ಗದಗ: ಭಾರತೀಯ ಹಬ್ಬಗಳು, ಆಚರಣೆಗಳು ನೆಲಮೂಲ ಸಂಸ್ಕೃತಿಗಳನ್ನು ಪಸರಿಸುತ್ತಾ ಸಾಮರಸ್ಯದೆಡೆಗೆ ನಮ್ಮನ್ನು ಕೊಂಡೊಯ್ಯುತ್ತವೆ. ಮನುಷ್ಯನ ಬದುಕಿಗೆ ಮಣ್ಣೇ ಮೂಲಾಧಾರವಾಗಿರುವದರಿಂದ ಮಣ್ಣಿನಿಂದ ವಿವಿಧ ಮೂರ್ತಿಗಳನ್ನು ನಿರ್ಮಿಸುವ ಮೂಲಕ ಮಣ್ಣಿನ ಆರಾಧನೆಯನ್ನು ಮಾಡಲಾಗುತ್ತಿದೆ ಎಂದು ಅಧ್ಯಾತ್ಮ ವಿದ್ಯಾಶ್ರಮದ ಶರಣೆ ಮೈತ್ರಾದೇವಿ ತಿಳಿಸಿದರು.ನಗರದಲ್ಲಿ ನವನಗರ ಕ್ಷೇಮಾಭಿವೃದ್ಧಿ ಸಂಘದಿಂದ ಸೀಗೆ ಹುಣ್ಣಿಮೆ ಅಂಗವಾಗಿ ನಡೆದ ಬೆಳದಿಂಗಳ ಭೋಜನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಭೂಮಿತಾಯಿಯನ್ನು ಆರಾಧಿಸುವ ಮೂಲಕ ಋಣವನ್ನು ತೀರಿಸುವ ಆಶಯದೊಂದಿಗೆ ಈ ಹಬ್ಬವನ್ನು ಸಡಗರದಿಂದ ಆಚರಿಸುತ್ತಾ ಬಂದಿದ್ದೇವೆ. ಭಾರತೀಯ ಹಬ್ಬ ಹರಿದಿನಗಳು ಸಾಮರಸ್ಯದ ಸಂಕೇತಗಳಾಗಿವೆ ಎಂದರು.ಸಾಹಿತಿ ಕ್ಷಮಾ ವಸ್ತ್ರದ ಮಾತನಾಡಿ, ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಮಹತ್ತರ ಜವಾಬ್ದಾರಿ ಹೆಣ್ಣುಮಕ್ಕಳದ್ದಾಗಿದೆ. ಬಹುತೇಕ ಹಬ್ಬಗಳು ಸ್ತ್ರೀಶಕ್ತಿಯ ಆರಾಧನೆಯಾಗಿದೆ. ಸಂತೋಷ, ಸಡಗರ, ಸಾಮರಸ್ಯಗಳನ್ನು ಇಮ್ಮಡಿಗೊಳಿಸುವದು ಹಬ್ಬದ ಮೂಲ ಉದ್ದೇಶಗಳಾಗಿವೆ. ಈ ಹಿನ್ನೆಲೆ ಹಿರಿಯರು ವೈಜ್ಞಾನಿಕವಾಗಿ ಆಚರಣೆಗಳನ್ನು ಜಾರಿಗೆ ತರುವ ಮೂಲಕ ಸಮಾಜದಲ್ಲಿ ಐಕ್ಯತೆಯನ್ನು ಮೂಡಿಸುವ ಕಾರ್ಯವನ್ನು ಮಾಡಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ನಗರಸಭೆ ವಿರೋಧ ಪಕ್ಷದ ನಾಯಕ ಎಲ್.ಡಿ. ಚಂದಾವರಿ ಮಾತನಾಡಿ, ನಗರ ಪ್ರದೇಶಗಳು ನಮ್ಮ ಗ್ರಾಮೀಣ ಸೊಗಡಿನಿಂದ ದೂರ ಸರಿದಿವೆ. ಆದರೆ, ರಾಜೀವಗಾಂಧಿ ನಗರದಲ್ಲಿರುವ ನವನಗರ ಬಡಾವಣೆಯಲ್ಲಿ ಇಲ್ಲಿಯ ನಾಗರಿಕರು ತಮ್ಮ ಮೂಲ ಸಂಸ್ಕೃತಿಯನ್ನು ಮರೆಯದೇ ಪ್ರತಿವರ್ಷ ವಿವಿಧ ಆಚರಣೆಗಳನ್ನು ಮುಂದುವರಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ ಎಂದರು.
ಈ ವೇಳೆ ಎಲ್.ಡಿ. ಚಂದಾವರಿ, ನಗರಸಭೆ ಎಂಜಿನಿಯರ್ ಬಂಡಿವಡ್ಡರ, ಕವಿವಿ ಸಿಂಡಿಕೇಟ್ ಸದಸ್ಯ ಬಿ.ಬಿ. ಹೊಳಗುಂದಿ, ಜಗದೀಶ ಪೂಜಾರ, ವಿಶ್ವನಾಥ ಕಮ್ಮಾರ, ಲಾವಣ್ಯ ಬ್ಯಾಗೋಟಿ ಅವರನ್ನು ಸನ್ಮಾನಿಸಲಾಯಿತು.ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಪಿ.ಡಿ. ಕನ್ಯಾಳ, ಉಮೇಶ ದಲಭಂಜನ, ಪಿ.ಬಿ. ಹೊಂಬಾಳಿಮಠ, ವೀಣಾ ಸೋನಾರ, ಮಲ್ಲಿಕಾರ್ಜುನ ಚಳಗೇರಿ, ಕಿರಣ ಬಸರಿ, ಗಂಗಾ ಬೆಲೇರಿ, ವಿಜಯಲಕ್ಷ್ಮೀ ಮಾಂಡ್ರೆ, ಪರಿಮಳಾ ಸಾಸ್ವಿಹಳ್ಳಿ, ಮಾಲಾ ಶಿರೋಳ, ರಾಜಶೇಖರ ಕರಡಿ, ಚನ್ನಬಸಪ್ಪ ಅಕ್ಕಿ, ಮಲ್ಲಿಕಾರ್ಜುನ, ಸಂತೋಜಿ, ಸಯ್ಯದ ಹಕ್, ಪ್ರದೀಪ ಮಾಂಡ್ರೆ, ಬಸಣ್ಣ ಸವಡಿ, ಮೀನಾಕ್ಷಿ ಮುಂಡರಗಿ ಸೇರಿದಂತೆ ಇತರರು ಇದ್ದರು. ಡಿ.ಎಸ್. ತಳವಾರ ನಿರೂಪಿಸಿ, ಸ್ವಾಗತಿಸಿದರು. ಎಂ.ಪಿ. ಕಲ್ಮಠ ವಂದಿಸಿದರು. ನಂತರ ಬೆಳದಿಂಗಳ ಊಟ ಜರುಗಿತು.ಭಾರತೀಯ ಹಬ್ಬ ಹರಿದಿನಗಳು ಸಾಮರಸ್ಯದ ಸಂಕೇತ: ಮೈತ್ರಾದೇವಿ
ಭೂಮಿತಾಯಿಯನ್ನು ಆರಾಧಿಸುವ ಮೂಲಕ ಋಣವನ್ನು ತೀರಿಸುವ ಆಶಯದೊಂದಿಗೆ ಈ ಹಬ್ಬವನ್ನು ಸಡಗರದಿಂದ ಆಚರಿಸುತ್ತಾ ಬಂದಿದ್ದೇವೆ. ಭಾರತೀಯ ಹಬ್ಬ ಹರಿದಿನಗಳು ಸಾಮರಸ್ಯದ ಸಂಕೇತಗಳಾಗಿವೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.