ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ತಾಯಿಯ ಹಾಲು ಅಮೃತಕ್ಕೆ ಸಮಾನ, ಎಲ್ಲ ತಾಯಂದಿರು ಮಗುವಿಗೆ ಹಾಲುಣಿಸುವುದನ್ನು ನಿರ್ಲಕ್ಷಿಸಬಾರದು. ಗರ್ಭಿಣಿ, ಬಾಣಂತಿಯರು ಹಾಗೂ ಮಕ್ಕಳ ಆರೋಗ್ಯ ಸುಧಾರಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಮಕ್ಕಳ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ಹೇಳಿದರು.ನಗರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ತನ್ಯಪಾನ ಮಾಡುವುದರಿಂದ ಮಗುವಿನ ಆರೋಗ್ಯದಲ್ಲಿ ಆಗುವ ಧನಾತ್ಮಕ ಪರಿಣಾಮಗಳು, ಮಗುವಿನ ಬುದ್ಧಿಶಕ್ತಿ ಹೆಚ್ಚಿಸುತ್ತದೆ. ತಾಯಿಯ ಹೆರಿಗೆಯ ಅಂತರವನ್ನು ಹೊಂದುವುದರಿಂದ ಸ್ತನ, ಅಂಡಾಶಯದ ಕ್ಯಾನ್ಸರ್ ಮತ್ತು ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ. ಮಗುವಿಗೆ ಹಾಲುಣಿಸುವಿಕೆಯಿಂದ ಸಾಂಕ್ರಾಮಿಕ ಕಾಯಿಲೆಗಳು, ಅತೀಸಾರ, ಉಸಿರಾಟದ ಸೋಂಕುಗಳನ್ನು ದೂರವಿಡಬಹುದು ಎಂದು ತಿಳಿಹೇಳಿದರು.ಆರ್.ಎಂ.ಒ.ಡಾ.ಸುರೇಶ ಚವ್ಹಾಣ ಮಾತನಾಡಿ, ತಾಯಿ ಹಾಗೂ ತಾಯಿ ಸ್ತನ್ಯಪಾನ ಮಹತ್ವದ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ. ಹುಟ್ಟಿದ ಮಗುವಿಗೆ ಆರು ತಿಂಗಳ ತನಕ ತಾಯಿಯ ಹಾಲೊಂದನ್ನೇ ಕೊಡಬೇಕು. ತಾಯಿ ಸ್ತನ್ಯಪಾನ ಕೊಡುವುದರಿಂದ ಶೇ.25 ಶಿಶು ಮರಣ ಕಡಿಮೆ ಮಾಡಬಹುದು. ಸಾರ್ವಜನಿಕರಿಗೆ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಹೆಚ್ಚು ಕಾರ್ಯಕ್ರಮ ಹಮ್ಮಿಕೊಂಡು ಸ್ತನ್ಯಪಾನದ ಮಹತ್ವವನ್ನು ಕಾರ್ಯರೂಪಕ್ಕೆ ತರಬೇಕು ಎಂದರು.ಜಿಲ್ಲಾಸ್ಪತ್ರೆಯ ಚಿಕ್ಕಮಕ್ಕಳ ತಜ್ಞ ಡಾ.ಸುಧೀರ ಚವ್ಹಾಣ ಮಾತನಾಡಿ, ಮಗುವಿನ ಸೂಕ್ತ ಆಹಾರ ಪದ್ಧತಿಗಳು ಸ್ತನ್ಯಪಾನದಿಂದ ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. ಡಬ್ಲೂಎಚ್ಒ ಮತ್ತು ಯುನಿಸೆಫ್ ಸೂಚನೆ ಪ್ರಕಾರ ಮಗು ಹುಟ್ಟಿದ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭ ಮಾಡುವುದು ಅತೀ ಅವಶ್ಯಕ ಎಂದರು.ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಕೆ.ಡಿ.ಗುಂಡಬಾವಡಿ ಮಾತನಾಡಿ, ಮಗುವಿಗೆ ತಾಯಿ ಹಾಲು ಅಮೃತವಿದ್ದಂತೆ. ಉತ್ತಮ ಪೌಷ್ಟಿಕ ಆಹಾರವನ್ನು ತಾಯಂದಿರು ಸೇವಿಸಬೇಕು. ಯಾವುದೇ ಕಾರಣಕ್ಕೂ ಮಗುವಿಗೆ ಹಾಲುಣಿಸುವುದನ್ನು ತಪ್ಪಿಸಬಾರದು. ಮಗುವಿಗೆ ಪದೇ ಪದೇ ಹಾಲುಣಿಸುವುದರಿಂದ ತಾಯಿಯ ಹಾಲು ಹೆಚ್ಚಾಗುತ್ತದೆ. ಎಲ್ಲ ತಾಯಂದಿರು ತಮ್ಮ ಮಗುವಿಗೆ ಹುಟ್ಟಿನಿಂದ ೨ ವರ್ಷದವರೆಗೆ ಹಾಲುಣಿಸಬೇಕು ಎಂದು ಸಲಹೆ ನೀಡಿದರು.ಚಿಕ್ಕಮಕ್ಕಳ ತಜ್ಞ ಡಾ.ವಿನಯ, ಡಾ.ಸುನೀಲ ರೂಡಗಿ, ಡಾ.ಶೈಲಾಶ್ರೀ ರಮೇಶ ರಾಠೋಡ, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಮೊತಿಲಾಲ ಚವ್ಹಾಣ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೇಖಾ ದಶವಂತ, ಐಇಸಿ ವಿಭಾಗ (ಡಿಇಒ) ಕುಮಾರ ರಾಠೋಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಶ್ರೀದೇವಿ ಮೋರೆ ಸ್ವಾಗತಿಸಿದರು. ಚಿಕ್ಕ ಮಕ್ಕಳ ತಜ್ಞೆ ಡಾ.ಅಪೂರ್ವ ವಂದಿಸಿದರು.