ಬಿರುಸಿನ ಗಾಳಿ ಮಳೆಗೆ ಮನೆ ಕುಸಿತದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಆಕಾಶಭವನದ ಕಾಪಿಗುಡ್ಡೆ ನಿವಾಸಿ ಭವಾನಿ ಅವರ ನಿವಾಸಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಶನಿವಾರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು.

ಮೂಲ್ಕಿ: ಬಿರುಸಿನ ಗಾಳಿ ಮಳೆಗೆ ಮನೆ ಕುಸಿತದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಆಕಾಶಭವನದ ಕಾಪಿಗುಡ್ಡೆ ನಿವಾಸಿ ಭವಾನಿ ಅವರ ನಿವಾಸಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಶನಿವಾರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು. ಭವಾನಿ ಅವರ ಸಂಕಷ್ಟ ಆಲಿಸಿದ ಇನಾಯತ್ ಅಲಿ ಅವರು ಮನೆ ಕುಸಿತದಿಂದ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಒಂದು ಮನೆಯ ನಷ್ಟ ಎಂದರೆ ಕೇವಲ ಕಟ್ಟಡದ ನಷ್ಟವಲ್ಲ, ಅದು ಕುಟುಂಬದ ಭದ್ರತೆ, ನೆಮ್ಮದಿ ಮತ್ತು ಕನಸುಗಳಿಗೆ ಉಂಟಾಗುವ ದೊಡ್ಡ ಆಘಾತವಾಗಿದೆ ಎಂದು ಹೇಳಿ ವೈಯಕ್ತಿಕ ಧನಸಹಾಯವಾಗಿ 50,000 ರು. ನೀಡಿದರು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಕುಟುಂಬಕ್ಕೆ ಅಗತ್ಯ ಸರ್ಕಾರಿ ನೆರವು ಮತ್ತು ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸುವಂತೆ ಮನವಿ ಮಾಡಿದರು. ಅಲ್ಲದೆ ಈ ಅಶಕ್ತ ಕುಟುಂಬಕ್ಕೆ ಆಕಾಶಭವನ ಶಕ್ತಿ ಫ್ರೆಂಡ್ಸ್ ಮನೆ ನಿರ್ಮಿಸಿಕೊಡಲು ಮುಂದಾಗಿದ್ದು ಆ ಕಾರ್ಯಕ್ಕೂ ನನ್ನಿಂದಾದ ನೆರವನ್ನು ನೀಡುತ್ತೇನೆ ಎಂದರು.

ಮಾಜಿ ಕಾರ್ಪೋರೇಟರ್ ದೀಪಕ್ ಪೂಜಾರಿ, ಶಕ್ತಿ ಫ್ರೆಂಡ್ಸ್ ಅಧ್ಯಕ್ಷ ರೋಹಿತ್, ಪ್ರಮೀಳಾ ಈಶ್ವ‌ರ್ ಮತ್ತು ಶಕ್ತಿ ಫ್ರೆಂಡ್ಸ್ ಪದಾಧಿಕಾರಿಗಳು ಈ ಸಂದರ್ಭ ಸ್ಥಳದಲ್ಲಿದ್ದರು.

ಕಾಡುತ್ತಿದೆ ಅನಾರೋಗ್ಯ: ಈ ಮನೆಯಲ್ಲಿ ಭವಾನಿ ಮತ್ತವರ ಮೊಮ್ಮಗಳು ಮಾತ್ರ ವಾಸಿಸುತ್ತಿದ್ದು ಮನೆಯ ಹಲವು ಭಾಗಕ್ಕೆ ಹಾನಿಯಾದ ಹಿನ್ನೆಲೆಯಲ್ಲಿ ಸುಸ್ಥಿತಿಯಲ್ಲಿರುವ ಒಂದು ಕೋಣೆಯಲ್ಲಿ ದಿನ ಕಳೆಯುವಂತಾಗಿದೆ. ಅಸೌಖ್ಯದಿಂದಾಗಿ ಭವಾನಿ ೩ ತಿಂಗಳು ಆಸ್ಪತ್ರೆಯಲ್ಲಿದ್ದರು. ನಂತರ ಕೆಲದಿನ ಪುತ್ರಿಯ ಮನೆಯಲ್ಲಿದ್ದು, ಸ್ವಂತ ಮನೆಗೆ ಮರಳಿದಾಗ ಮನೆ ಹಾನಿಗೀಡಾಗಿರುವುದು ತಿಳಿದುಬಂದಿದೆ.