ಸಂವಿಧಾನ ಕಗ್ಗೊಲೆ ಮಾಡಿದ ಅಪಕೀರ್ತಿ ಇಂದಿರಾಗೆ ಸಲ್ಲುತ್ತದೆ: ಶಾಸಕ ಸಿ.ಸಿ. ಪಾಟೀಲ

| Published : Jun 27 2025, 12:48 AM IST

ಸಂವಿಧಾನ ಕಗ್ಗೊಲೆ ಮಾಡಿದ ಅಪಕೀರ್ತಿ ಇಂದಿರಾಗೆ ಸಲ್ಲುತ್ತದೆ: ಶಾಸಕ ಸಿ.ಸಿ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ಹಣ ಮತ್ತು ಪ್ರಭಾವದ ಮೇಲೆ ಗೆದ್ದಿದ್ದು ಅಲಹಾಬಾದ ಉಚ್ಛ ನ್ಯಾಯಾಲಯದಲ್ಲಿ ಸಾಬೀತಾಗಿ ಅವರ ಸಂಸತ್ಸದಸ್ಯ ಸ್ಥಾನ ಅನೂರ್ಜಿತಗೊಳಿಸಿದ ಹಿನ್ನೆಲೆಯಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಸರ್ವಾಧಿಕಾರಿಯಾಗಿ ವರ್ತಿಸಿ ಸಂವಿಧಾನದ 38ನೇ ವಿಧಿಗೆ ತಿದ್ದುಪಡಿ ತಂದು ದೇಶದ ಮೇಲೆ ಕರಾಳ ತುರ್ತು ಪರಿಸ್ಥಿತಿ ಹೇರಿ, ಸಂವಿಧಾನ ಕಗ್ಗೊಲೆ ಮಾಡಿದ ಅಪಕೀರ್ತಿಗೆ ಭಾಜನರಾಗಿದ್ದರು ಎಂದು ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಗದಗ: ಲೋಕಸಭೆ ಚುನಾವಣೆಯಲ್ಲಿ ಹಣ ಮತ್ತು ಪ್ರಭಾವದ ಮೇಲೆ ಗೆದ್ದಿದ್ದು ಅಲಹಾಬಾದ ಉಚ್ಛ ನ್ಯಾಯಾಲಯದಲ್ಲಿ ಸಾಬೀತಾಗಿ ಅವರ ಸಂಸತ ಸದಸ್ಯ ಸ್ಥಾನ ಅನೂರ್ಜಿತಗೊಳಿಸಿದ ಹಿನ್ನೆಲೆಯಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಸರ್ವಾಧಿಕಾರಿಯಾಗಿ ವರ್ತಿಸಿ ಸಂವಿಧಾನದ 38ನೇ ವಿಧಿಗೆ ತಿದ್ದುಪಡಿ ತಂದು ದೇಶದ ಮೇಲೆ ಕರಾಳ ತುರ್ತು ಪರಿಸ್ಥಿತಿ ಹೇರಿ, ಸಂವಿಧಾನ ಕಗ್ಗೊಲೆ ಮಾಡಿದ ಅಪಕೀರ್ತಿಗೆ ಭಾಜನರಾಗಿದ್ದರು ಎಂದು ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ಹೇಳಿದರು.ನಗರದ ಬಿ.ಎಫ್. ದಂಡಿನ ಕಾಲೇಜಿನ ಆಡಿಟೊರಿಯಂ ಸಭಾಂಗಣದಲ್ಲಿ ಗುರುವಾರ ತುರ್ತು ಪರಿಸ್ಥಿತಿಯ ಅಣಕು ಪ್ರದರ್ಶನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅಂಬೇಡ್ಕರ್ ಸಂವಿಧಾನ ತಿರುಚಿದ ಅಪಕೀರ್ತಿ ಇಂದಿರಾ ಗಾಂಧಿಗೆ ಸಲ್ಲುತ್ತದೆ. ಆ ಸಮಯದಲ್ಲಿ ಇಂದಿರಾ ಅನುಮತಿ ಇಲ್ಲದೇ ಪತ್ರಿಕಾ ಮಾಧ್ಯಮದವರು ಯಾವುದೇ ವರದಿ ಬಿತ್ತರಿಸುವಂತಿರಲಿಲ್ಲ. ವ್ಯಕ್ತಿಗಳ ಸ್ವಾತಂತ್ರ್ಯ ಕಸಿದುಕೊಂಡರು. ಇಂದಿರಾ ಗಾಂಧಿ ಮಗ ಸಂಜಯ್ ಗಾಂಧಿ ಯಾವುದೇ ಸಂವಿಧಾನಾತ್ಮಕ ಹುದ್ದೆಯಲ್ಲಿ ಇರದಿದ್ದರೂ ದರ್ಪ, ದಬ್ಬಾಳಿಕೆಯನ್ನು ಸರ್ಕಾರದ ಮೂಲಕ ಜನತೆ ಮೇಲೆ ಮಾಡುತ್ತಿದ್ದರು. ರಾಷ್ಟ್ರದ ವ್ಯವಸ್ಥೆ ಒಂದು ಕುಟುಂಬದ ಕೈಯಲ್ಲಿ ಇಡುವ ಹುನ್ನಾರವನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಮಾಡಿದ್ದರು ಎಂದು ಕಿಡಿ ಕಾರಿದರು.

ಇಂದು ಇಂದಿರಾ ಗಾಂಧಿ ಸೊಸೆ ಹಾಗೂ ಮೊಮ್ಮಕ್ಕಳು ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದು ದೇಶದ ತುಂಬೆಲ್ಲ ಓಡಾಡುತ್ತಿದ್ದಾರೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಎನ್ನುವಂತಿದೆ. ಕೇವಲ ರಾಜಕೀಯಕ್ಕಾಗಿ ಸಂವಿಧಾನದ ಪುಸ್ತಕ ಪ್ರದರ್ಶಿಸುತ್ತಾರೆ ವಿನಃ, ಅವರಿಗೆ ಸಂವಿಧಾನದ ಮೇಲೆ ಯಾವುದೇ ಗೌರವ ಇಲ್ಲ ಹಾಗೂ ಸಂವಿಧಾನದಲ್ಲಿ ಎಷ್ಟು ಪುಟಗಳಿವೆ ಎಂಬುದೇ ಅವರಿಗೆ ಗೊತ್ತಿಲ್ಲ ಎಂದು ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ, ಅಮರೇಶ, ಮುಖಂಡರಾದ ಅಡವಿಸ್ವಾಮಿ ಹಿರೇಮಠ, ಪುನೀತ್ ದಂಡಿನ್, ಲಿಂಗರಾಜಗೌಡ ಪಾಟೀಲ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ, ನಗರಸಭೆ ಸದಸ್ಯೆ ಶ್ವೇತಾ ದಂಡಿನ, ಅನಿಲ ಅಬ್ಬಿಗೇರಿ ಸೇರಿದಂತೆ ಅನೇಕರು ಇದ್ದರು.

ಸ್ವತಂತ್ರ ಭಾರತದ ಶಕ್ತಿ ಸಂವಿಧಾನ. ಪ್ರಜಾಪ್ರಭುತ್ವ ಅತೀ ಗೌರವದಿಂದ ನೋಡುವುದು ನ್ಯಾಯಾಂಗ. ಅಂಥ ನ್ಯಾಯಾಂಗದ ಘನತೆಗೆ ಧಕ್ಕೆ ತಂದ, ಸಂವಿಧಾನಕ್ಕೆ ಅಗೌರವ ತೋರಿದ ಭಾರತದ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್. ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ 1975 ಜೂ. 25ರಂದು ಆಂತರಿಕ ತುರ್ತು ಪರಿಸ್ಥಿತಿ ಘೋಷಿಸಿತು. ಈ ಘೋಷಣೆಯ ಹಿಂದೆ ಇದ್ದದ್ದು ಅವರ ಅಧಿಕಾರ ದಾಹ ಮತ್ತು ಸ್ವಾರ್ಥ. ಅಧಿಕಾರದ ಹಪಾಹಪಿಗಾಗಿ ದೇಶವನ್ನೇ ಬಲಿಕೊಟ್ಟರು ಎಂದು ಗದಗ ಬೆಟಗೇರಿ ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ಹೇಳಿದರು.

ಜೂನ್ 25, 1975 ರಂದು ನಡೆದ ಘಟನೆ ಭಾರತೀಯರ ಪಾಲಿಗೆ ಎಂದೂ ಮರೆಯಲಾಗದ ಕರಾಳ ದಿನವಾಗಿದೆ. ಸಂವಿಧಾನ ಕಗ್ಗೊಲೆ ಮಾಡಿ ಸರ್ವಾಧಿಕಾರಿ ಆಡಳಿತವನ್ನು ದಿ. ಇಂದಿರಾ ಗಾಂಧಿ ಮಾಡಿದ್ದರು. ತಮ್ಮ ಅಧಿಕಾರ ಉಳಿಸಿಕೊಳ್ಳಲು 38ನೇ ಕಾಯ್ದೆ ತಿದ್ದುಪಡಿ ಮಾಡಿ ರಾಷ್ಟ್ರಪತಿಗಳ ಅಂಕಿತ ಪಡೆದು ತುರ್ತು ಪರಿಸ್ಥಿತಿ ಹೇರುತ್ತಾರೆ. ವಿರೋಧ ಪಕ್ಷದ ನಾಯಕರನ್ನು ಜೈಲಿಗೆ ಅಟ್ಟುತ್ತಾರೆ. ತುರ್ತು ಪರಿಸ್ಥಿತಿಯನ್ನು ದೇಶದ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡದಂತೆ ಕಟ್ಟಾಜ್ಞೆ ಹೋರಡಿಸುತ್ತಾರೆ. ಪತ್ರಿಕೆಗಳ ಮೇಲೂ ನಿಯಂತ್ರಣ ಹೇರಿ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತದೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ ಹೇಳಿದರು.