ಕನ್ನಡಪ್ರಭ ವಾರ್ತೆ ಜಮಖಂಡಿ

ಜಾತಿ, ಮತ ಎನ್ನದೆ ಎಲ್ಲರೂ ಸರಿಸಮಾನವಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವಂತೆ ಸಂವಿಧಾನ ರಚಿಸಿದ ಕೀರ್ತಿ ಡಾ.ಬಿ.ಆರ್. ಅಂಬೇಡ್ಕರ್‌ ಅವರಿಗೆ ಸಲ್ಲುತ್ತದೆ. ಸ್ವಚ್ಛ, ಶಸಕ್ತ, ಸುಭದ್ರ ಭಾರತವನ್ನಾಗಿ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಶ್ರಮ ಅವಿಸ್ಮರಣೀಯ ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತ ಆಶ್ರಯದಲ್ಲಿ ಶುಕ್ರವಾರ ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

140 ಕೋಟಿ ಜನಸಂಖ್ಯೆ ಹೊಂದಿದ್ದರೂ ಎಲ್ಲರೂ ಸುಖ ಶಾಂತಿಯಿಂದ ಬದುಕು ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಪರಸ್ಪರ ಪ್ರೀತಿ ವಿಶ್ವಾಸದಿಂದ ಇದ್ದು ಆರೋಗ್ಯಪೂರ್ಣ ರಾಷ್ಟ್ರ ನಿರ್ಮಾಣವಾಗಬೇಕಾಗಿದೆ ಎಂದರು.ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ದ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತ ಸರ್ವಜನಾಂಗದ ಶಾಂತಿಯ ತೋಟವಿದ್ದಂತೆ ಎಲ್ಲ ಧರ್ಮೀಯರನ್ನು ಹೊಂದಿ ಸುಸಂಸ್ಕೃತ ಏಕೈಕ ದೇಶ ಭಾರತವಾಗಿದೆ ಎಂದರು.

ಸರ್ವೋಚ್ಛ ಭಾರತ ಸರ್ವತೋಮುಖ ಅಭಿವೃದ್ಧಿ ಕುರಿತು ಬಿಎಲ್‌ಡಿಇ ಕಾಲೇಜಿನ ವಿಧ್ಯಾರ್ಥಿ ಪ್ರಲ್ಹಾದ ಬೇವನೂರ ಹಾಗೂ ಹುನ್ನೂರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿಧ್ಯಾರ್ಥಿನಿ ಶಶಿಕಲಾ ಅತ್ತೆಪ್ಪನವರ ಮಾತನಾಡಿದರು. ಪೊಲೀಸ್, ಗೃಹರಕ್ಷಕ ದಳ, ಎನ್.ಸಿ.ಸಿ, ಸ್ಕೌಟ್ಸ್ -ಗೈಡ್ಸ್, ಸೇವಾದಳ ಸೇರಿದಂತೆ 19ಕ್ಕೂ ಹೆಚ್ಚು ತಂಡಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದವು. ಜಿಜಿ, ಪಿಬಿ, ಸ್ವಾಮಿ ವಿವೇಕಾನದ, ವಿಶ್ವೇಶ್ವರಯ್ಯಾ ಪ್ರೌಢ ಶಾಲೆಯ ಹಾಗೂ ಕೆಜಿಬಿವಿ ಶಾಲಾ ಮಕ್ಕಳು ದೇಶ ಭಕ್ತಿ ಗೀತೆಗಳ ನೃತ್ಯ ಪ್ರದರ್ಶಿಸಿದರು.


ಸಾಹಿತ್ಯ, ಕೃಷಿ, ಪತ್ರಿಕೋದ್ಯಮ, ಸಮಾಜ ಸೇವೆ, ಕಂದಾಯ ಇಲಾಖೆ, ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಹಾಗೂ ಕೆಎಸ್‌ಆರ್‌ಟಿಸಿ ಅಪಘಾತ ರಹಿತ ಚಾಲಕರಿಗೆ ಗೌರವಿಸಲಾಯಿತು.

ವೇದಿಕೆಯಲ್ಲಿ ಡಿವೈಎಸ್‌ಪಿ ಶಾಂತವೀರ ಈ., ಭೂಸ್ವಾಧೀನ ವಿಶೇಷ ಜಿಲ್ಲಾಧಿಕಾರಿ ಸಾಜೀದ್‌ ಮುಲ್ಲಾ, ತಾಪಂ ಇಒ ಸಂಜೀವ ಜಿನ್ನೂರ, ಸಿಪಿಐ ಮಲ್ಲಪ್ಪ ಮಡ್ಡಿ, ಪೌರಾಯುಕ್ತ ಲಕ್ಷ್ಮೀ ಅಷ್ಟಗಿ, ಉಪ ಖಜಾನಾಧಿಕಾರಿ ಬಿರಾದಾರ, ನಗರಸಭೆ ಸದಸ್ಯರು ಇದ್ದರು. ಸರ್ಕಾರಿ ಬಾಲಕೀಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ರೈತ ಗೀತೆ ಹಾಡಿದರು. ತಹಸೀಲ್ದಾರ್‌ ಸದಾಶಿವ ಮಕ್ಕೋಜಿ ಸ್ವಾಗತಿಸಿದರು. ಡಾ. ಎನ್.ವಿ.ಅಸ್ಕಿ ನಿರೂಪಿಸಿದರು. ಬಿಇಒ ಅಶೋಕ ಬಸನ್ನವರ ವಂದಿಸಿದರು.