ಕನ್ನಡಪ್ರಭ ವಾರ್ತೆ ಬೆಂಗಳೂರು

ಭ್ರಷ್ಟಾಚಾರ ಹೆಮ್ಮರವಾಗಲು ಭಾರತೀಯರೆಲ್ಲರೂ ಕಾರಣ ಎಂದು ರಾಜ್ಯದ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ವೀರಪ್ಪ ಅಭಿಪ್ರಾಯಪಟ್ಟರು.

ಮಂಗಳವಾರ ಕಬ್ಬನ್ ಪಾರ್ಕ್ ನ ಎನ್ ಜಿಒ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಾನವಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ದೆಹಲಿ ಸಹಯೋಗದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಕಾನೂನು ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸಂವಿಧಾನದಲ್ಲಿರುವ ಮೂರು ಅಂಗಗಳಾದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ಜೊತೆ ನಾವೇ ಒಪ್ಪಿಕೊಂಡಿರುವ ನಾಲ್ಕನೇ ಅಂಗ ಪತ್ರಿಕಾರಂಗ ಇವೆ. ಐದನೇ ಅಂಗವೂ ಇದೇ ಅದುವೇ ಭ್ರಷ್ಟಾಚಾರ ರಂಗ, ಇದು 79 ವರ್ಷಗಳಿಂದಲೂ ನಮ್ಮ ಜೊತೆಯಲ್ಲಿಯೇ ಬಂದಿದೆ. ಭ್ರಷ್ಚಾಚಾರ ನಮ್ಮನ್ನು ಬಿಡುತ್ತಿಲ್ಲ. ಸ್ವತಂತ್ರ ಪೂರ್ವದಲ್ಲೂ ಇತ್ತು. ಸ್ವಾತಂತ್ರ್ಯ ಬಂದಮೇಲೂ ಇದೆ. ಭ್ರಷ್ಟಾಚಾರ ಹೆಮ್ಮರವಾಗಲು ಇಡೀ ದೇಶದ 148 ಕೋಟಿ ಜನರೂ ಕಾರಣ. ನನ್ನನ್ನೂ ಸೇರಿ ಕಾರಣ ಎಂದರು.

ಎನ್ ಪೋಲ್ಡ್ ಹೆಲ್ತ್ ಟ್ರಸ್ಟ್ ಬೆಂಬಲ ಮತ್ತು ಪುನರ್ವಸತಿ ನಿರ್ದೇಶಕಿ ಕುಶಿ ಕಶಾಲಪ್ಪ ಪೋಕ್ಸೋ ಮಹಿಳೆ, ಮಕ್ಕಳಿಗೆ ಸಂಬಂಧಿಸಿದ ಕಾನೂನು ಮತ್ತು ಕಾಯಿದೆಗಳ ಕುರಿತು ಮಾಹಿತಿ ನೀಡಿದರು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾಯಮೂರ್ತಿ ಎಚ್.ಶಶಿಧರ ಶೆಟ್ಟಿ ಅವರು ಕಾನೂನುಸೇವೆಗಳ ಪ್ರಾಧಿಕಾರದ ಉದ್ದೇಶ ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಎನ್.ಸಿ.ಬಿ ವಲಯ ನಿರ್ದೇಶಕ ಸಚಿನ್ ಘೋರ್ಪಡೆ ಮಾದಕ ದ್ರವ್ಯ ಸೇವನೆಗಳಿಂದಾಗುವ ದುಷ್ಪರಿಣಾಮಗಳು ಹಾಗೂ ಕಾನೂನು ಮತ್ತು ಕಾಯಿದೆಗಳ ಕುರಿತು ಮಾಹಿತಿ ನೀಡಿದರು. ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ರಾವ್ ನಲವಡೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ, ಕಿರಿಯ ವಕೀಲರು ಭಾಗವಹಿಸಿದ್ದರು.