ಪುತ್ತೂರಿನ ದರ್ಬೆ ಸಂತ ಫಿಲೋಮಿನಾ ಕಾಲೇಜ್ (ಸ್ವಾಯತ್ತ)ನ ವತಿಯಿಂದ ಕಾಲೇಜ್‌ನ ಸ್ಪಂದನ ಸೆಮಿನಾರ್ ಹಾಲ್‌ನಲ್ಲಿ ನಡೆದ ೨೦೨೬-೨೭ನೇ ಸಾಲಿನ ಗ್ರಾಹಕ ವೇದಿಕೆ (ಕನ್‌ಸ್ಯುಮರ್ ಫಾರಂ)ನಿಂದ ವಿದ್ಯಾರ್ಥಿಗಳಲ್ಲಿ ಗ್ರಾಹಕರ ಹಕ್ಕುಗಳು, ಜವಾಬ್ದಾರಿ, ಗ್ರಾಹಕ ದೂರುಗಳ ಪರಿಹಾರಕ್ಕೆ ಲಭ್ಯವಿರುವ ವ್ಯವಸ್ಥೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಕಾರ್ಯಕ್ರಮ

ಪುತ್ತೂರು: ವಿದ್ಯಾರ್ಥಿಗಳು ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿರುವುದರ ಜೊತೆಗೆ ಜವಾಬ್ದಾರಿಯುತ ಹಾಗೂ ಜಾಗೃತ ಗ್ರಾಹಕರಾಗಿ ರೂಪುಗೊಳ್ಳಬೇಕು ಎಂದು ಮಂಗಳೂರಿನ ಗ್ರಾಹಕ ಮಾಹಿತಿ ಕೇಂದ್ರದ ಉಪಾಧ್ಯಕ್ಷ ಎಡ್ವಿನ್ ನಜಾರಿಯಸ್ ಡಿಮೆಲ್ಲೋ ಅಭಿಪ್ರಾಯಪಟ್ಟರು. ಅವರು ಪುತ್ತೂರಿನ ದರ್ಬೆ ಸಂತ ಫಿಲೋಮಿನಾ ಕಾಲೇಜ್ (ಸ್ವಾಯತ್ತ)ನ ವತಿಯಿಂದ ಕಾಲೇಜ್‌ನ ಸ್ಪಂದನ ಸೆಮಿನಾರ್ ಹಾಲ್‌ನಲ್ಲಿ ನಡೆದ ೨೦೨೬-೨೭ನೇ ಸಾಲಿನ ಗ್ರಾಹಕ ವೇದಿಕೆ (ಕನ್‌ಸ್ಯುಮರ್ ಫಾರಂ)ನಿಂದ ವಿದ್ಯಾರ್ಥಿಗಳಲ್ಲಿ ಗ್ರಾಹಕರ ಹಕ್ಕುಗಳು, ಜವಾಬ್ದಾರಿ, ಗ್ರಾಹಕ ದೂರುಗಳ ಪರಿಹಾರಕ್ಕೆ ಲಭ್ಯವಿರುವ ವ್ಯವಸ್ಥೆಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಗೌರವ ಅತಿಥಿಯಾಗಿ ಉಪಸ್ಥಿತರಿದ್ದ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಕಾರ್ಯದರ್ಶಿ ಡಿ.ಆರ್. ಸುನಂದಾ ಮಾತನಾಡಿ ದೈನಂದಿನ ಬದುಕಿನಲ್ಲಿ ಗ್ರಾಹಕ ಜಾಗೃತಿಯ ಮಹತ್ವ, ಗ್ರಾಹಕರ ಸಮಸ್ಯೆ, ದೂರುಗಳನ್ನು ಪರಿಹರಿಸುವಲ್ಲಿ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರಗಳ ಪಾತ್ರಗಳ ಬಗ್ಗೆ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜ್‌ನ ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೊಂತೆರೊ ಅವರು ಗ್ರಾಹಕ ವೇದಿಕೆಯ ಉಪಕ್ರಮವನ್ನು ಶ್ಲಾಘಿಸಿ, ವೇದಿಕೆಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಅದರ ಉದ್ದೇಶಗಳನ್ನು ಸಾಕಾರಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ೨೦೨೬-೨೭ನೇ ಸಾಲಿನಲ್ಲಿ ಗ್ರಾಹಕ ವೇದಿಕೆ ಹಮ್ಮಿಕೊಳ್ಳಲಿರುವ ವಿವಿಧ ಚಟುವಟಿಕೆಗಳ ಕಾರ್ಯಯೋಜನೆಯನ್ನು ಕಿರುಚಿತ್ರ ಪ್ರದರ್ಶನದ ಮೂಲಕ ಅನಾವರಣಗೊಳಿಸಲಾಯಿತು.

ಶಿಲ್ಪಾ ಇ. ಸ್ವಾಗತಿಸಿದರು. ವಿಸ್ಮಿತ್ ವಂದಿಸಿದರು. ಅಪೂರ್ವ ನಿರೂಪಿಸಿದರು. ಗ್ರಾಹಕ ವೇದಿಕೆಯ ಸಂಯೋಜಕಿ ಸ್ವಾತಿ ಶೆಟ್ಟಿ ಡಿ. ಹಾಗೂ ಕಿಶೋರ್ ಕುಮಾರ್ ರೈ ಕಾರ್ಯಕ್ರಮವನ್ನು ಸಂಯೋಜಿಸಿದರು.