅನುಗುಣವಾಗಿ ಶಿಕ್ಷಣದ ತತ್ವಶಾಸ್ತ್ರ ಎಂಬ ವಿಷಯದ ಕುರಿತು ಆಯೋಜಿಸಿದ ನಾಲ್ಕು ದಿನಗಳ ಸರಣಿ ಉಪನ್ಯಾಸ ಮಾಲಿಕೆಯ ಮೊದಲ ದಿನದ ಉಪನ್ಯಾಸದಲ್ಲಿ ಶಿಕ್ಷಕ-ವಿದ್ಯಾರ್ಥಿ ಸಂಬಂಧ ಕುರಿತು ಅವರು ಮಾತನಾಡಿದರು. ಶಿಕ್ಷಕರಿಗೆ ಸಿಕ್ಕಂತಹ ಗೌರವ ಇನ್ನಾರಿಗೂ ಸಿಗಲು ಸಾಧ್ಯವಿಲ್ಲ. ಭಾರತದ ಭವಿಷ್ಯವು ವರ್ಗ ಕೋಣೆಯಲ್ಲಿ ನಿರ್ಮಾಣವಾಗುತ್ತದೆ. ಶಿಕ್ಷಕ-ವಿದ್ಯಾರ್ಥಿ ಸಂಬಂಧ ಅನ್ಯೋನ್ಯವಾಗಿದ್ದಾಗ ಮಾತ್ರ ಕಲಿಕೆ ಪರಿಪೂರ್ಣವಾಗಲು ಸಾಧ್ಯ ಎಂಬ ಅಭಿಮತವನ್ನು ವ್ಯಕ್ತಪಡಿಸಿದರು.

ಉಪನ್ಯಾಸ ಸರಣಿಯನ್ನು ಉದ್ಘಾಟಿಸಿ ಮಾತನಾಡಿದ ಮಹಾವಿದ್ಯಾಲಯದ ಆಡಳಿತಾಧಿಕಾರಿ ಮೇಜರ್.ವಿ.ಎಸ್.ತುಗಶೆಟ್ಟಿ, ಗುರುವಾದವನು ಶಿಷ್ಯನಿಗೆ ಕೇವಲ ವಿದ್ಯೆ, ಯೋಗವನ್ನು ಕಲಿಸುವುದಲ್ಲದೆ, ಅವರ ಆಂತರಿಕ ಶಕ್ತಿಯನ್ನು ಜಾಗೃತಗೊಳಿಸಿ ಸ್ವಯಂ ಸಾಕ್ಷಾತ್ಕಾರಕ್ಕೆ ದಾರಿ ತೋರುತ್ತಾನೆ. ಈ ಸಂಬಂಧವು ಕೇವಲ ಬೋಧನೆಗೆ ಸೀಮಿತವಾಗದೆ, ಅಧ್ಯಾತ್ಮಿಕ ಶಕ್ತಿಯ ಪ್ರಸರಣೆಯಾಗಿರುತ್ತದೆ. ಶಿಷ್ಯನು ಗುರುವಿಗೆ ಭಕ್ತಿ ಮತ್ತು ಸೇವೆ ಸಲ್ಲಿಸುತ್ತಾನೆ. ಗುರುವು ಪ್ರತಿಯಾಗಿ ತನ್ನೆಲ್ಲ ಜ್ಞಾನವನ್ನು ಧಾರೆ ಎರೆಯುತ್ತಾನೆ. ಇಂತಹ ಉಪನ್ಯಾಸ ಮಾಲಿಕೆಯನ್ನು ಕನ್ನಡ ವಿಭಾಗ ಹಮ್ಮಿಕೊಂಡಿದ್ದು ಅತ್ಯಂತ ಔಚಿತ್ಯಪೂರ್ಣವಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಎಸ್.ಪಿ.ತಳವಾರ, ಗುರುಕುಲ ಪರಂಪರೆಯು ಪ್ರಾಚೀನ ಭಾರತದ ಶಿಕ್ಷಣ ವ್ಯವಸ್ಥೆಯಾಗಿದ್ದು, ಇದು ಜ್ಞಾನ, ಸಂಸ್ಕಾರ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಮಹತ್ವ ನೀಡುತ್ತದೆ. ಈ ಶಿಕ್ಷಣವು ಕೇವಲ ಬೌದ್ಧಿಕ ಬೆಳವಣಿಗೆಯಲ್ಲದೇ, ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸಮಗ್ರತೆಯನ್ನು ಗುರಿಯಾಗಿಸಿಕೊಂಡಿದೆ. ಮಹಾವಿದ್ಯಾಲಯದಲ್ಲಿ ಗುರುಕುಲ ಪದ್ಧತಿಯ ಶಿಕ್ಷಣ ವ್ಯವಸ್ಥೆ ಕುರಿತು ಉಪನ್ಯಾಸ ಮಾಲಿಕೆಯನ್ನು ಆಯೋಜಿಸಿದ್ದು ಉತ್ತಮ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರಾಸ್ತಾವಿಕ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎ.ಎಂ.ಜಕ್ಕಣ್ಣವರ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಗುರುಕುಲ ಪದ್ಧತಿಯು ವಿದ್ಯಾರ್ಥಿಗಳಲ್ಲಿನ ಮಾನಸಿಕ ಶಾಂತಿ, ಆತ್ಮವಿಶ್ವಾಸ ಮತ್ತು ನೈತಿಕ ಜವಾಬ್ದಾರಿಯನ್ನು ಬೆಳೆಸಲು ಅಗತ್ಯವಾಗಿದೆ. ಆಧುನಿಕ ಶಿಕ್ಷಣದೊಂದಿಗೆ ಗುರುಕುಲದ ಮೌಲ್ಯಗಳನ್ನು ಯೋಗ, ಶಿಸ್ತು, ಸಂಸ್ಕಾರ ಮುಂತಾದವುಗಳನ್ನು ಸಂಯೋಜಿಸುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಭಾರತ ಸರಕಾರದ ಭಾರತೀಯ ದಾರ್ಶನಿಕ ಅನುಸಂಧಾನ ಪರಿಷತ್ತಿನ ಜೊತೆಗೆ ಸಂಯೋಜಿಸಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಉಪನ್ಯಾಸ ಮಾಲಿಕೆಯನ್ನುಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅನನ್ಯಾ ಕುಲಕರ್ಣಿ ವಚನ ಪ್ರಾರ್ಥಿಸಿದರು. ಪ್ರೊ.ಎ.ಎ.ಪಾಟೀಲ ಸ್ವಾಗತಿಸಿದರು. ಪ್ರೊ.ಎಸ್.ಎ.ಅವಟಿ ವಂದಿಸಿದರು. ಪ್ರೊ.ಎಸ್.ಎಸ್. ಫಡತರೆ ನಿರೂಪಿಸಿದರು. ಬೋಧಕ, ಬೋಧಕೇತರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.